ಬೆಂಗಳೂರ : ಕನಕಪುರ ರಸ್ತೆಯ ಉದೀಪಾಳ್ಯ ಗ್ರಾಮದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಎದುರು ಬಡವರು ಹಾಗೂ ದಲಿತರ ಭೂಮಿ ಹಕ್ಕುಗಳ ರಕ್ಷಣೆಗಾಗಿ ಸಮತಾ ಸೈನಿಕ ದಳ ಹಾಗೂ ಸ್ಥಳೀಯ ದಲಿತಪರ ಸಂಘಟನೆಗಳ ವತಿಯಿಂದ ನಡೆಯುತ್ತಿರುವ ಶಾಂತಿಯುತ ಅಹೋರಾತ್ರಿ ಧರಣಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆ ಗೃಹ ಸಚಿವರು ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಪ್ರತಿಭಟನೆಗೆ ಅಡ್ಡಿಪಡಿಸುವ ಉದ್ದೇಶದಿಂದ ಬೇರೆ ಬೇರೆ ಊರುಗಳಿಂದ ಕೆಲವರನ್ನು ಕರೆಸಿ, ಹೋರಾಟಗಾರರ ವಿರುದ್ಧ ಆಧಾರರಹಿತ ಹಾಗೂ ದುರುದ್ದೇಶಪೂರ್ವಕ ದೂರುಗಳನ್ನು ನೀಡಲಾಗುತ್ತಿದೆ ಎಂದು ಸಂಘಟನೆ ಆರೋಪಿಸಿದೆ.

ಪ್ರತಿಭಟನೆಯ ಸಂದರ್ಭದಲ್ಲಿ ಪಟಪಟಿ ಶ್ರೀನಿವಾಸ್, ರಾಧಾಕೃಷ್ಣ, ಮಾದಿಗ ದಂಡೋರ ಶಂಕ್ರಪ್ಪ, ವೈ. ಸಂಪಂಗಿ, ಎಂ.ಎಸ್. ಜಗನ್ನಾಥ್, ಎಂ. ವೆಂಕಟಸ್ವಾಮಿ ಸೇರಿದಂತೆ ಕೆಲವರು ಹೋರಾಟವನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಇವರಲ್ಲಿ ಕೆಲವರು ಸ್ಥಳೀಯ ನಿವಾಸಿಗಳಲ್ಲ, ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲೂ ವಾಸಿಸುವವರಲ್ಲ ಎಂದು ಸಂಘಟನೆ ತಿಳಿಸಿದೆ. ಶಾಂತಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮೇಲ್ಕಂಡ ವ್ಯಕ್ತಿಗಳ ವೈಯಕ್ತಿಕ ವಿಚಾರಗಳ ಬಗ್ಗೆ ಯಾವುದೇ ತೇಜೋವಧೆ ಮಾಡುವ ಮಾತುಗಳನ್ನು ಆಡಿಲ್ಲ. ಆದರೂ ಪೊಲೀಸ್ ಠಾಣೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸಂಪೂರ್ಣ ಸತ್ಯಕ್ಕೆ ದೂರವಾದ ದೂರುಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಕಳೆದ ಹಲವು ವರ್ಷಗಳಿಂದ ಬಡವರು ಹಾಗೂ ದಲಿತರ ಭೂಮಿ ವಿಚಾರದಲ್ಲಿ ಅನ್ಯಾಯಗಳ ವಿರುದ್ಧ ಹೋರಾಟ ಮಾಡಬೇಕಾದ ಕೆಲವರು ದಲ್ಲಾಳಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಆರೋಪವನ್ನೂ ಸಂಘಟನೆ ಮಾಡಿದೆ. ಪಟಪಟಿ ಶ್ರೀನಿವಾಸ್ ಸೇರಿದಂತೆ ಕೆಲವರ ಚಟುವಟಿಕೆಗಳು ಹಾಗೂ ಆಸ್ತಿ-ಪಾಸ್ತಿಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ. ಈ ಹಿಂದೆ ಎಂ. ವೆಂಕಟಸ್ವಾಮಿ ಅವರು ರಂಗಮ್ಮ ಎಂಬ ವೃದ್ಧೆಗೆ ನ್ಯಾಯ ಕೊಡಿಸುವುದಾಗಿ ಹೋರಾಟ ರೂಪಿಸಿ, ಬಳಿಕ ಅದನ್ನು ಅರ್ಧಕ್ಕೆ ಕೈಬಿಟ್ಟಿದ್ದರು ಎಂಬ ಆರೋಪವನ್ನೂ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಸಂವಿಧಾನಬದ್ಧವಾಗಿ ಶಾಂತಿಯುತ ಪ್ರತಿಭಟನೆ ನಡೆಸುವುದು ತಮ್ಮ ಹಕ್ಕಾಗಿದ್ದು, ಯಾವುದೇ ಆಸ್ತಿಪಾಸ್ತಿಗೆ ಹಾನಿ ಮಾಡದೆ ಕಾನೂನಿನ ವ್ಯಾಪ್ತಿಯಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ಸಮತಾ ಸೈನಿಕ ದಳ ಸ್ಪಷ್ಟಪಡಿಸಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವವರ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಹೋರಾಟಗಾರರಿಗೆ ಅಥವಾ ಪ್ರತಿಭಟನೆಗೆ ಯಾವುದೇ ಅಪರಿಚಿತರು ಅಥವಾ ಪರಿಚಿತರಿಂದ ತೊಂದರೆ ಉಂಟಾದರೆ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥರು ಹಾಗೂ ಮೇಲ್ಕಂಡ ವ್ಯಕ್ತಿಗಳೇ ನೇರ ಹೊಣೆಗಾರರಾಗಬೇಕು ಎಂದು ಸಂಘಟನೆ ಮನವಿಯಲ್ಲಿ ತಿಳಿಸಿದೆ.
ಮನವಿಯಲ್ಲಿ ಉಲ್ಲೇಖಿಸಿರುವವರ ಪೈಕಿ ಎಂ. ವೆಂಕಟಸ್ವಾಮಿ–ಮೆಜೆಸ್ಟಿಕ್, ಬೆಂಗಳೂರು; ಪಟಪಟಿ ಶ್ರೀನಿವಾಸ್–ಅತ್ತಿಬೆಲೆ, ಆನೇಕಲ್; ವೈ. ಸಂಪಂಗಿ–ಕೆಜಿಎಫ್; ಡಾ. ನವೀನ್–ಮೈಸೂರು; ಶಂಕ್ರಪ್ಪ–ಕೆ.ಆರ್. ಪುರಂ, ಬೆಂಗಳೂರು; ಆರ್.ಎಂ. ರಮೇಶ್–ಬೊಮ್ಮನಹಳ್ಳಿ; ಎಂ.ಎಸ್. ಜಗನ್ನಾಥ್–ಮಾಗಡಿ-ಸೋಲೂರು ನಿವಾಸಿಗಳೆಂದು ಸಂಘಟನೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಹೋರಾಟಕ್ಕೆ ಅಡ್ಡಿಪಡಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಆಧಾರರಹಿತ ದೂರುಗಳನ್ನು ಪರಿಗಣಿಸದೆ ಶಾಂತಿಯುತ ಅಹೋರಾತ್ರಿ ಧರಣಿಗೆ ಪೊಲೀಸ್ ರಕ್ಷಣೆ ನೀಡಬೇಕು ಹಾಗೂ ಪಟಪಟಿ ಶ್ರೀನಿವಾಸ್ ಸೇರಿದಂತೆ ಆರೋಪಿಸಲಾಗಿರುವವರ ಚಟುವಟಿಕೆಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಸಮತಾ ಸೈನಿಕ ದಳ ಹಾಗೂ ಸ್ಥಳೀಯ ದಲಿತಪರ ಸಂಘಟನೆಗಳು ಆಗ್ರಹಿಸಿವೆ. ಬಡವರು ಮತ್ತು ದಲಿತರ ಭೂಮಿ ಹಕ್ಕುಗಳ ವಿಚಾರದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸೂಕ್ತ ಭದ್ರತೆ ಒದಗಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಗೃಹ ಇಲಾಖೆ ಮತ್ತು ಬೆಂಗಳೂರು ಪೊಲೀಸರಿಗೆ ಮನವಿ ಮಾಡಲಾಗಿದೆ.
ಇದನ್ನೂ ಓದಿ : ರೇಣುಕಾಸ್ವಾಮಿ ಹತ್ಯೆ ಕೇಸ್ ; ದಚ್ಚು & ಗ್ಯಾಂಗ್ ಪಾಲಿಗೆ ಇಂದು ಬಿಗ್ ಡೇ!



















