ನವದೆಹಲಿ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾಷಣದ ಆಡಿಯೋವೊಂದು ಈಗ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ವಿಪಕ್ಷಗಳ ‘ಇಂಡಿಯಾ’ (INDIA) ಒಕ್ಕೂಟದ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬೀದಿಗೆ ತಂದಿದೆ. ಜೂ.8ರಂದು ನಡೆದ ಇಂಡಿಯಾ ಒಕ್ಕೂಟದ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಕೇರಳದ ಮಾಜಿ ಮುಖ್ಯಮಂತ್ರಿ, ಸಿಪಿಎಂ ಹಿರಿಯ ನಾಯಕ ಪಿಣರಾಯಿ ವಿಜಯನ್ ಅವರನ್ನು ಆಲಿಂಗಿಸಿಕೊಳ್ಳಲು ನಿರಾಕರಿಸಿದ ಆಡಿಯೋ ತುಣುಕು ಬಹಿರಂಗಗೊಂಡಿದ್ದು, ಇದು ಎಡಪಕ್ಷಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿ ಹೇಳಿದ್ದೇನು?
ಇಂಡಿಯಾ ಒಕ್ಕೂಟದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, “ನಮ್ಮ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿವೆ. ನೀವು ನನ್ನನ್ನು ಕೇರಳದ ಮಾಜಿ ಮುಖ್ಯಮಂತ್ರಿಗಳನ್ನು ಹೋಗಿ ಆಲಿಂಗಿಸಿಕೊಳ್ಳಲು ಹೇಳಿದರೆ, ಅದನ್ನು ಮಾಡಲು ನನ್ನಿಂದ ಸಾಧ್ಯವಿಲ್ಲ. ನಾನು ಅದನ್ನು ಮಾಡುವುದೂ ಇಲ್ಲ. ಏಕೆಂದರೆ ಅವರೊಂದಿಗೆ ನನಗೆ ಸದ್ಯ ರಾಜಕೀಯ ಹೋರಾಟ ನಡೆಯುತ್ತಿದೆ” ಎಂದು ಹೇಳಿರುವುದು ಆಡಿಯೋದಲ್ಲಿ ದಾಖಲಾಗಿದೆ. ರಾಷ್ಟ್ರ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡಿದ್ದರೂ, ಕೇರಳದಲ್ಲಿ ಇತ್ತೀಚೆಗಷ್ಟೇ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರವನ್ನು ಉರುಳಿಸಿ ಕಾಂಗ್ರೆಸ್ ಅಧಿಕಾರ ಹಿಡಿದಿರುವುದು ಈ ಇಬ್ಬರು ನಾಯಕರ ನಡುವಿನ ರಾಜಕೀಯ ವೈರತ್ವಕ್ಕೆ ಪ್ರಮುಖ ಕಾರಣವಾಗಿದೆ.
ಪಿಣರಾಯಿ ವಿಜಯನ್ ತಿರುಗೇಟು
ರಾಹುಲ್ ಗಾಂಧಿ ಅವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಿಣರಾಯಿ ವಿಜಯನ್, “ನಮ್ಮ ನಡುವೆ ಎಂದಿಗೂ ಪರಸ್ಪರ ಆಲಿಂಗಿಸಿಕೊಳ್ಳುವ ಸಂಪ್ರದಾಯ ಇರಲಿಲ್ಲ. ನಮ್ಮ ಭೇಟಿ ಕೇವಲ ಔಪಚಾರಿಕ ನಮಸ್ಕಾರ ಅಥವಾ ಹಸ್ತಲಾಘವಕ್ಕೆ ಸೀಮಿತವಾಗಿರುತ್ತದೆ. ಆದರೆ, 2018ರಲ್ಲಿ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡಿದ್ದ ಚಿತ್ರಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದವು ಎಂಬುದನ್ನು ಮರೆಯಬಾರದು” ಎಂದಿದ್ದಾರೆ. ಅಲ್ಲದೆ, ತಬ್ಬಿಕೊಳ್ಳುವ ಕ್ರಿಯೆಗಿಂತಲೂ ರಾಹುಲ್ ಗಾಂಧಿ ಅವರ ಈ ಮಾತಿನ ಹಿಂದಿರುವ ರಾಜಕೀಯ ಸಂದೇಶ ಮತ್ತು ಅವರು ಇಂಡಿಯಾ ಒಕ್ಕೂಟವನ್ನು ನೋಡುವ ದೃಷ್ಟಿಕೋನ ಕಳವಳಕಾರಿ ಎಂದು ವಿಜಯನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಮ್ಯುನಿಸ್ಟರಿಗೆ ಯಾರ ಆಲಿಂಗನವೂ ಬೇಡ: ಬೃಂದಾ ಕಾರಟ್ ವಾಗ್ದಾಳಿ
ರಾಹುಲ್ ಹೇಳಿಕೆಗೆ ಎಡಪಕ್ಷಗಳ ನಾಯಕರು ಸಾಲು ಸಾಲಾಗಿ ಆಕ್ರೋಶ ಹೊರಹಾಕುತ್ತಿದ್ದಾರೆ. ಸಿಪಿಎಂ ಹಿರಿಯ ನಾಯಕಿ ಬೃಂದಾ ಕಾರಟ್ ಮಾತನಾಡಿ, “ನಮಗೆ ಯಾರ ಆಲಿಂಗನವೂ ಬೇಡ. ಕಮ್ಯುನಿಸ್ಟರಿಗೆ ಆಲಿಂಗನಗಳ ಅಗತ್ಯವಿಲ್ಲ, ನಮಗೆ ಸ್ಪಷ್ಟ ರಾಜಕೀಯ ಬೇಕು. ರಾಹುಲ್ ಗಾಂಧಿ ಅವರೇ, ನಿಮ್ಮ ಅಪ್ಪುಗೆಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಆದರೆ ವಿಪಕ್ಷದ ನಾಯಕರಾಗಿ ಪಿಣರಾಯಿ ವಿಜಯನ್ ಅವರಂತಹ ಹಿರಿಯ ನಾಯಕರಿಗೆ ಗೌರವ ನೀಡುವುದನ್ನು ಕಲಿಯಿರಿ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಂದೆಡೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಹಾಗೂ ಸಂಸದ ಜಾನ್ ಬ್ರಿಟ್ಟಾಸ್ ಕೂಡ ರಾಹುಲ್ ಗಾಂಧಿ ನಡೆ ಒಕ್ಕೂಟದ ಒಗ್ಗಟ್ಟಿಗೆ ಧಕ್ಕೆ ತರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಲೇವಡಿ: ‘ಫೋಟೋ ಆಪ್ಗೆ ಮಾತ್ರ ಇವರ ಮೈತ್ರಿ’
ಇಂಡಿಯಾ ಒಕ್ಕೂಟದ ಈ ಆಂತರಿಕ ಕಚ್ಚಾಟವನ್ನು ಆಡಳಿತಾರೂಢ ಬಿಜೆಪಿ ತೀವ್ರವಾಗಿ ಲೇವಡಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, “ಇಂಡಿಯಾ ಒಕ್ಕೂಟದಲ್ಲಿ ಕೇವಲ ವಿಭಜನೆ ಇದೆಯೇ ಹೊರತು ಯಾವುದೇ ಸ್ಪಷ್ಟ ಗುರಿಯಿಲ್ಲ. ಇದು ಕೇವಲ ಕಾಗದದ ಮೇಲಿರುವ ಮೈತ್ರಿ ಅಷ್ಟೇ. ಫೋಟೋ ಕ್ಲಿಕ್ಕಿಸಿಕೊಳ್ಳಲು ಇವರೆಲ್ಲಾ ಒಂದಾಗಬಹುದು (ಫೋಟೋ ಆಪ್), ಆದರೆ ಇವರ ಹೃದಯಗಳು ಎಂದಿಗೂ ಒಂದಾಗಲು ಸಾಧ್ಯವಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸುತ್ತಿರುವ ವಿರೋಧ ಪಕ್ಷಗಳ ಒಕ್ಕೂಟಕ್ಕೆ, ಪ್ರಾದೇಶಿಕ ರಾಜಕಾರಣದ ವೈಷಮ್ಯಗಳು ಮತ್ತು ನಾಯಕರ ವೈಯಕ್ತಿಕ ಹೇಳಿಕೆಗಳು ಈಗ ದೊಡ್ಡ ತಲೆನೋವಾಗಿ ಪರಿಣಮಿಸಿವೆ.
ಇದನ್ನೂ ಓದಿ : ಕಾಲೇಜು ಶುಲ್ಕ ಕಟ್ಟಲಾಗದೆ ಮನನೊಂದ ವಿದ್ಯಾರ್ಥಿನಿ ಬಾವಿಗೆ ಹಾರಿ ಆತ್ಮಹತ್ಯೆ!



















