ಚೆನ್ನೈ : ತಮಿಳುನಾಡು ವಿಧಾನಸಭಾ ಸಭಾಪತಿ ಹಾಗೂ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಹಿರಿಯ ಶಾಸಕ ಜೆ.ಸಿ.ಡಿ. ಪ್ರಭಾಕರ್ ಅವರು ನೀಡಿರುವ ಗರ್ಭಪಾತ ವಿರೋಧಿ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಚೆನ್ನೈನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು, ಗರ್ಭಪಾತವನ್ನು ಸಾರ್ವಜನಿಕವಾಗಿ ವಿರೋಧಿಸಿದ್ದಲ್ಲದೆ ಈ ವಿಷಯವನ್ನು ಮುಖ್ಯಮಂತ್ರಿ ವಿಜಯ್ ಅವರ ಗಮನಕ್ಕೆ ತರುವುದಾಗಿ ಹೇಳಿದ್ದರು. ಈ ಹೇಳಿಕೆಯು ಸಭಾಪತಿಯವರ ವೈಯಕ್ತಿಕ ಧಾರ್ಮಿಕ ನಂಬಿಕೆಯೋ ಅಥವಾ ನಟ ವಿಜಯ್ ಅವರ ಹೊಸ ಪಕ್ಷದ ವೈಚಾರಿಕ ನಿಲುವೋ ಎಂಬ ಚರ್ಚೆ ಈಗ ರಾಜ್ಯಾದ್ಯಂತ ಪ್ರಶ್ನೆ ಎದ್ದಿದೆ.
ಸಭಾಪತಿ ಪ್ರಭಾಕರ್ ನೀಡಿದ ಹೇಳಿಕೆಯೇನು?
ಆಗಸ್ಟ್ 9ರಂದು ಕೆಥೋಲಿಕ್ ಬಿಷಪ್ಗಳ ಮಂಡಳಿ ನೇತೃತ್ವದಲ್ಲಿ ನಡೆದ ‘ಮಾರ್ಚ್ ಫಾರ್ ಲೈಫ್ ಇಂಡಿಯಾ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಭಾಕರ್, “ಗರ್ಭಪಾತ ಮಾಡಿಕೊಳ್ಳಲು ಯಾರಿಗೂ ಹಕ್ಕಿಲ್ಲ. ಪ್ರತಿಯೊಂದು ಮಗುವೂ ದೇವರಿತ್ತ ವರವಾಗಿದ್ದು, ಯಾವುದೇ ಹಂತದಲ್ಲೂ ಗರ್ಭಪಾತ ನಡೆಯಬಾರದು ಎಂಬುದು ಕ್ರೈಸ್ತ ಸಮುದಾಯದ ಬಲವಾದ ನಂಬಿಕೆ,” ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ವಿಜಯ್ ಅವರು ಹೊಸ ಆಲೋಚನೆಗಳನ್ನು ಹೊಂದಿರುವ ನಾಯಕರಾಗಿದ್ದು, ಈ ವಿಷಯವನ್ನು ಅವರ ಗಮನಕ್ಕೆ ತಂದರೆ ಖಂಡಿತ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಸಭಾಪತಿಯಂತಹ ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ಇಂತಹ ನಿಲುವು ತಳೆದಿದ್ದಕ್ಕೆ ಪ್ರತಿಪಕ್ಷಗಳು ಹಾಗೂ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವಿವಾದ ಭುಗಿಲೇಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ತಮಿಳುನಾಡು ಆರೋಗ್ಯ ಸಚಿವ ಕೆ.ಜಿ. ಅರುಣ್ರಾಜ್, ರಾಜ್ಯ ಸರ್ಕಾರದ ವೈದ್ಯಕೀಯ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿ ಗರ್ಭಪಾತವು ‘ವೈದ್ಯಕೀಯ ಗರ್ಭಪಾತ ಕಾಯ್ದೆ’ (MTP Act) ಅಡಿಯಲ್ಲಿ ನಿಯಂತ್ರಿಸಲ್ಪಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಇದು ವೈದ್ಯಕೀಯ ಅಗತ್ಯವೂ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಕೂಡ ಮಹಿಳೆಯ ಸಂತಾನೋತ್ಪತ್ತಿ ಹಕ್ಕನ್ನು ಸಂವಿಧಾನದ ವಿಧಿ 21ರ ಅಡಿಯಲ್ಲಿ ಎತ್ತಿಹಿಡಿದಿರುವುದರಿಂದ, ಸಭಾಪತಿ ಅವರ ಮಾತುಗಳು ಕೇವಲ ಅವರ ವೈಯಕ್ತಿಕ ಮತ್ತು ಧಾರ್ಮಿಕ ಅಭಿಪ್ರಾಯವೇ ಹೊರತು ಸರ್ಕಾರದ ನಿಲುವಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಟಿವಿಕೆಗೆ ಸವಾಲಾದ ದ್ರಾವಿಡ ಸಿದ್ಧಾಂತ ಮತ್ತು ಧಾರ್ಮಿಕ ನಂಬಿಕೆ
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದ್ರಾವಿಡ ಚಳವಳಿ, ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಧರ್ಮ ಆಧಾರಿತ ಗರ್ಭಪಾತ ವಿರೋಧಿ ಸಿದ್ಧಾಂತವನ್ನು ಎತ್ತಿಹಿಡಿಯುವುದು ‘ಟಿವಿಕೆ’ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಿಜಯ್ ಅವರು ತಮ್ಮ ಪಕ್ಷವನ್ನು ತಮಿಳುನಾಡಿನಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಸಲು ಯತ್ನಿಸುತ್ತಿರುವಾಗ, ಇಂತಹ ವೈಚಾರಿಕ ಗೊಂದಲಗಳು ಪಕ್ಷದ ಭವಿಷ್ಯದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ಸಾಲದ ಒಂದೇ ಒಂದು EMI ಮಿಸ್ ಮಾಡಿದ್ರೆ ಏನಾಗುತ್ತದೆ? ಈ ಗಂಭೀರ ಪರಿಣಾಮ ತಿಳಿಯಿರಿ


















