ಬೆಂಗಳೂರು: ದೇಶದಲ್ಲಿ ಈಗಾಗಲೇ ಹಬ್ಬಗಳ ಸೀಸನ್ ಆರಂಭವಾಗಿದೆ. ವರಮಹಾಲಕ್ಷ್ಮೀ ಹಬ್ಬ ಮುಗಿದಿದ್ದು, ಇನ್ನೇನು ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಗಳು ಜನರ ಸಂಭ್ರಮವನ್ನು ಹೆಚ್ಚಿಸಲಿವೆ. ಹಬ್ಬಗಳ ಸಂದರ್ಭದಲ್ಲಿ ದೇಶವಾಸಿಗಳ ಮನೆಯಲ್ಲಿ ಸಿಹಿ ತಿನಿಸುಗಳನ್ನು ತಯಾರಿಸುವುದು ಸರ್ವೇಸಾಮಾನ್ಯ. ಹಬ್ಬಗಳ ಸಂದರ್ಭದಲ್ಲಿ ಸಕ್ಕರೆ ಬಳಕೆಯೂ ಗಣನೀಯವಾಗಿ ಹೆಚ್ಚಿರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡಿರುವ ಸರ್ಕಾರವು ಸಕ್ಕರೆ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಇದರಿಂದಾಗಿ ದೇಶದಲ್ಲಿ ಸಕ್ಕರೆ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಸಕ್ಕರೆಯ ಬೆಲೆಯು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆಯಲ್ಲಿ ಸುಮಾರು ಶೇ. 13ರಷ್ಟು ಏರಿಕೆ ಕಂಡುಬಂದಿದ್ದು, ಕೆ.ಜಿಗೆ 55 ರೂ. ಗಡಿ ಆಗಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು 2026ರ ಅಕ್ಟೋಬರ್ 31ರವರೆಗೆ 10 ಲಕ್ಷ ಮೆಟ್ರಿಕ್ ಟನ್ ಕಚ್ಚಾ ಸಕ್ಕರೆಯನ್ನು ಯಾವುದೇ ಆಮದು ಸುಂಕವಿಲ್ಲದೆ ಆಮದು ಮಾಡಿಕೊಳ್ಳಲು ಅನುಮತಿ ನೀಡಿದೆ. ಹಾಗಾಗಿ, ಬೆಲೆ ಇಳಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಮುಂಬರುವ ಗಣೇಶ ಚತುರ್ಥಿ, ದಸರಾ ಮತ್ತು ದೀಪಾವಳಿಯಂತಹ ಹಬ್ಬಗಳ ಸಂದರ್ಭದಲ್ಲಿ ಸಕ್ಕರೆಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಬೇಡಿಕೆಯನ್ನು ಪೂರೈಸಲು ಮತ್ತು ಬೆಲೆಗಳನ್ನು ಸ್ಥಿರವಾಗಿಡಲು ಈ ಕ್ರಮ ಕೈಗೊಳ್ಳಲಾಗಿದೆ. ಸಕ್ಕರೆಯನ್ನು ಕಾಳಸಂತೆಯಲ್ಲಿ ಬೇಕಾಬಿಟ್ಟಿ ಬೆಲೆಗೆ ಮಾರಾಟ ಮಾಡುವುದು ಮತ್ತು ಅತಿಯಾದ ಸಂಗ್ರಹಣೆಯನ್ನು ತಡೆಯಲು, ತಿಂಗಳಿಗೆ 10 ಟನ್ ಗಳಿಗಿಂತ ಹೆಚ್ಚು ಸಕ್ಕರೆ ಬಳಸುವ ಗ್ರಾಹಕರ ಮೇಲೆ ದಾಸ್ತಾನು ಮಿತಿಯನ್ನು ವಿಧಿಸಲಾಗಿದೆ. ಅಂತಹ ಸಂಸ್ಥೆಗಳು ಕೇವಲ 15 ದಿನಗಳ ಅವಧಿಗೆ ಬೇಕಾಗುವಷ್ಟು ಸಕ್ಕರೆಯನ್ನು ಮಾತ್ರ ದಾಸ್ತಾನು ಮಾಡಬಹುದಾಗಿದೆ.
ಸಾಮಾನ್ಯವಾಗಿ ಭಾರತ ಸಕ್ಕರೆ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದ್ದರೂ, ಈ ಬಾರಿ ಕಡಿಮೆ ಮಳೆಯ ಕಾರಣದಿಂದ ಕಬ್ಬಿನ ಇಳುವರಿ ಕಡಿಮೆಯಾಗಿರುವುದು ಮತ್ತು ದೇಶೀಯ ದಾಸ್ತಾನು ಕೊರತೆಯಿಂದಾಗಿ ಬೆಲೆ ಏರಿಕೆಯಾಗುತ್ತಿತ್ತು. ಸರ್ಕಾರದ ಈ ಸಮಯೋಚಿತ ಕ್ರಮವು ಗ್ರಾಹಕರಿಗೆ ಸಮಾಧಾನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.



















