ಬೆಂಗಳೂರು : ಕರ್ನಾಟಕದಲ್ಲಿ ಕೃತಕ ಪನ್ನೀರ್ ತಯಾರಿಕೆ, ಸಂಗ್ರಹಣೆ ಹಾಗೂ ಮಾರಾಟಕ್ಕೆ ಒಂದು ವರ್ಷದ ಅವಧಿಗೆ ನಿಷೇಧ ಹೇರಲಾಗಿದೆ.
ರಾಜ್ಯಾದ್ಯಂತ ಪನ್ನೀರ್ ಹೆಸರಿನಲ್ಲಿ ಹಾಲಿನ ಬದಲಾಗಿ ವಿವಿಧ ಪರ್ಯಾಯ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತಿರುವ ಅನಾಲಾಗ್ ಪನ್ನೀರ್ನ ಗುಣಮಟ್ಟ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆಹಾರ ಸುರಕ್ಷತಾ ಇಲಾಖೆ ಈ ಮಹತ್ವದ ಆದೇಶ ಹೊರಡಿಸಿದೆ.
ಆದೇಶದಂತೆ, ಕೃತಕ ಪನ್ನೀರ್ ತಯಾರಿಸುವುದು, ಸಂಗ್ರಹಿಸಿಡುವುದು ಹಾಗೂ ಮಾರಾಟ ಮಾಡುವುದು ನಿಷೇಧಿತವಾಗಿರಲಿದೆ. ಪನ್ನೀರ್ ಹೆಸರಿನಲ್ಲಿ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡುವ ಘಟಕಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಇತರೆ ಆಹಾರ ಮಳಿಗೆಗಳ ಮೇಲೂ ಆಹಾರ ಸುರಕ್ಷತಾ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ.
ನಿಷೇಧದ ಅವಧಿಯಲ್ಲಿ ನಿಯಮ ಉಲ್ಲಂಘಿಸಿ ಕೃತಕ ಪನ್ನೀರ್ ತಯಾರಿಕೆ ಅಥವಾ ಮಾರಾಟ ಮಾಡುತ್ತಿರುವುದು ಪತ್ತೆಯಾದರೆ, ಸಂಬಂಧಪಟ್ಟವರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೃತಕ ಪನ್ನೀರ್ಗೆ ಕಡಿವಾಣ ಹಾಕಿರುವ ಆಹಾರ ಸುರಕ್ಷತಾ ಇಲಾಖೆಯ ಕ್ರಮ ಮಹತ್ವ ಪಡೆದುಕೊಂಡಿದೆ. ಪನ್ನೀರ್ ಹೆಸರಿನಲ್ಲಿ ಮಾರಾಟವಾಗುವ ಉತ್ಪನ್ನಗಳ ಗುಣಮಟ್ಟದ ಕುರಿತು ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ.



















