ವಾಷಿಂಗ್ಟನ್ : ಪಾಕಿಸ್ತಾನದಲ್ಲಿ 2ನೇ ಸುತ್ತಿನ ಮಾತುಕತೆ ನಡೆಯದೇ ಇದ್ದರೂ ಅಮೆರಿಕ-ಇರಾನ್ ಕದನ ವಿರಾಮವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರ್ದಿಷ್ಟಾವಧಿಗೆ ವಿಸ್ತರಿಸುವ ಮೂಲಕ ಜಗತ್ತನ್ನು ಅಚ್ಚರಿಗೊಳಿಸಿದ್ದಾರೆ.
ವಿಶೇಷವೆಂದರೆ, ಈ ಮಹತ್ವದ ರಾಜತಾಂತ್ರಿಕ ಬೆಳವಣಿಗೆಯ ಸಂಪೂರ್ಣ ಶ್ರೇಯಸ್ಸನ್ನು ಟ್ರಂಪ್ ಪಾಕಿಸ್ತಾನಕ್ಕೆ ನೀಡಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿರುವುದಾಗಿ ಟ್ರಂಪ್ ಘೋಷಿಸಿದ್ದು, ಈ ಮೂಲಕ ಪಾಕಿಸ್ತಾನವು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಇಮೇಜ್ ಬದಲಿಸಿಕೊಳ್ಳಲು ದೊಡ್ಡ ಅವಕಾಶವೊಂದನ್ನು ಬಾಚಿಕೊಂಡಿದೆ.
ಇಷ್ಟು ದಿನ ಧಾರ್ಮಿಕ ಉಗ್ರವಾದ ಮತ್ತು ಆರ್ಥಿಕ ದಿವಾಳಿತನದಿಂದಾಗಿ ಜಗತ್ತಿನ ಪಾಲಿಗೆ ‘ಸಮಸ್ಯೆಗಳ ಕೇಂದ್ರ’ ಎನಿಸಿಕೊಂಡಿದ್ದ ಪಾಕಿಸ್ತಾನ, ಈಗ ಅಮೆರಿಕ ಮತ್ತು ಇರಾನ್ನಂತಹ ಬದ್ಧ ವೈರಿಗಳ ನಡುವೆ ಸಂಧಾನಕಾರನಾಗಿ ಕಾಣಿಸಿಕೊಂಡಿದೆ. ತನ್ನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಮತ್ತು ಜಾಗತಿಕ ಹೂಡಿಕೆಯನ್ನು ಆಕರ್ಷಿಸಲು ಪಾಕಿಸ್ತಾನಕ್ಕೆ ಈಗ ಶಾಂತಿಯ ಅನಿವಾರ್ಯತೆ ಇದೆ. ಮಧ್ಯಪ್ರಾಚ್ಯದಲ್ಲಿ ಯುದ್ಧ ಮುಂದುವರಿದರೆ ತೈಲ ಬೆಲೆ ಏರಿಕೆಯಾಗಿ, ಈಗಾಗಲೇ ಕಂಗೆಟ್ಟಿರುವ ಪಾಕಿಸ್ತಾನದ ಆರ್ಥಿಕತೆ ಸಂಪೂರ್ಣ ಕುಸಿಯುವ ಭೀತಿ ಇದೆ. ಹೀಗಾಗಿ, ಅಸೀಮ್ ಮುನೀರ್ ನೇತೃತ್ವದ ಪಾಕಿಸ್ತಾನ ಈ ಸಂಘರ್ಷದಲ್ಲಿ ‘ಜವಾಬ್ದಾರಿಯುತ ರಾಷ್ಟ್ರ’ವಾಗಿ ಕಾಣಿಸಿಕೊಳ್ಳಲು ಹವಣಿಸುತ್ತಿದೆ ಎನ್ನಲಾಗಿದೆ.
ಟ್ರಂಪ್ ವಿಶ್ವಾಸ ಗೆದ್ದ ಅಸೀಮ್ ಮುನೀರ್
ಅಮೆರಿಕಕ್ಕೆ ಇರಾನ್ ಜೊತೆ ಮಾತನಾಡಲು ಒಬ್ಬ ನಂಬಿಕಸ್ಥ ಸಂಧಾನಕಾರನ ಅಗತ್ಯವಿತ್ತು. ಜೂನ್ 2025ರಲ್ಲಿ ಶ್ವೇತಭವನಕ್ಕೆ ಅನಿರೀಕ್ಷಿತ ಭೇಟಿ ನೀಡಿದ್ದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಈ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ಇತ್ತ ಇರಾನ್ ಕೂಡ ಜಿನೀವಾ ಅಥವಾ ವಿಯೆನ್ನಾದಂತಹ ಯುರೋಪಿಯನ್ ನಗರಗಳಿಗಿಂತ ಪಾಕಿಸ್ತಾನದ ಮೇಲೆ ಹೆಚ್ಚಿನ ಭರವಸೆ ಇಟ್ಟಿದೆ. 1979ರ ಕ್ರಾಂತಿಯ ನಂತರ ವಾಷಿಂಗ್ಟನ್ನಲ್ಲಿ ಇರಾನ್ನ ಹಿತಾಸಕ್ತಿಗಳನ್ನು ಪಾಕಿಸ್ತಾನವೇ ಪ್ರತಿನಿಧಿಸುತ್ತಿರುವುದು ಈ ವಿಶ್ವಾಸಕ್ಕೆ ಮುಖ್ಯ ಕಾರಣ. ಆದರೆ, ಇಸ್ಲಾಮಾಬಾದ್ನಲ್ಲಿ ಎರಡನೇ ಸುತ್ತಿನ ಮಾತುಕತೆಗಳು ನಡೆಯುತ್ತೋ, ಇಲ್ಲವೋ ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.
ಪಾಕಿಸ್ತಾನಕ್ಕೆ ಸಿಗಲಿರುವ ಲಾಭಗಳೇನು?
ಈ ಸಂಧಾನ ಯಶಸ್ವಿಯಾದರೆ ಪಾಕಿಸ್ತಾನಕ್ಕೆ ಹಲವು ಲಾಭಗಳಿವೆ. ಮೊದಲನೆಯದಾಗಿ, ಅಮೆರಿಕದೊಂದಿಗೆ ಈಗಾಗಲೇ ಹಲವು ಆರ್ಥಿಕ ಒಪ್ಪಂದಗಳನ್ನು ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಮತ್ತಷ್ಟು ರಕ್ಷಣಾ ಮತ್ತು ವಾಣಿಜ್ಯ ನೆರವು ಸಿಗುವ ಸಾಧ್ಯತೆ ಇದೆ. ಸೌದಿ ಅರೇಬಿಯಾದಿಂದ ತುರ್ತು ಸಾಲ ಪಡೆದಿರುವ ಇಸ್ಲಾಮಾಬಾದ್, ತನ್ನನ್ನು ತಾನು ಒಂದು ಶಕ್ತಿಯುತ ಪರಮಾಣು ರಾಷ್ಟ್ರವಾಗಿ ಮರುಸ್ಥಾಪಿಸಿಕೊಳ್ಳಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತಿದೆ. ಅಲ್ಲದೆ, ಚೀನಾ ಮತ್ತು ಅಮೆರಿಕ ಎರಡೂ ರಾಷ್ಟ್ರಗಳೊಂದಿಗೆ ಸಮಾನ ಸಂಬಂಧ ಹೊಂದಿರುವುದು ಪಾಕಿಸ್ತಾನದ ರಾಜತಾಂತ್ರಿಕ ಬಲವನ್ನು ಹೆಚ್ಚಿಸಿದೆ.
ಪಾಕಿಸ್ತಾನದ ಈ ಹೊಸ ‘ಶಾಂತಿದೂತ’ನ ಅವತಾರ ಭಾರತದ ಪಾಲಿಗೆ ತುಸು ಕಳವಳಕಾರಿ ಸಂಗತಿಯೇ ಆಗಿದೆ. ಪಾಕಿಸ್ತಾನವು ಜಾಗತಿಕವಾಗಿ ಏಕಾಂಗಿಯಾಗುವುದು ಭಾರತದ ಹಿತಾಸಕ್ತಿಗೆ ಪೂರಕವಾಗಿತ್ತು. ಆದರೆ ಈಗ ಅಮೆರಿಕದಂತಹ ದೊಡ್ಡ ರಾಷ್ಟ್ರಗಳು ಪಾಕಿಸ್ತಾನದ ಸೇನಾ ನಾಯಕತ್ವಕ್ಕೆ ಮಣೆ ಹಾಕುತ್ತಿರುವುದು, ದಕ್ಷಿಣ ಏಷ್ಯಾದಲ್ಲಿ ಶಕ್ತಿಯ ಸಮತೋಲನವನ್ನು ಬದಲಿಸಬಹುದು. ಅದರಲ್ಲೂ ನಾಗರಿಕ ಸರ್ಕಾರದ ಬದಲು ಸೇನೆಯೇ ಸರ್ವಸ್ವಾಮ್ಯ ಹೊಂದಿರುವ ಪಾಕಿಸ್ತಾನದ ‘ಹೈಬ್ರಿಡ್’ ಆಡಳಿತಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಸಿಗುತ್ತಿರುವುದು ಭಾರತಕ್ಕೆ ಮುಂದಿನ ದಿನಗಳಲ್ಲಿ ಸವಾಲಾಗುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಇದನ್ನೂ ಓದಿ : ನೈಟಿ ಹಾಕಿಕೊಳ್ತಿದ್ಲು ಎಂದು ಪತ್ನಿಗೇ ಬೆಂಕಿ ಹಚ್ಚಿದ ಪಾಪಿ ಪತಿ!



















