ಬೆಂಗಳೂರು : ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗುತ್ತಿರುವ ಬೆನ್ನಲ್ಲೇ, ಸರ್ಕಾರದ ಅಧೀನ ಸಂಸ್ಥೆಯೊಂದೇ ಫುಟ್ಪಾತ್ ಮೇಲೆ ಅಂಗಡಿ ನಿರ್ಮಿಸಿರುವ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿನ ಫುಟ್ಪಾತ್ಗಳನ್ನು ಒತ್ತುವರಿ ಮಾಡಿಕೊಂಡು ಶೆಡ್, ಅಂಗಡಿ ನಿರ್ಮಿಸಿ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದ ಒತ್ತುವರಿಗಳನ್ನು ಕಳೆದೊಂದು ತಿಂಗಳಿಂದ ಜಿಬಿಎ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಆದರೆ, ಮತ್ತೊಂದು ಕಡೆ ಸರ್ಕಾರದ ಅಧೀನದಲ್ಲಿರುವ ಕೆಎಂಎಫ್ನ ನಂದಿನಿ ಹಾಲಿನ ಬೂತ್ವೊಂದು ಫುಟ್ಪಾತ್ ಮೇಲೆಯೇ ತಲೆ ಎತ್ತಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.
ಕಳೆದ ಒಂದು ವಾರದ ಹಿಂದೆ ಲಾಲ್ಬಾಗ್ ಪಶ್ಚಿಮ ಗೇಟ್ ರಸ್ತೆಯಲ್ಲಿ ರಾತ್ರೋರಾತ್ರಿ ನಂದಿನಿ ಹಾಲಿನ ಬೂತ್ ನಿರ್ಮಿಸಲಾಗಿದ್ದು, ಸಾರ್ವಜನಿಕರು ಬಳಸಬೇಕಾದ ಫುಟ್ಪಾತ್ನ್ನೇ ಒತ್ತುವರಿ ಮಾಡಿಕೊಂಡು ಅಂಗಡಿ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಫುಟ್ಪಾತ್ ಒತ್ತುವರಿ ತೆರವುಗೊಳಿಸಿ ಪಾದಚಾರಿಗಳಿಗೆ ಸುಗಮ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡರ ನೇತೃತ್ವದಲ್ಲಿ ಅಭಿಯಾನ ನಡೆಯುತ್ತಿರುವಾಗಲೇ, ಸರ್ಕಾರದ ಸಂಸ್ಥೆಯೊಂದರಿಂದಲೇ ಫುಟ್ಪಾತ್ ಒತ್ತುವರಿ ಮಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಶಾಸಕರಿಂದಲೇ ತೆರವು ಸೂಚನೆ:
ಸ್ಥಳೀಯ ಶಾಸಕರ ಗಮನಕ್ಕೂ ಈ ವಿಚಾರ ಬಂದಿದ್ದು, ನಂದಿನಿ ಬೂತ್ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ. 15 ದಿನಗಳೊಳಗೆ ಅಂಗಡಿ ತೆರವುಗೊಳಿಸಬೇಕು. ಇಲ್ಲವಾದರೆ ಪೊಲೀಸರಿಗೆ ದೂರು ನೀಡಲಾಗುವುದು ಎಂದು ಸ್ಥಳೀಯ ಶಾಸಕ ಉದಯ್ ಗರುಡಚಾರ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಹಾಗಾದರೆ, ಸಾರ್ವಜನಿಕರು ಬಳಸಬೇಕಾದ ಫುಟ್ಪಾತ್ ಮೇಲೆ ನಂದಿನಿ ಬೂತ್ ನಿರ್ಮಿಸಲು ಅನುಮತಿ ನೀಡಿದವರು ಯಾರು? ಸ್ಥಳೀಯ ಶಾಸಕರ ಗಮನಕ್ಕೂ ಬಾರದೆ ರಾತ್ರೋರಾತ್ರಿ ಅಂಗಡಿ ನಿರ್ಮಾಣವಾಗಲು ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆಗಳು ಇದೀಗ ಎದ್ದಿವೆ.
ವಿದ್ಯುತ್ ಸಂಪರ್ಕ ನೀಡಿದ್ದೇಕೆ?
ಇದಕ್ಕೆ ಮತ್ತಷ್ಟು ಕುತೂಹಲ ಮೂಡಿಸಿರುವುದು ಫುಟ್ಪಾತ್ ಮೇಲೆ ಶೆಡ್ ನಿರ್ಮಾಣವಾದ ಬಳಿಕ ಅದಕ್ಕೆ ವಿದ್ಯುತ್ ಸಂಪರ್ಕ ನೀಡಿರುವ ವಿಚಾರ.
ಒಂದೆಡೆ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು, ಮತ್ತೊಂದೆಡೆ ಫುಟ್ಪಾತ್ ಮೇಲೆ ನಿರ್ಮಾಣವಾಗಿರುವ ಶೆಡ್ಗೆ ವಿದ್ಯುತ್ ಸಂಪರ್ಕ ನೀಡಿರುವ ಬೆಸ್ಕಾಂ ಅಧಿಕಾರಿಗಳು—ಇವರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತಿದ್ದಾರೆ.
ಒಂದೆಡೆ ತೆರವು, ಮತ್ತೊಂದೆಡೆ ನಿರ್ಮಾಣ!
ನಗರದಲ್ಲಿ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿರುವ ಸಣ್ಣಪುಟ್ಟ ಅಂಗಡಿ, ಶೆಡ್ಗಳ ವಿರುದ್ಧ ಜಿಬಿಎ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಾದಚಾರಿಗಳ ಹಕ್ಕಿನ ಜಾಗವನ್ನು ಮರಳಿ ಅವರಿಗೆ ನೀಡುವುದೇ ಅಭಿಯಾನದ ಉದ್ದೇಶ. ಆದರೆ ಇದೇ ಸಂದರ್ಭದಲ್ಲಿ ಪ್ರಮುಖ ರಸ್ತೆಯ ಫುಟ್ಪಾತ್ ಮೇಲೆಯೇ ನಂದಿನಿ ಬೂತ್ ನಿರ್ಮಾಣವಾಗಿರುವುದು ‘ಒಂದೆಡೆ ತೆರವು, ಮತ್ತೊಂದೆಡೆ ನಿರ್ಮಾಣ’ ಎಂಬಂತಾಗಿದೆ.
ಸ್ಥಳೀಯ ಶಾಸಕರಿಗೆ ಮಾಹಿತಿ ಇಲ್ಲದೆ ರಾತ್ರೋರಾತ್ರಿ ನಂದಿನಿ ಬೂತ್ ನಿರ್ಮಾಣದ ಹಿಂದೆ ಯಾರ ಕೈವಾಡವಿದೆ? ಸಾರ್ವಜನಿಕರ ಫುಟ್ಪಾತ್ ಮೇಲೆ ಅಂಗಡಿ ನಿರ್ಮಿಸಲು ಅನುಮತಿ ನೀಡಿದವರು ಯಾರು? ನಿಯಮ ಉಲ್ಲಂಘನೆಯಾಗಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಇಲಾಖೆಗಳು ಉತ್ತರ ನೀಡಬೇಕಿದೆ. ಫುಟ್ಪಾತ್ ಒತ್ತುವರಿ ತೆರವು ಅಭಿಯಾನಕ್ಕೆ ಸರ್ಕಾರದ ಸಂಸ್ಥೆಯೇ ಅಡ್ಡಿಯಾಗದಂತೆ, ನಿಯಮ ಎಲ್ಲರಿಗೂ ಒಂದೇ ಎಂಬ ಸಂದೇಶವನ್ನು ಜಿಬಿಎ ನೀಡಬೇಕಿದೆ.
ಇದನ್ನೂ ಓದಿ : ಅಹೋರಾತ್ರಿ ಧರಣಿಗೆ ಪೊಲೀಸ್ ರಕ್ಷಣೆ ನೀಡುವಂತೆ ಸಮತಾ ಸೈನಿಕ ದಳ ಮನವಿ!



















