ನವದೆಹಲಿ: ಭಾರತದ ಅವಿಭಾಜ್ಯ ಅಂಗವಾಗಿರುವ ಅರುಣಾಚಲ ಪ್ರದೇಶದ ವಿವಿಧ ಪ್ರದೇಶಗಳಿಗೆ ಪದೇ ಪದೇ ತನ್ನದೇ ಆದ ಹೆಸರುಗಳನ್ನು ಇಡುವ ಮೂಲಕ ಕ್ಯಾತೆ ತೆಗೆಯುತ್ತಿದ್ದ ಚೀನಾಗೆ ಭಾರತ ಸರ್ಕಾರ ಸೂಕ್ತ ಹಾಗೂ ಪ್ರಬಲ ಪ್ರತ್ಯುತ್ತರ ನೀಡಿದೆ. ಅರುಣಾಚಲ ಪ್ರದೇಶದ ಒಟ್ಟು 27 ಪ್ರಮುಖ ಗಡಿ ಪ್ರದೇಶಗಳು, ಪರ್ವತ ಸಾಲುಗಳು ಮತ್ತು ಗ್ರಾಮಗಳನ್ನು ಭಾರತ ಗುರುತಿಸಿ, ಸರ್ವೇ ಆಫ್ ಇಂಡಿಯಾದ ಅಧಿಕೃತ ನಕ್ಷೆಯಲ್ಲಿ ಅವುಗಳ ನೈಜ ಹೆಸರುಗಳೊಂದಿಗೆ ಔಪಚಾರಿಕವಾಗಿ ಪ್ರಕಟಿಸಿದೆ. ಚೀನಾದ ಇಂತಹ ಕಲ್ಪಿತ ಹೆಸರುಗಳ ಮರುನಾಮಕರಣದ ಯತ್ನಗಳು ತೀರಾ ನಿರರ್ಥಕ ಹಾಗೂ ಹಾಸ್ಯಾಸ್ಪದ ಎಂದು ಕರೆದಿರುವ ಭಾರತ, ಅರುಣಾಚಲ ಪ್ರದೇಶ ಎಂದೆಂದಿಗೂ ಭಾರತದ ಭಾಗವಾಗಿರಲಿದೆ ಎಂದು ಪುನರುಚ್ಚರಿಸಿದೆ.
ನಕ್ಷೆಯಲ್ಲಿ ಸ್ಥಾನ ಪಡೆದ ಐತಿಹಾಸಿಕ ಸ್ಥಳಗಳು ಯಾವುವು?
ಸರ್ವೇ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ನೂತನ ಅಧಿಕೃತ ನಕ್ಷೆಯಲ್ಲಿ ಗಡಿ ನಿಯಂತ್ರಣ ರೇಖೆಯ (ಎಲ್ಎಸಿ) ಬಳಿ ಇರುವ ಅತ್ಯಂತ ಸಂವೇದನಾಶೀಲ ಪ್ರದೇಶಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. 1959ರಲ್ಲಿ ಚೀನಿ ಪಡೆಗಳು ಅತಿಕ್ರಮಣ ನಡೆಸಿದ್ದ ‘ಲಾಂಗ್ ಜು’ ಹಾಗೂ ಮೇಲ್ ಸುಬನ್ಸಿರಿ ಜಿಲ್ಲೆಯ ‘ಮಾಜಾ’ ಗ್ರಾಮವನ್ನು ಇದರಲ್ಲಿ ಅಧಿಕೃತವಾಗಿ ಸೇರಿಸಲಾಗಿದೆ. ಇವುಗಳ ಜೊತೆಗೆ 1962ರ ಭಾರತ-ಚೀನಾ ಯುದ್ಧದ ಪ್ರಮುಖ ಕಣವಾಗಿದ್ದ ‘ಥಾಗ್ ಲಾ’ ಪರ್ವತ ಮಾರ್ಗ, ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ‘ಬಿಸಾ’ ಗ್ರಾಮ, ‘ದ್ಜೋ ಲಾ’, ‘ರಿಜಾ ಲಾ’ ಮತ್ತು ‘ಪುಕುರ್ ಲಾ’ ಎತ್ತರದ ಪರ್ವತ ದಾರಿಗಳನ್ನು ನಕ್ಷೆಯಲ್ಲಿ ದಾಖಲಿಸಲಾಗಿದೆ.
ಯೋಧರ ಸ್ಮಾರಕಗಳು, ಪವಿತ್ರ ತಾಣಗಳಿಗೆ ಮಾನ್ಯತೆ
ಸಾಮಾನ್ಯ ಜನರಲ್ಲಿ ಸರಿಯಾದ ಜಾಗೃತಿ ಮತ್ತು ನಿಖರ ಮಾಹಿತಿ ಮೂಡಿಸುವ ಉದ್ದೇಶದಿಂದ ಬಿಡುಗಡೆ ಮಾಡಲಾಗಿರುವ ಈ ಪಟ್ಟಿಯಲ್ಲಿ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಮಹತ್ವವಿರುವ ಪ್ರದೇಶಗಳೂ ಸೇರಿವೆ. 1962ರ ಯುದ್ಧ ವೀರ ಹುತಾತ್ಮ ಜಸ್ವಂತ್ ಸಿಂಗ್ ರಾವತ್ ಸ್ಮರಣಾರ್ಥ ಇರುವ ತವಾಂಗ್ ರಸ್ತೆಯ ‘ಜಸ್ವಂತ್ ಗಢ’, ಮಹಾವೀರ ತ್ರಿಲೋಕ್ ಸಿಂಗ್ ಥಾಪಾ ಅವರ ಸ್ಮರಣಾರ್ಥ ಇರುವ ‘ಶೇರ್-ಎ-ಥಾಪಾ’ ಸ್ಮಾರಕ, ‘ಸಾಂಬೋ ಸರೋವರ’, ‘ಬುದ್ಧಮಂದಿರ’ ಮತ್ತು ಕಾಮ್ಲಾಂಗ್ ಅಭಯಾರಣ್ಯದ ಬಳಿ ಇರುವ ‘ಕಾಮ್ಲಾಂಗ್ ನಗರ’ಗಳನ್ನು ಅಧಿಕೃತವಾಗಿ ಗುರುತಿಸಲಾಗಿದೆ. ಇದರೊಂದಿಗೆ ಶಸ್ತ್ರಸಜ್ಜಿತ ಪಡೆಗಳ ಸಂಚಾರಕ್ಕೆ ಪ್ರಮುಖ ಲಾಜಿಸ್ಟಿಕ್ಸ್ ಕೇಂದ್ರವಾಗಿರುವ ಚಾಂಗ್ಲಾಂಗ್ ಜಿಲ್ಲೆಯ ‘ಜೈರಾಮ್ಪುರ’ ಮತ್ತು ಸಾಗರ್, ಪದ್ಮ, ಜ್ಯೋತಿನಗರ, ಬೈಸಾಖಿ, ಶಿವಾಜಿನಗರ, ಸುನ್ಪುರ ಮುಂತಾದ ಗ್ರಾಮಗಳ ಹೆಸರುಗಳನ್ನು ದಾಖಲಿಸಲಾಗಿದೆ.
ಚೀನಾದ ಸುಳ್ಳು ನಿರೂಪಣೆಗೆ ದೊಡ್ಡ ಪೆಟ್ಟು
ಅರುಣಾಚಲ ಪ್ರದೇಶವನ್ನು ‘ಜಾಂಗ್ನಾನ್’ ಎಂದು ಕರೆಯುವ ಚೀನಾ, ತನ್ನ ನಾಗರಿಕ ವ್ಯವಹಾರಗಳ ಸಚಿವಾಲಯದ ಮೂಲಕ 2017ರಲ್ಲಿ ಮೊದಲ ಬಾರಿಗೆ 6 ಸ್ಥಳಗಳಿಗೆ ತನ್ನದೇ ಹೆಸರುಗಳನ್ನು ಘೋಷಿಸಿತ್ತು. ಆ ಬಳಿಕ 2021ರಲ್ಲಿ 15 ಸ್ಥಳಗಳು ಹಾಗೂ 2023ರಲ್ಲಿ 11 ಸ್ಥಳಗಳಿಗೆ ಕಲ್ಪಿತ ಹೆಸರುಗಳನ್ನು ನೀಡುವ ಮೂಲಕ ಪ್ರದೇಶದ ಮೇಲಿನ ಹಕ್ಕನ್ನು ಪ್ರತಿಪಾದಿಸಲು ಯತ್ನಿಸಿತ್ತು. ಆದರೆ, ಇಂತಹ ಆಧಾರರಹಿತ ಕಥನಗಳನ್ನು ಸೃಷ್ಟಿಸುವುದರಿಂದ ನೈಜ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ ಹಾಗೂ ಇದು ದ್ವಿಪಕ್ಷೀಯ ಬಾಂಧವ್ಯ ಸುಧಾರಣೆಯ ಪ್ರಯತ್ನಗಳಿಗೆ ಧಕ್ಕೆ ತರುತ್ತದೆ ಎಂದು ಭಾರತ ಬಲವಾಗಿ ಎಚ್ಚರಿಸಿದೆ. ಪ್ರಸ್ತುತ ಭಾರತ ಕೈಗೊಂಡಿರುವ ಈ ದಿಟ್ಟ ಹೆಜ್ಜೆಯು ಗಡಿ ಭಾಗದಲ್ಲಿ ದೇಶದ ಸಾರ್ವಭೌಮತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.


















