ಪುಣೆ : ಖ್ಯಾತ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಪುಣೆ ಪೊಲೀಸರು, ಇಂದು ಇಬ್ಬರು ಪ್ರಮುಖ ಆರೋಪಿಗಳಾದ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಅಪರಾಧ ಕೃತ್ಯವನ್ನು ಮರುಸೃಷ್ಟಿ (ಕ್ರೈಮ್ ಸೀನ್ ರಿಕ್ರೀಯೇಷನ್) ಮಾಡಿದ್ದಾರೆ. ಜೂನ್ 18ರಂದು ನಡೆದಿದ್ದ ಈ ಭೀಕರ ಘಟನೆಯ ಭಿನ್ನ ಕೊಂಡಿಗಳನ್ನು ಜೋಡಿಸಲು ಮತ್ತು ಕೃತ್ಯದ ನಿಖರ ಸರಣಿಯನ್ನು ಪತ್ತೆಹಚ್ಚಲು ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಭದ್ರತಾ ಕಾರಣಗಳಿಗಾಗಿ ಈ ಪ್ರಕ್ರಿಯೆಯ ವೇಳೆ ಲೋಹಗಢ್ ಕೋಟೆಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.
ಕೃತ್ಯ ನಡೆದ ಸ್ಥಳದಲ್ಲಿ ತನಿಖೆ
ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಆರೋಪಿಗಳು ಕೋಟೆಗೆ ತಲುಪಿದ ಮಾರ್ಗ, ಅವರು ನಿಂತಿದ್ದ ಜಾಗ ಮತ್ತು ಕೃತ್ಯ ಎಸಗಿದ ಸರಣಿಯನ್ನು ಪ್ರತ್ಯಕ್ಷವಾಗಿ ಅರ್ಥಮಾಡಿಕೊಳ್ಳಲು ಈ ಮರುಸೃಷ್ಟಿ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, 20 ವರ್ಷದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಎನ್ನಲಾದ 22 ವರ್ಷದ ಚೇತನ್ ಚೌಧರಿ, 26 ವರ್ಷದ ಕೇತನ್ ಅಗರ್ವಾಲ್ನನ್ನು ತಳ್ಳಿ ಕೊಂದ ನಿಖರವಾದ ಸ್ಥಳಕ್ಕೆ ಸಿಯಾಳನ್ನು ಮೊದಲು ಕರೆದೊಯ್ಯಲಾಗಿತ್ತು. ಮತ್ತೊಬ್ಬ ಆರೋಪಿ ಚೇತನ್ನನ್ನು ಪ್ರತ್ಯೇಕವಾಗಿ ಸ್ಥಳಕ್ಕೆ ಕರೆತಂದು ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಇಡೀ ಪ್ರಕ್ರಿಯೆಯನ್ನು ಪೊಲೀಸರು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ.
ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ನಡುವೆ ನಿಶ್ಚಿತಾರ್ಥ ನಡೆದಿತ್ತು. ಆದರೆ, ತನಗೆ ಕೇತನ್ನನ್ನು ಮದುವೆಯಾಗಲು ಇಷ್ಟವಿರಲಿಲ್ಲ ಮತ್ತು ಮದುವೆ ನಿರಾಕರಿಸಿದರೆ ಕುಟುಂಬದ ಗೌರವಕ್ಕೆ ಧಕ್ಕೆ ಬರಬಹುದು ಎಂಬ ಭೀತಿಯಿಂದ ಸಿಯಾ, ತನ್ನ ಪ್ರಿಯಕರನೊಂದಿಗೆ ಸೇರಿ ಈ ಹತ್ಯೆಗೆ ಸಂಚು ರೂಪಿಸಿದ್ದಳು ಎಂಬ ಆಘಾತಕಾರಿ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಯ ದಿನ ಚೇತನ್ ಟಿಕೆಟ್ ಇಲ್ಲದೆ ಕೋಟೆಯನ್ನು ಪ್ರವೇಶಿಸಿ ಈ ಜೋಡಿಯನ್ನು ಹಿಂಬಾಲಿಸಿದ್ದನೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಗೋಯಲ್ ಕುಟುಂಬದ ತೀವ್ರ ವಿಚಾರಣೆ
ಪ್ರಕರಣದ ತನಿಖೆಯ ಭಾಗವಾಗಿ ಶನಿವಾರ ಸಿಯಾ ಗೋಯಲ್ ಅವರ ಪೋಷಕರಾದ ಪ್ರವೀಣ್ ಮತ್ತು ಪೂಜಾ ಗೋಯಲ್ ಹಾಗೂ ಸಹೋದರ ಸಾಹಿಲ್ ಅವರನ್ನು ಲೋನಾವಾಲಾ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಲಾಗಿದೆ. ಶನಿವಾರ ಬೆಳಿಗ್ಗೆ 11 ಗಂಟೆಗೆ ಆರಂಭವಾದ ವಿಚಾರಣೆ ಮತ್ತು ಹೇಳಿಕೆ ದಾಖಲಾತಿ ಪ್ರಕ್ರಿಯೆ ಸುಮಾರು 12 ಗಂಟೆಗಳ ಕಾಲ ನಡೆದಿತ್ತು. ಇದಕ್ಕೂ ಮುನ್ನ ಶುಕ್ರವಾರ ಸಾಹಿಲ್ನನ್ನು ಪೊಲೀಸರು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.
ಸಾಕ್ಷಿಗಳಿಗೆ ಸಂತ್ರಸ್ತನ ತಂದೆಯ ಮನವಿ
ಇನ್ನೊಂದೆಡೆ, ಮೃತ ಕೇತನ್ ಅಗರ್ವಾಲ್ ಕುಟುಂಬ ವಾಸಿಸುವ ಗಹುಂಜೆ ನಿವಾಸಿಗಳು ತಡರಾತ್ರಿ ಮೇಣದಬತ್ತಿ ಮೆರವಣಿಗೆ ನಡೆಸಿ ಕೇತನ್ಗೆ ನ್ಯಾಯ ನೀಡುವಂತೆ ಆಗ್ರಹಿಸಿದ್ದಾರೆ. ಮಗನ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿರುವ ಕೇತನ್ ತಂದೆ ವಿಶಾಲ್ ಅಗರ್ವಾಲ್, ಘಟನೆಯ ದಿನ ಲೋಹಗಢ್ ಕೋಟೆಯಲ್ಲಿದ್ದ ಪ್ರತ್ಯಕ್ಷದರ್ಶಿಗಳು ಪೊಲೀಸರ ಮುಂದೆ ಬಂದು ಸಾಕ್ಷಿ ನುಡಿಯಬೇಕು ಎಂದು ಮನವಿ ಮಾಡಿದ್ದಾರೆ. ಮಾಹಿತಿ ಇರುವ ಹಲವರು ತಮಗೆ ಸಂದೇಶ ಕಳುಹಿಸುತ್ತಿದ್ದಾರಾದರೂ ಪೊಲೀಸರನ್ನು ಸಂಪರ್ಕಿಸಲು ಹಿಂಜರಿಯುತ್ತಿದ್ದಾರೆ ಎಂದು ತಿಳಿಸಿರುವ ಅವರು, ಸಾಕ್ಷ್ಯ ನೀಡುವವರಿಗೆ ಯಾವುದೇ ತೊಂದರೆಯಾಗದಂತೆ ತಾವೇ ಜವಾಬ್ದಾರಿ ವಹಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಗಂಭೀರ್ ಜಾಗಕ್ಕೆ ಕೋಚ್ ಆಗಿ ರಿಕಿ ಪಾಂಟಿಂಗ್? ಶ್ರೇಯಸ್ ನಾಯಕತ್ವದ ಬಗ್ಗೆ ಮೈಕೆಲ್ ವಾನ್ ಅಚ್ಚರಿಯ ಹೇಳಿಕೆ!


















