ಕೋಲ್ಕತಾ : ಪಶ್ಚಿಮ ಬಂಗಾಳದ ವಿಪಕ್ಷ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಆಂತರಿಕ ಬಿಕ್ಕಟ್ಟು ಈಗ ಮತ್ತೊಂದು ಹಂತಕ್ಕೆ ತಲುಪಿದೆ. ದೀದಿ ವಿರುದ್ಧ ಬಂಡಾಯ ಸಾರಿರುವ ಟಿಎಂಸಿ ಹಿರಿಯ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರ ಪುತ್ರ ಹಾಗೂ ಹೆಸರಾಂತ ಮನೋವೈದ್ಯ ಡಾ. ಬೈದ್ಯನಾಥ್ ಘೋಷ್ ದಸ್ತಿದಾರ್ ಅವರು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಪಕ್ಷದ ಪ್ರಮುಖ ನಾಯಕರಿಗೆ ಕಾನೂನು ನೋಟಿಸ್ (ಲೀಗಲ್ ನೋಟಿಸ್) ಜಾರಿ ಮಾಡಿದ್ದಾರೆ. ಟಿಕೆಟ್ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗಿದೆ ಎಂದು ಆರೋಪಿಸಿರುವ ಅವರು, ಬಹಿರಂಗ ಕ್ಷಮೆ ಯಾಚಿಸದಿದ್ದರೆ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಸಿದ್ದಾರೆ.
ಡಾ. ಬೈದ್ಯನಾಥ್ ಪರ ವಕೀಲೆ ಪೂಜಾ ಶುಕ್ಲಾ ಅವರು ಈ ನೋಟಿಸ್ ಕಳುಹಿಸಿದ್ದು, ಇದರಲ್ಲಿ ಕೇವಲ ಮಮತಾ ಬ್ಯಾನರ್ಜಿ ಮಾತ್ರವಲ್ಲದೆ ಪಕ್ಷದ ಪ್ರಭಾವಿ ಸಂಸದರಾದ ಕಲ್ಯಾಣ್ ಬ್ಯಾನರ್ಜಿ, ಸೌಗತ ರಾಯ್, ಮಹುವಾ ಮೊಯಿತ್ರಾ ಮತ್ತು ಹಿರಿಯ ನಾಯಕಿ ಸೋನಾಲಿ ಗುಹಾ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಬಾರಾಸತ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಡಾ. ಬೈದ್ಯನಾಥ್ ಪಕ್ಷದ ಟಿಕೆಟ್ ಕೇಳಿದ್ದರು ಎಂದು ಈ ನಾಯಕರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿರುವ ಬೈದ್ಯನಾಥ್, ತಾವು ಎಂದಿಗೂ ರಾಜಕೀಯ ಆಕಾಂಕ್ಷಿಯಾಗಿರಲಿಲ್ಲ ಮತ್ತು ಯಾವುದೇ ಚುನಾವಣಾ ಟಿಕೆಟ್ ಬಯಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವೈಯಕ್ತಿಕ ನಿಂದನೆಗೆ ತೀವ್ರ ಆಕ್ಷೇಪ
ರಾಜಕೀಯ ಆರೋಪಗಳ ಜೊತೆಗೆ ತಮ್ಮ ಕುಟುಂಬದ ವಿರುದ್ಧ ಮಾಡಲಾದ ವೈಯಕ್ತಿಕ ನಿಂದನೆಗಳಿಗೂ ಡಾ. ಬೈದ್ಯನಾಥ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಡಾ.ಬೈದ್ಯನಾಥ್, ಅವರ ಸಹೋದರ ಮತ್ತು ತಾಯಿ ಕಾಕೋಲಿ ಘೋಷ್ ದಸ್ತಿದಾರ್ ಅವರು ನಿಯಮಿತವಾಗಿ ಮದ್ಯಪಾನ ಮಾಡುತ್ತಾರೆ ಎಂದು ಟಿಎಂಸಿ ನಾಯಕಿ ಸೋನಾಲಿ ಗುಹಾ ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸಮಾಜದಲ್ಲಿ ಗೌರವಾನ್ವಿತ ವೈದ್ಯಕೀಯ ವೃತ್ತಿಯಲ್ಲಿರುವ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಈ ಬೇಜವಾಬ್ದಾರಿಯುತ ಹೇಳಿಕೆಗಳಿಂದ ತೀವ್ರ ಸಾಮಾಜಿಕ ಹಾಗೂ ವೃತ್ತಿಪರ ಗೌರವಕ್ಕೆ ಧಕ್ಕೆಯಾಗಿದೆ ಎಂದು ನೋಟಿಸ್ನಲ್ಲಿ ಉಲ್ಲೇಖಿಸಿದ್ದಾರೆ.
ಐ-ಪ್ಯಾಕ್ (I-PAC) ಸಂಸ್ಥೆಯ ವಿರುದ್ಧ ಆರೋಪ
ಇದೇ ವೇಳೆ ನೋಟಿಸ್ನಲ್ಲಿ ಒಂದು ರೋಚಕ ವಿಷಯವನ್ನು ಬಹಿರಂಗಪಡಿಸಲಾಗಿದ್ದು, ತಾವು ಟಿಎಂಸಿ ನಾಯಕರ ಬಳಿ ಹೋಗಿರಲಿಲ್ಲ, ಬದಲಿಗೆ ಪಕ್ಷದ ಚುನಾವಣಾ ತಂತ್ರಗಾರಿಕೆ ನಡೆಸುವ ಐ-ಪ್ಯಾಕ್ (I-PAC) ಸಂಸ್ಥೆಯ ಪ್ರತಿನಿಧಿಗಳೇ ತಮ್ಮನ್ನು ಹಲವು ಬಾರಿ ಸಂಪರ್ಕಿಸಿದ್ದರು ಎಂದು ಡಾ. ಬೈದ್ಯನಾಥ್ ಪ್ರತಿಪಾದಿಸಿದ್ದಾರೆ. ಇತ್ತೀಚಿನ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಾರಾಸತ್ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮತ್ತು ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳ ಮೂಲಕ ಜನರ ಬಳಿಗೆ ಹೋಗುವಂತೆ ಐ-ಪ್ಯಾಕ್ ಸಿಬ್ಬಂದಿ ಹಾಗೂ ಸ್ಥಳೀಯ ವಿದ್ಯಾರ್ಥಿ ನಾಯಕರು ತಮಗೆ ನಿರಂತರವಾಗಿ ಆಮಿಷ ಒಡ್ಡಿದ್ದರು ಎಂದು ಅವರು ಆರೋಪಿಸಿದ್ದಾರೆ.
15 ದಿನಗಳ ಗಡುವು
ತಮ್ಮ ವಿರುದ್ಧದ ಎಲ್ಲಾ ಸುಳ್ಳು ಆರೋಪಗಳನ್ನು ತಕ್ಷಣವೇ ಹಿಂಪಡೆಯಬೇಕು, ಭವಿಷ್ಯದಲ್ಲಿ ತಮ್ಮ ಹೆಸರನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಬಾರದು ಮತ್ತು ಮುಂದಿನ 15 ದಿನಗಳ ಒಳಗಾಗಿ ಸಾರ್ವಜನಿಕವಾಗಿ ಸ್ಪಷ್ಟೀಕರಣ ನೀಡಿ ಕ್ಷಮೆ ಯಾಚಿಸಬೇಕು ಎಂದು ಡಾ. ಬೈದ್ಯನಾಥ್ ಟಿಎಂಸಿ ನಾಯಕರಿಗೆ ಗಡುವು ನೀಡಿದ್ದಾರೆ. ಇತ್ತೀಚಿನ ಚುನಾವಣಾ ಹಿನ್ನಡೆಯ ನಂತರ ಟಿಎಂಸಿ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು ಪಕ್ಷದ ನಾಯಕತ್ವದ ಭ್ರಷ್ಟಾಚಾರ ಹಾಗೂ ಆಡಳಿತ ಶೈಲಿಯನ್ನು ಬಹಿರಂಗವಾಗಿ ಟೀಕಿಸಿ, ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ತಾಯಿಯ ರಾಜಕೀಯ ಬಂಡಾಯದ ಬೆನ್ನಲ್ಲೇ ಮಗ ಈಗ ಮಮತಾ ಬ್ಯಾನರ್ಜಿ ವಿರುದ್ಧವೇ ಕಾನೂನು ಸಮರ ಸಾರಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ವಿಪಕ್ಷಗಳ ಇಂಡಿಯಾ ಒಕ್ಕೂಟದಲ್ಲಿ ಬಿರುಕು? ರಾಹುಲ್ ಗಾಂಧಿ ʼಆಲಿಂಗನʼ ಹೇಳಿಕೆಗೆ ಎಡಪಕ್ಷಗಳ ಆಕ್ರೋಶ!



















