ಇಸ್ಲಾಮಾಬಾದ್ : ಪಾಕಿಸ್ತಾನದ ಬ್ರಾಡ್ ಪೀಕ್ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಿಮಪಾತಕ್ಕೆ ಇಬ್ಬರು ಪರ್ವತಾರೋಹಿಗಳು ಬಲಿಯಾಗಿದ್ದು, ಜಗತ್ಪ್ರಸಿದ್ಧ ನೇಪಾಳಿ ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿದಂತೆ ಒಟ್ಟು 10 ಜನರು ನಾಪತ್ತೆಯಾಗಿದ್ದಾರೆ. ಒಮಾನ್ನ ನಧಿರಾ ಅಲ್ ಹಾರ್ತಿ ಹಾಗೂ ನೇಪಾಳದ ಪೂರ್ಣ ಬಹದ್ದೂರ್ ಗುರುಂಗ್ (ಯುಕ್ತ) ಎಂಬವರು ಈ ದುರಂತದಲ್ಲಿ ಮೃತಪಟ್ಟಿರುವುದನ್ನು ಆಲ್ಫೈನ್ ಕ್ಲಬ್ ಆಫ್ ಪಾಕಿಸ್ತಾನ್ ದೃಢಪಡಿಸಿದೆ.
ನಧಿರಾ ಅವರ ಮೃತದೇಹವನ್ನು ಹೊರ ತೆಗೆಯಲಾಗಿದ್ದು, ಹೆಲಿಕಾಪ್ಟರ್ ಮೂಲಕ ಸ್ಕರ್ದು ಪ್ರದೇಶಕ್ಕೆ ರವಾನಿಸಲಾಗಿದೆ. ಮೃತ ಯುಕ್ತ ಅವರ ದೇಹವನ್ನು ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಾಪತ್ತೆಯಾದ ಉಳಿದ ಪರ್ವತಾರೋಹಿಗಳಿಗಾಗಿ ರಕ್ಷಣಾ ಕಾರ್ಯಾಚರಣೆ ತೀವ್ರಗತಿಯಲ್ಲಿ ಮುಂದುವರಿದಿದೆ.
ಹಿಮಪಾತಕ್ಕೆ ಸಿಲುಕಿದ ತಂಡ
ಕ್ಯಾಂಪ್ 2 ಮತ್ತು ಕ್ಯಾಂಪ್ 3 ರ ನಡುವೆ ಶಿಖರದ ತುದಿಯನ್ನು ಏರಲು ಸಾಗುತ್ತಿದ್ದಾಗ ಗುರುವಾರ ಮಧ್ಯಾಹ್ನ ಕರಾಕೋರಂ ಪರ್ವತ ಶ್ರೇಣಿಯಲ್ಲಿ ಭೀಕರ ಹಿಮಪಾತ ಸಂಭವಿಸಿದೆ. ‘ನಿಮ್ಸ್ದೈ’ ಎಂದೇ ಖ್ಯಾತರಾಗಿರುವ ನಿರ್ಮಲ್ ಪುರ್ಜಾ ನೇತೃತ್ವದ 10 ಜನರ ತಂಡವು ಈ ದುರಂತದಲ್ಲಿ ಸಿಲುಕಿಕೊಂಡಿದೆ. ಘಟನೆಯ ನಂತರ ಪರ್ವತಾರೋಹಿಗಳೊಂದಿಗೆ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ. ಜತೆಗೆ, ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆಯೂ ವಿಳಂಬವಾಗಿತ್ತು.
ವಿಶ್ವದ ಎರಡನೇ ಅತಿ ಎತ್ತರದ ಕೆ-2 ಪರ್ವತದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಬ್ರಾಡ್ ಪೀಕ್, 8,051 ಮೀಟರ್ ಎತ್ತರವನ್ನು ಹೊಂದಿದೆ. ವಿಶ್ವದ 8,000 ಮೀಟರ್ಗಿಂತಲೂ ಎತ್ತರದ ಎಲ್ಲಾ ಪರ್ವತಗಳನ್ನು ಮೂರು ಬಾರಿ ಏರಿದ ಮೊದಲ ವ್ಯಕ್ತಿ ಎಂಬ ಅಪರೂಪದ ದಾಖಲೆ ಬರೆಯಲು ನಿರ್ಮಲ್ ಹೊರಟಿದ್ದರು. ದುರಂತದ ನಡುವೆಯೂ, ನಿರ್ಮಲ್ ಪುರ್ಜಾ ಅವರ ಟ್ರ್ಯಾಕಿಂಗ್ ಸಾಧನದಲ್ಲಿ ಕೆಲ ಚಲನವಲನಗಳು ಗೋಚರಿಸಿರುವುದು ರಕ್ಷಣಾ ತಂಡಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಮಾಜಿ ಬ್ರಿಟಿಷ್ ಸ್ಪೆಷಲ್ ಫೋರ್ಸಸ್ ಯೋಧರಾಗಿರುವ ನಿರ್ಮಲ್, ಈ ಕಠಿಣ ಪರಿಸ್ಥಿತಿಯನ್ನು ಗೆದ್ದು ಬರಲಿದ್ದಾರೆ ಎಂಬ ಆಶಾವಾದವನ್ನು ಅವರ ಅಭಿಮಾನಿಗಳು ಹಾಗೂ ಪರ್ವತಾರೋಹಿಗಳ ಬಳಗ ವ್ಯಕ್ತಪಡಿಸಿದೆ.
ಇದನ್ನೂ ಓದಿ : ದಯವಿಟ್ಟು ‘ಕರ್ನಾಟಕ ಬಂದ್’ ಕೈಬಿಡಿ, ಅದ್ರಿಂದ ಪರಿಹಾರ ಸಿಗಲ್ಲ : ಸಿಎಂ ಡಿಕೆಶಿ ಮನವಿ!



















