ಬೆಂಗಳೂರು : ಸಚಿವ ಎಚ್.ಸಿ. ಬಾಲಕೃಷ್ಣ ಅವರ ಧರ್ಮಪತ್ನಿ ರಾಧಾ ಬಾಲಕೃಷ್ಣ ಅವರ ಹೆಸರಿಗೆ 100 ಕೋಟಿಗೂ ಹೆಚ್ಚು ಮೌಲ್ಯದ ಸರ್ಕಾರಿ ಜಮೀನಿಗೆ ಏಕ ನಿವೇಶನ ಖಾತಾ ಮಾಡಿಕೊಡಲಾಗಿದೆ ಎಂದು ಆರೋಪಿಸಿ ಮಾಜಿ ಬಿಬಿಎಂಪಿ ಸದಸ್ಯ, ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಇದೇ ವೇಳೆ ಮತ್ತೊಂದು ಪ್ರಕರಣದಲ್ಲಿ ಉತ್ತರಹಳ್ಳಿ ಹೋಬಳಿಯ ಯು.ಎಂ. ಕಾವಲ್ ಗ್ರಾಮದ ಸರ್ವೆ ನಂಬರ್ 18ರಲ್ಲಿ ಸುಮಾರು 200 ಕೋಟಿಗೂ ಹೆಚ್ಚು ಮೌಲ್ಯದ 8 ಎಕರೆ ಸರ್ಕಾರಿ ಬಂಡೆ ಜಮೀನನ್ನು ಕಾಂಗ್ರೆಸ್ ಮುಖಂಡನ ಹೆಸರಿಗೆ ಪಹಣಿ ದುರಸ್ತಿ ಮಾಡಲಾಗಿದೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಸರ್ಕಾರಿ ಜಮೀನಿಗೆ ಪಹಣಿ, ಪೋಡಿ ದುರಸ್ತಿ ಆರೋಪ
ತಾವರೆಕೆರೆ ಹೋಬಳಿಯ ಕುರುಬರಹಳ್ಳಿ ಗ್ರಾಮದ ಸರ್ವೆ ನಂಬರ್ 158ರಲ್ಲಿನ ಸುಮಾರು 8 ಎಕರೆ ಸರ್ಕಾರಿ ಜಮೀನು ರಾಧಾ ಎಚ್.ಸಿ. ಬಾಲಕೃಷ್ಣ ಅವರ ಹೆಸರಿಗೆ ನೋಂದಣಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2025ರ ಏಪ್ರಿಲ್ 3ರಂದು ನೀಲಮ್ಮ, ನಾಗಮ್ಮ ಹಾಗೂ ಗಂಗೂಬಾಯಿ ಮತ್ತು ಅವರ ಕುಟುಂಬಸ್ಥರಿಂದ, ಮೇ 15ರಂದು ದಿವಂಗತ ನರಸಿಂಹಯ್ಯ ಅವರ ಪುತ್ರ ಎನ್. ಶಿವಣ್ಣ ಅವರಿಂದ ಜಮೀನು ನೋಂದಣಿ ಮಾಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಇದಾದ ಬಳಿಕ ರಾಜಕೀಯ ಒತ್ತಡಕ್ಕೆ ಒಳಗಾಗಿ ಸರ್ಕಾರಿ ಜಮೀನಿಗೆ ಪೋಡಿ ದುರಸ್ತಿ ಮಾಡಲಾಗಿದ್ದು, ಹೆಚ್ಚುವರಿಯಾಗಿ 2 ಎಕರೆ 20 ಗುಂಟೆ ಜಮೀನು ಸೇರಿಸಿ ಒಟ್ಟು 10 ಎಕರೆ 20 ಗುಂಟೆ ಜಮೀನನ್ನು ಕಾನೂನುಬಾಹಿರವಾಗಿ ಪೋಡಿ ಮಾಡಲಾಗಿದೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಈ ಜಮೀನಿಗೆ ಮಾಡಿರುವ ಏಕ ನಿವೇಶನ ಖಾತೆ ಆಧರಿಸಿ ಗುರುರಾಜ್ ಎಸ್, ಚರಣ್ ಕನ್ಸ್ಟ್ರಕ್ಷನ್ಸ್ ಹಾಗೂ ಡಿ. ಕೇಶವ ಅವರುಗಳು ಸೇರಿಕೊಂಡು ಬೃಹತ್ ಬಡಾವಣೆಯನ್ನೇ ನಿರ್ಮಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
200 ಕೋಟಿ ಮೌಲ್ಯದ ಸರ್ಕಾರಿ ಬಂಡೆ ಜಮೀನಿಗೂ ಖಾತಾ?
ಉತ್ತರಹಳ್ಳಿ ಹೋಬಳಿ ಯು.ಎಂ. ಕಾವಲ್ ಗ್ರಾಮದ ಸರ್ವೆ ನಂಬರ್ 18ರಲ್ಲಿನ ಸುಮಾರು 8 ಎಕರೆ ಸರ್ಕಾರಿ ಬಂಡೆ ಜಮೀನನ್ನು ಎಂ. ಮಂಜುನಾಥ್, ಆರ್. ಶೋಭಾ ಮಂಜುನಾಥ್, ಉಮೇಶ್ ಬಾಬು ಎಸ್.ಬಿ., ಜಲಜದಾಸ್ ಹಾಗೂ ಬಿ.ಕೆ. ರಾಘವೇಂದ್ರ ಅವರ ಹೆಸರಿಗೆ ಪಹಣಿ ದುರಸ್ತಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸದರಿ ಜಮೀನಿನ ಕಬಳಿಕೆಗೆ ಯು.ಎಂ. ಕಾವಲ್ನಿಂದ ದೂರದಲ್ಲಿರುವ ವಜ್ರ ಮುನೇಶ್ವರ ರಸ್ತೆಯಲ್ಲಿನ ಸ್ವತ್ತುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಳಸಿಕೊಂಡು ನೋಂದಣಿ ಮಾಡಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಸರ್ಕಾರಿ ಆಸ್ತಿ ಎಂದೇ ಜಿಲ್ಲಾಧಿಕಾರಿ ವರದಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು 2026ರ ಮಾರ್ಚ್ 27ರಂದು ನೀಡಿರುವ ವರದಿಯಲ್ಲಿ, ಸದರಿ ಆಸ್ತಿ ಸರ್ಕಾರಿ ಸ್ವತ್ತು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ ಎಂದು ಎನ್.ಆರ್. ರಮೇಶ್ ತಿಳಿಸಿದ್ದಾರೆ. ಆದರೂ ರಾಜಕೀಯ ಮತ್ತು ಹಣದ ಪ್ರಭಾವಕ್ಕೆ ಒಳಗಾಗಿ ಸಂಬಂಧಪಟ್ಟ ಕಂದಾಯ ಹಾಗೂ ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳು ಸರ್ಕಾರಿ ಜಮೀನಿಗೆ ಏಕ ನಿವೇಶನ ಖಾತಾ ಮಾಡಿಕೊಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಹಿಂದೆಯೇ ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ದಾಖಲೆಗಳ ಸಹಿತ ದೂರು ನೀಡಲಾಗಿತ್ತು. ಸರ್ಕಾರಿ ಸ್ವತ್ತುಗಳನ್ನು ಕೂಡಲೇ ಜಿಲ್ಲಾಡಳಿತದ ವಶಕ್ಕೆ ಪಡೆಯುವಂತೆ ಮನವಿ ಮಾಡಲಾಗಿತ್ತು ಎಂದು ರಮೇಶ್ ಹೇಳಿದ್ದಾರೆ. ಆದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೀಗ ಲೋಕಾಯುಕ್ತ ಪೊಲೀಸ್ ಮಹಾ ನಿರೀಕ್ಷಕರ ಕಚೇರಿಗೆ ಸಂಪೂರ್ಣ ದಾಖಲೆಗಳೊಂದಿಗೆ ದೂರು ಸಲ್ಲಿಸಲಾಗಿದೆ.
ಸರ್ಕಾರಿ ಭೂ ಕಬಳಿಕೆ, ನಕಲಿ ದಾಖಲೆ ತಯಾರಿಕೆ, ಭ್ರಷ್ಟಾಚಾರ ಹಾಗೂ ವಂಚನೆ ಸೇರಿದಂತೆ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ. ಅಲ್ಲದೆ, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಪ್ರಾದೇಶಿಕ ಆಯುಕ್ತರಿಗೂ ದೂರು ಸಲ್ಲಿಸಿ, ಸುಮಾರು 300 ಕೋಟಿಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತುಗಳನ್ನು ಸರ್ಕಾರದ ವಶಕ್ಕೆ ಪಡೆದು, ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಮೇಶ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಸಾರ್ವಜನಿಕವಾಗಿ ಖಡ್ಗ ಪ್ರದರ್ಶನ ಆರೋಪ : ಸಚಿವ ಲಕ್ಷ್ಮಣ್ ಸವದಿ ವಿರುದ್ಧ ರಾಜ್ಯಪಾಲರಿಗೆ ದಿನೇಶ್ ಕಲ್ಲಹಳ್ಳಿ ದೂರು!



















