ನವದೆಹಲಿ : ಟಾಟಾ ಸನ್ಸ್ನ ಕಾರ್ಯಾಧ್ಯಕ್ಷ ಸ್ಥಾನದಿಂದ ನಿರ್ಗಮಿಸುತ್ತಿರುವ ಎನ್. ಚಂದ್ರಶೇಖರನ್ ಅವರು ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ಕಾರ್ಪೊರೇಟ್ ದಿಗ್ಗಜರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಮುಂಬರುವ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಗೆ (AGM) ಮುನ್ನವೇ ಹುದ್ದೆಯಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸಿರುವ ಅವರು, 2026ರ ಹಣಕಾಸು ವರ್ಷದಲ್ಲಿ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ಬರೋಬ್ಬರಿ 158.6 ಕೋಟಿ ರೂ.!
26ರ ವಿತ್ತ ವರ್ಷವೇ ಸಾರ್ವಕಾಲಿಕ ಗರಿಷ್ಠ ಗಳಿಕೆ
2027ರ ಫೆಬ್ರವರಿಯಲ್ಲಿ ಪ್ರಸ್ತುತ ಅಧಿಕಾರಾವಧಿ ಮುಕ್ತಾಯಗೊಂಡ ನಂತರ ಮತ್ತೆ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಅವರು ಈಗ ಸ್ಪಷ್ಟಪಡಿಸಿದ್ದಾರೆ. ಟಾಟಾ ಸನ್ಸ್ನ ವಾರ್ಷಿಕ ವರದಿಯ ಪ್ರಕಾರ, ಚಂದ್ರಶೇಖರನ್ ಅವರು 2026ರ ಹಣಕಾಸು ವರ್ಷದಲ್ಲಿ ಪಡೆದ 158.6 ಕೋಟಿ ರೂ. ಮೊತ್ತವು, ಕಂಪನಿಯು ನಿರ್ದೇಶಕರ ವೇತನ ವಿವರ ಬಹಿರಂಗಪಡಿಸಲು ಪ್ರಾರಂಭಿಸಿದ ನಂತರ ಅವರಿಗೆ ದೊರೆತ ಅತಿ ಹೆಚ್ಚಿನ ವಾರ್ಷಿಕ ಸಂಭಾವನೆಯಾಗಿದೆ. ಈ ಒಟ್ಟು ಗಳಿಕೆಯಲ್ಲಿ 17.9 ಕೋಟಿ ರೂಪಾಯಿ ಮೂಲ ವೇತನ ಹಾಗೂ ಭತ್ಯೆಗಳಾಗಿದ್ದರೆ, ಉಳಿದ 140.7 ಕೋಟಿ ರೂಪಾಯಿ ಕಮಿಷನ್ ರೂಪದಲ್ಲಿ ಬಂದಿದೆ. ವಿಶೇಷವೆಂದರೆ, ಈ ಹಣಕಾಸು ವರ್ಷದಲ್ಲಿ ಟಾಟಾ ಸನ್ಸ್ ಮಂಡಳಿಯ ಎಲ್ಲಾ ನಿರ್ದೇಶಕರಿಗೆ ನೀಡಲಾದ ಒಟ್ಟು ಸಂಭಾವನೆಯಲ್ಲಿ ಶೇ.80ರಷ್ಟು ಪಾಲು ಚಂದ್ರಶೇಖರನ್ ಒಬ್ಬರಿಗೇ ಸಂದಿದೆ.
5 ವರ್ಷಗಳಲ್ಲಿ 685 ಕೋಟಿ ರೂ. ಮೊತ್ತ
ಕಳೆದ ಐದು ಹಣಕಾಸು ವರ್ಷಗಳಲ್ಲಿ ಚಂದ್ರಶೇಖರನ್ ಅವರ ವಾರ್ಷಿಕ ಗಳಿಕೆಯು ನಿರಂತರ ಏರಿಕೆ ಕಂಡಿದೆ. ಅವರು 2024ರ ವಿತ್ತ ವರ್ಷದಲ್ಲಿ 134.8 ಕೋಟಿ ರೂಪಾಯಿ ಮತ್ತು 2025ರಲ್ಲಿ 155 ಕೋಟಿ ರೂಪಾಯಿ ಸಂಭಾವನೆ ಗಳಿಸಿದ್ದರು. ಇದರೊಂದಿಗೆ ಕಳೆದ ಐದು ವರ್ಷಗಳಲ್ಲಿ ಅವರ ಒಟ್ಟು ಸಂಚಿತ ಗಳಿಕೆಯು ಬರೋಬ್ಬರಿ 685 ಕೋಟಿ ರೂಪಾಯಿಗೆ ತಲುಪಿದೆ. ಪ್ರಸ್ತುತ 2026ರಲ್ಲಿ ಅತ್ಯಧಿಕ ವೇತನ ಪಡೆದ ದೇಶದ ಕಾರ್ಪೊರೇಟ್ ಕಾರ್ಯನಿರ್ವಾಹಕರಲ್ಲಿ ಇವರು ಮುಂಚೂಣಿಯಲ್ಲಿದ್ದರೂ, ಹೆಚ್ಸಿಎಲ್ ಟೆಕ್ (HCLTech) ಸಿಇಒ ಸಿ. ವಿಜಯಕುಮಾರ್ ಪಡೆದ 176 ಕೋಟಿ ರೂ.ಗಿಂತ ಚಂದ್ರಶೇಖರನ್ ಅವರ ಗಳಿಕೆ ಕೊಂಚ ಕಡಿಮೆ ಎಂದು ಹೇಳಲಾಗಿದೆ.
ಇತರೆ ನಿರ್ದೇಶಕರ ಸಂಭಾವನೆ ವಿವರ
ಟಾಟಾ ಸನ್ಸ್ ಸಂಸ್ಥೆಯಲ್ಲಿ ಚಂದ್ರಶೇಖರನ್ ನಂತರದ ಸ್ಥಾನದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಅಧಿಕಾರಿಯೆಂದರೆ ಸಂಸ್ಥೆಯ ಸಿಎಫ್ಒ (ಮುಖ್ಯ ಹಣಕಾಸು ಅಧಿಕಾರಿ) ಮತ್ತು ಕಾರ್ಯಕಾರಿ ನಿರ್ದೇಶಕರಾದ ಸೌರಭ್ ಅಗರ್ವಾಲ್. ಇವರು 2026ರಲ್ಲಿ 26 ಕೋಟಿ ರೂ. ಕಮಿಷನ್ ಒಳಗೊಂಡಂತೆ ಒಟ್ಟು 34 ಕೋಟಿ ರೂಪಾಯಿ ಗಳಿಸಿದ್ದಾರೆ. ಉಳಿದ ಏಳು ನಿರ್ದೇಶಕರಲ್ಲಿ ಯಾರೊಬ್ಬರೂ ನೇರ ಸಂಭಾವನೆ ಪಡೆಯದಿದ್ದರೂ, ಆರು ಮಂಡಳಿ ಸದಸ್ಯರಿಗೆ 1 ರಿಂದ 3 ಕೋಟಿ ರೂಪಾಯಿವರೆಗೆ ಕಮಿಷನ್ ನೀಡಲಾಗಿದೆ. ವಿಶೇಷವೆಂದರೆ, ಟಿವಿಎಸ್ ಮೋಟಾರ್ಸ್ನ ಚೇರ್ಮನ್ ಎಮೆರಿಟಸ್ ವೇಣು ಶ್ರೀನಿವಾಸನ್ ಅವರು ಯಾವುದೇ ಸಂಭಾವನೆ ಅಥವಾ ಕಮಿಷನ್ ಪಡೆಯದ ಏಕೈಕ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ ; ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ರಾಜೀನಾಮೆ ; ದಶಕದ ಆಡಳಿತ ಅಂತ್ಯ



















