ಟೊರೊಂಟೊ/ನವದೆಹಲಿ : ಕೆನಡಾದ ಟೊರೊಂಟೊ ನಗರದಲ್ಲಿ ಕಳೆದ ವರ್ಷ ನಡೆದ ಭಾರತೀಯ ಮೂಲದ ಯುವತಿಯ ನಿಗೂಢ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಏಳು ತಿಂಗಳಿಂದ ತಲೆಮರೆಸಿಕೊಂಡಿದ್ದ ಆಕೆಯ ಸಂಗಾತಿಯನ್ನು ಕೆನಡಾ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಟೊರೊಂಟೊದ ವಿಮಾನ ನಿಲ್ದಾಣದಲ್ಲಿ ಈಗ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿರುದ್ಧ ಪ್ರಥಮ ದರ್ಜೆ ಕೊಲೆ (ಫಸ್ಟ್-ಡಿಗ್ರಿ ಮರ್ಡರ್) ಪ್ರಕರಣ ದಾಖಲಿಸಲಾಗಿದೆ.
ಬಂಧಿತ ಆರೋಪಿಯನ್ನು 32 ವರ್ಷದ ಅಬ್ದುಲ್ ಗಫೂರಿ ಎಂದು ಗುರುತಿಸಲಾಗಿದೆ. ಕಳೆದ ವರ್ಷದ ಡಿಸೆಂಬರ್ನಲ್ಲಿ ನಡೆದ 30 ವರ್ಷದ ಹಿಮಾಂಶಿ ಖುರಾನಾ ಅವರ ಹತ್ಯೆಯ ನಂತರ ಈತ ವಿದೇಶಕ್ಕೆ ಪರಾರಿಯಾಗಿದ್ದ. ಆತನನ್ನು ಪತ್ತೆ ಹಚ್ಚಲು ಟೊರೊಂಟೊ ಪೊಲೀಸರ ‘ಫ್ಯೂಜಿಟಿವ್ ಸ್ಕ್ವಾಡ್’ (ತಲೆಮರೆಸಿಕೊಂಡವರ ಪತ್ತೆ ಪಡೆ) ಮತ್ತು ‘ಹೋಮಿಸೈಡ್ ಯೂನಿಟ್’ ದೇಶೀಯ ಹಾಗೂ ಅಂತರರಾಷ್ಟ್ರೀಯ ಪೊಲೀಸ್ ಸಂಸ್ಥೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿದ್ದವು. ಈ ಜಂಟಿ ಕಾರ್ಯಾಚರಣೆಯ ಫಲವಾಗಿ ಆರೋಪಿಯನ್ನು ಕೆನಡಾಕ್ಕೆ ಕರೆತಂದು ಟೊರೊಂಟೊ ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ಬಂಧಿಸಲಾಯಿತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಆ ಕರಾಳ ರಾತ್ರಿ ನಡೆದಿದ್ದೇನು?
ಈ ಕೃತ್ಯ ನಡೆದಿದ್ದು ಕಳೆದ 2025ರ ಡಿಸೆಂಬರ್ 19ರಂದು. ಟೊರೊಂಟೊದ ಸ್ಟ್ರಾಚನ್ ಅವೆನ್ಯೂ ಮತ್ತು ವೆಲ್ಲಿಂಗ್ಟನ್ ಸ್ಟ್ರೀಟ್ ವೆಸ್ಟ್ ಪ್ರದೇಶದಿಂದ ಹಿಮಾಂಶಿ ಖುರಾನಾ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ ಪೊಲೀಸರಿಗೆ ಮರುದಿನ ಬೆಳಿಗ್ಗೆ ಅಂದರೆ ಡಿಸೆಂಬರ್ 20ರಂದು ಅದೇ ಪ್ರದೇಶದ ವಸತಿ ಗೃಹವೊಂದರಲ್ಲಿ ಹಿಮಾಂಶಿ ಶವವಾಗಿ ಪತ್ತೆಯಾಗಿದ್ದರು. ಇದು ಟೊರೊಂಟೊ ನಗರದಲ್ಲಿ ಆ ವರ್ಷ ವರದಿಯಾದ 40ನೇ ಕೊಲೆ ಪ್ರಕರಣವಾಗಿತ್ತು.
ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರಿಗೆ ಹಿಮಾಂಶಿ ಮತ್ತು ಆರೋಪಿ ಅಬ್ದುಲ್ ಗಫೂರಿ ಪ್ರೇಮ ಸಂಬಂಧದಲ್ಲಿದ್ದರು ಎಂಬ ಸಂಗತಿ ತಿಳಿದುಬಂತು. ಈ ಘಟನೆಯನ್ನು “ಆತ್ಮೀಯ ಸಂಗಾತಿಯಿಂದ ನಡೆದ ಹಿಂಸಾಚಾರ” (Intimate Partner Violence) ಎಂದು ವರ್ಗೀಕರಿಸಿದ ಪೊಲೀಸರು, ಆರೋಪಿಯ ಭಾವಚಿತ್ರವನ್ನು ಬಿಡುಗಡೆ ಮಾಡಿ ದೇಶಾದ್ಯಂತ ಆತನ ಬಂಧನಕ್ಕೆ ವಾರಂಟ್ ಹೊರಡಿಸಿದ್ದರು.
ಭಾರತೀಯ ರಾಯಭಾರ ಕಚೇರಿಯ ಕಳಕಳಿ
ಸುದ್ದಿ ಹೊರಬೀಳುತ್ತಿದ್ದಂತೆ ಟೊರೊಂಟೊದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ತೀವ್ರ ಆಘಾತ ಮತ್ತು ಸಂತಾಪ ವ್ಯಕ್ತಪಡಿಸಿತ್ತು. ಸಂತ್ರಸ್ತ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದ ರಾಯಭಾರ ಕಚೇರಿಯು, ಸ್ಥಳೀಯ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಸಾಧಿಸಿ ಕಾನೂನು ಪ್ರಕ್ರಿಯೆಗಳಿಗೆ ಸಹಕಾರ ನೀಡಿತ್ತು. ಪ್ರಸ್ತುತ ಆರೋಪಿ ಅಬ್ದುಲ್ ಗಫೂರಿಯನ್ನು ಬಂಧಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ನ್ಯಾಯಾಂಗ ವಿಚಾರಣೆಗಳು ಆರಂಭವಾಗಲಿವೆ.
ಇದನ್ನೂ ಓದಿ : ಗಮನಿಸಿ ; ಆಗಸ್ಟ್ 16ರೊಳಗೆ ಈ ಕೆಲಸ ಮಾಡದಿದ್ದರೆ ಮನೆಗೆ ಬರಲ್ಲ LPG ಸಿಲಿಂಡರ್!



















