ಮುಂಬೈ : ಭಾರೀ ಮಳೆಯಿಂದಾಗಿ ಮುಂಬೈನ ಘಾಟ್ಕೋಪರ್ನ ಚಿರಾಗ್ ನಗರದಲ್ಲಿರುವ ಗೌಸಿಯಾ ಚಾಲ್ ಪ್ರದೇಶದಲ್ಲಿ ಬುಧವಾರ ಮುಂಜಾನೆ ಭೀಕರ ಗುಡ್ಡ ಕುಸಿತ ಸಂಭವಿಸಿದ್ದು, ಕನಿಷ್ಠ 6 ಮಂದಿ ಸಾವಿಗೀಡಾಗಿದ್ದಾರೆ. ಅವಶೇಷಗಳ ಅಡಿಯಲ್ಲಿ ನಾಲ್ಕರಿಂದ ಐದು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

ಬುಧವಾರ ಮುಂಜಾನೆ 3.48 ರ ಸುಮಾರಿಗೆ ಈ ಭೀಕರ ಘಟನೆ ಸಂಭವಿಸಿದೆ ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆಯ (BMC) ಮುಂಬೈ ಅಗ್ನಿಶಾಮಕ ದಳ ಅಂದಾಜಿಸಿದೆ. ಚಿರಾಗ್ ನಗರದ ಬೆಟ್ಟದ ಒಂದು ಭಾಗ ದಿಢೀರನೆ ಕುಸಿದು, ಕಲ್ಲು-ಮಣ್ಣಿನ ರಾಶಿಯು ಪಕ್ಕದಲ್ಲಿದ್ದ ಎರಡು ಮೂರು ಮನೆಗಳ ಮೇಲೆ ಬಿದ್ದಿದೆ. ಈ ವೇಳೆ ಮನೆಗಳಲ್ಲಿ ನಿದ್ರಿಸುತ್ತಿದ್ದ ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.
ಸುಧಾರಿತ ತಂತ್ರಜ್ಞಾನದೊಂದಿಗೆ ರಕ್ಷಣಾ ಕಾರ್ಯಾಚರಣೆ
ಘಟನೆ ನಡೆದ ತಕ್ಷಣವೇ ಮುಂಬೈ ಅಗ್ನಿಶಾಮಕ ದಳ, ಮುಂಬೈ ಪೋಲಿಸ್ ಮತ್ತು ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF) ಜಂಟಿಯಾಗಿ ರಕ್ಷಣಾ ಕಾರ್ಯ ಕೈಗೊಂಡಿವೆ. ಅವಶೇಷಗಳ ಅಡಿಯಲ್ಲಿ ಜೀವಂತವಾಗಿರುವವರನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ವಿಶೇಷ ‘ವಿಕ್ಟಿಮ್-ಡಿಟೆಕ್ಷನ್’ (ಸಂತ್ರಸ್ತರ ಪತ್ತೆ) ಕ್ಯಾಮೆರಾಗಳನ್ನು ಬಳಸುತ್ತಿವೆ. ಅವಶೇಷಗಳ ಅಡಿಯಲ್ಲಿ ಇನ್ನು ಕೆಲವರು ಸಿಲುಕಿರುವ ಶಂಕೆ ಇದ್ದು, ಅವರನ್ನು ರಕ್ಷಿಸಲು ಸತತ ಪ್ರಯತ್ನ ನಡೆಯುತ್ತಿದೆ ಎಂದು ಡಿಸಿಪಿ ಗಣೇಶ್ ಶಿಂಧೆ ತಿಳಿಸಿದ್ದಾರೆ.
ಗಾಯಾಳುಗಳ ಸ್ಥಿತಿ ಸ್ಥಿರ; ಆರ್ಥಿಕ ನೆರವು ಘೋಷಣೆ
ದುರಂತದಲ್ಲಿ ಗಾಯಗೊಂಡ 18 ವರ್ಷದ ಸೋಹೇಲ್ ಅನ್ಸಾರಿ ಮತ್ತು 14 ವರ್ಷದ ಮೊಹಮ್ಮದ್ ಅನ್ಸಾರಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ದುರಂತದ ಸ್ಥಳಕ್ಕೆ ಬಿಎಂಸಿ ಮೇಯರ್ ರಿತು ತಾವ್ಡೆ ಹಾಗೂ ಹೆಚ್ಚುವರಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಧಾಕ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ತಲಾ 3 ಲಕ್ಷ ರೂಪಾಯಿ ಪರಿಹಾರ ಧನ ನೀಡುವುದಾಗಿ ಮೇಯರ್ ಘೋಷಿಸಿದ್ದಾರೆ. ಘಾಟ್ಕೋಪರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಸಂಸತ್ತಿನಲ್ಲಿ ಚರ್ಚೆಗೆ ಸಿದ್ಧ ಎಂದ ಅಮಿತ್ ಶಾ : ವೀ ಡೋಂಟ್ ಕೇರ್ ಎಂದು ಆಫರ್ ತಿರಸ್ಕರಿಸಿದ ರಾಹುಲ್ ಗಾಂಧಿ!


















