ಬೆಂಗಳೂರು : ದಳಪತಿ ವಿಜಯ್ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಟಿವಿಕೆ ಪಕ್ಷ (TVK Party) ಕಟ್ಟಿ ಮೊದಲ ಬಾರಿಗೆ ಸ್ಪರ್ಧೆ ಮಾಡಿದಾಗಲೇ 100ಕ್ಕೂ ಹೆಚ್ಚು ಸೀಟ್ ಗೆದ್ದು, ಹೊಸ ಸರ್ಕಾರ ರಚಿಸೋಕೆ ರೆಡಿಯಾಗಿದ್ದಾರೆ.
ಮತ್ತೊಂದೆಡೆ ಟಿವಿಕೆ ಪಕ್ಷ ಭರ್ಜರಿ ಜಯಭೇರಿ ಬಾರಿಸಿದ ಹಿನ್ನೆಲೆ ಪಕ್ಷವನ್ನು ಇನ್ನಷ್ಟು ಬಲಪಡಿಸುವತ್ತ ನಾಯಕರುಗಳು ಕೆಲಸ ಮಾಡುತ್ತಿದ್ದು, ಸಿಎಂ ಸ್ಥಾನಕ್ಕೆ ವಿಜಯ್ ಅವರಿಗೆ ಪಟ್ಟಾಭಿಷೇಕ ಕಟ್ಟಲು ಪಕ್ಷದಲ್ಲಿ ಚರ್ಚೆಗಳು ಜೋರಾಗಿವೆ.
ಬೆಂಗಳೂರು ಸಂಪರ್ಕ – ಮತದಾರರ ಪ್ರಭಾವ :
ಟಿವಿಕೆ ಪಕ್ಷದ ಈ ಗೆಲುವಿನ ಹಿಂದೆ ಬೆಂಗಳೂರು ನಗರದಲ್ಲಿರುವ ತಮಿಳು ಭಾಷಿಕರ ಹಾಗೂ ವಿಜಯ್ ಅಭಿಮಾನಿಗಳ ಪಾತ್ರವೂ ಮಹತ್ತರವಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ವಿಶೇಷವಾಗಿ ಗಾಂಧಿನಗರ, ಶಿವಾಜಿನಗರ, ಚಾಮರಾಜಪೇಟೆ, ಬಿಟಿಎಂ, ಸಿ.ವಿ ರಾಮನ್ ನಗರ, ಪುಲಿಕೇಶಿ ನಗರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮಿಳು ಮತದಾರರ ಪ್ರಭಾವ ಹೆಚ್ಚಿದೆ.
ಕರ್ನಾಟಕದತ್ತ ಟಿವಿಕೆ ಚಿಂತನೆ :
ಈ ಹಿನ್ನೆಲೆ, ಟಿವಿಕೆ ಪಕ್ಷ ಕರ್ನಾಟಕದಲ್ಲೂ ತನ್ನ ನೆಲೆ ವಿಸ್ತರಿಸುವ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿ ದೊಡ್ಡ ಅಭಿಮಾನಿ ಬಳಗವಿರುವುದರಿಂದ ಸ್ಥಳೀಯ ಜಿಬಿಎ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್, ಬಿಜೆಪಿಗೆ ಸವಾಲು?
ಒಂದು ವೇಳೆ ಟಿವಿಕೆ ಪಕ್ಷ ಕರ್ನಾಟಕದ ನಗರ ಮಟ್ಟದ ಚುನಾವಣೆಗೆ ಕಾಲಿಟ್ಟರೆ, ಮುಖ್ಯವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಮತ ಭಾಗದಲ್ಲಿ ದೊಡ್ಡ ಮಟ್ಟದ ಪರಿಣಾಮ ಉಂಟಾಗಬಹುದು ಎಂಬ ಲೆಕ್ಕಾಚರಗಳು ವ್ಯಕ್ತವಾಗುತ್ತಿದೆ. ಈ ಮೂಲಕ ತಮಿಳುನಾಡಿನಲ್ಲಿ ಶುರುವಾದ ಟಿವಿಕೆ ಅಲೆ, ನೆರೆಯ ರಾಜ್ಯಗಳತ್ತ ವಿಸ್ತರಿಸುವ ಸೂಚನೆ ನೀಡುತ್ತಿದೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ರಾಜಕೀಯ ಸಮೀಕರಣಗಳನ್ನು ಹೇಗೆ ಬದಲಾಯಿಸುತ್ತವೆ ಎಂಬುದು ಕುತೂಹಲಕಾರಿ ವಿಷಯವಾಗಿದೆ.
ಇದನ್ನೂ ಓದಿ : ತಮಿಳುನಾಡು ರಾಜಕಾರಣದಲ್ಲಿ ಹೊಸ ಟ್ವಿಸ್ಟ್ : ವಿಜಯ್ ‘ಟಿವಿಕೆ’ಗೆ ಕಾಂಗ್ರೆಸ್ ಷರತ್ತುಬದ್ಧ ಬೆಂಬಲ



















