ಅಯೋಧ್ಯೆ : ಅಯೋಧ್ಯೆಯ ಶ್ರೀ ರಾಮ ಮಂದಿರದ ಕಾಣಿಕೆ ಹಾಗೂ ದೇಣಿಗೆ ಹಣದ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಪೊಲೀಸರು, ಇಂದು(ಭಾನುವಾರ) ಬೆಳ್ಳಂಬೆಳಗ್ಗೆ ಎಲ್ಲ 8 ಆರೋಪಿಗಳ ನಿವಾಸಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕದ್ದ ಹಣ ಎಲ್ಲಿದೆ ಮತ್ತು ಅದನ್ನು ಎಲ್ಲೆಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ‘ಹಣದ ಹರಿವಿನ’ (ಮನಿ ಟ್ರಯಲ್) ಜಾಡು ಹಿಡಿದು ಹೊರಟಿರುವ ಪೊಲೀಸ್ ತಂಡಗಳು, ಸ್ಥಳೀಯ ಮ್ಯಾಜಿಸ್ಟ್ರೇಟ್ಗಳು ಮತ್ತು ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯಾಚರಣೆ ಕೈಗೊಂಡಿವೆ. ದೇವಸ್ಥಾನದ ಹುಂಡಿ ಹಣ ಎಣಿಕೆ ಮಾಡುವ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳೆದ ವಾರ ಈ ಎಂಟು ಸಿಬ್ಬಂದಿಯನ್ನು ಬಂಧಿಸಲಾಗಿತ್ತು.
ಆಸ್ತಿಪಾಸ್ತಿ, ಬ್ಯಾಂಕ್ ಖಾತೆಗಳ ಜಪ್ತಿ
ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಅಲಿಯಾಸ್ ಟಿನ್ನು ಯಾದವ್ ಬಂಧಿತ ಆರೋಪಿಗಳು. ಇವರೆಲ್ಲರೂ ಮಂದಿರದ ಹುಂಡಿ ಹಣ ಎಣಿಕೆ ಮಾಡುವ ಕಾರ್ಯದಲ್ಲಿ ತೊಡಗಿದ್ದರು. ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ಇವರ ಕುಟುಂಬ ಸದಸ್ಯರನ್ನು ತನಿಖಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ ಇವರು ಗಳಿಸಿರುವ ಸ್ಥಿರ ಹಾಗೂ ಚರ ಆಸ್ತಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತಿದ್ದಾರೆ. ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಖರೀದಿಸಲಾದ ಜಮೀನುಗಳು, ಚಿನ್ನಾಭರಣಗಳು ಮತ್ತು ಬ್ಯಾಂಕ್ ಉಳಿತಾಯ ಖಾತೆಗಳ ವಿವರಗಳನ್ನು ಕಲೆಹಾಕಲಾಗುತ್ತಿದೆ. ದಾಳಿಯ ವೇಳೆ ಟಿನ್ನು ಮತ್ತು ಮನೀಶ್ ಯಾದವ್ ಅವರ ಕುಟುಂಬಸ್ಥರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ರಾತ್ರಿ ಬೆಳಗಾಗುವುದರೊಳಗೆ ಬದಲಾದ ಜೀವನಶೈಲಿ!
ಆರೋಪಿಗಳ ಆರ್ಥಿಕ ಪರಿಸ್ಥಿತಿಯಲ್ಲಿ ದಿಢೀರ್ ಉಂಟಾಗಿರುವ ಬದಲಾವಣೆಗಳ ಬಗ್ಗೆ ಪೊಲೀಸರು ನೆರೆಹೊರೆಯವರಿಂದಲೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆರೋಪಿಗಳಲ್ಲೊಬ್ಬನಾದ ಅನುಕಲ್ಪ್ ಮಿಶ್ರಾ ಅವರ ಸೋದರಸಂಬಂಧಿ ನೇಹಾ ಮಿಶ್ರಾ ಪೊಲೀಸರಿಗೆ ಹೇಳಿಕೆ ನೀಡಿದ್ದು, ಈ ಮೊದಲು ಮಿಶ್ರಾನ ಕುಟುಂಬ ಅತ್ಯಂತ ಸಾಮಾನ್ಯ ಆರ್ಥಿಕ ಪರಿಸ್ಥಿತಿಯನ್ನು ಹೊಂದಿತ್ತು. ಆದರೆ, ಆತ ರಾಮಮಂದಿರದ ಟ್ರಸ್ಟ್ನಲ್ಲಿ ಕೆಲಸಕ್ಕೆ ಸೇರಿದ ನಂತರ ಅವರ ಜೀವನಶೈಲಿ ಸಂಪೂರ್ಣವಾಗಿ ಐಷಾರಾಮಿಯಾಗಿ ಬದಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇವರು ಹೊಸ ವಾಹನಗಳು ಅಥವಾ ಆಸ್ತಿಗಳನ್ನು ಖರೀದಿಸಿದ್ದಾರೆಯೇ ಎಂಬ ಕೋನದಲ್ಲೂ ತನಿಖೆ ಮುಂದುವರಿದಿದೆ.
ಕೋಟ್ಯಂತರ ರೂಪಾಯಿ ನಾಪತ್ತೆ, 80 ಲಕ್ಷ ವಶ
ದೇವಸ್ಥಾನದ ಲೆಕ್ಕಪತ್ರಗಳ ಪ್ರಕಾರ ಸುಮಾರು 7 ರಿಂದ 7.5 ಕೋಟಿ ರೂಪಾಯಿ ಕಾಣಿಕೆ ಹಣ ನಾಪತ್ತೆಯಾಗಿದೆ ಎಂದು ಅಂದಾಜಿಸಲಾಗಿದ್ದರೂ, ನಿಖರವಾದ ಮೊತ್ತ ಇನ್ನೂ ಬಹಿರಂಗವಾಗಿಲ್ಲ. ಇದುವರೆಗೆ ಪೊಲೀಸರು ಆರೋಪಿಗಳಿಂದ 79.85 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ಹಗರಣದ ತನಿಖೆಗಾಗಿ ರಚಿಸಲಾಗಿದ್ದ ಮೂವರು ಸದಸ್ಯರ ವಿಶೇಷ ತನಿಖಾ ತಂಡ (SIT) ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದ ಬೆನ್ನಲ್ಲೇ ಕಳ್ಳತನ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ವಿರುದ್ಧ ಕಳ್ಳತನ, ವಿಶ್ವಾಸದ್ರೋಹ, ಕದ್ದ ಮಾಲನ್ನು ಇಟ್ಟುಕೊಂಡಿರುವುದು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕಠಿಣ ಸೆಕ್ಷನ್ಗಳನ್ನು ಜರುಗಿಸಲಾಗಿದೆ. ಸೋಮವಾರ ಆರೋಪಿಗಳ ಕಸ್ಟಡಿ ಅವಧಿ ಮುಕ್ತಾಯಗೊಳ್ಳಲಿದ್ದು, ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ವಶಕ್ಕೆ ನೀಡುವಂತೆ ಕೋರುವ ಸಾಧ್ಯತೆಯಿದೆ.
ಇದನ್ನೂ ಓದಿ : ಲೋಹಗಢ್ ಕೋಟೆಯಲ್ಲಿ ಕೊಲೆ ಕೃತ್ಯದ ಮರುಸೃಷ್ಟಿ : ಸಿಯಾ, ಚೇತನ್ನನ್ನು ಸ್ಥಳಕ್ಕೆ ಕರೆದೊಯ್ದ ಪೊಲೀಸರು!



















