ಕಾಬೂಲ್ : ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇರಾನ್ ಕದನ ವಿರಾಮ ಏರ್ಪಡಿಸುವಲ್ಲಿ ಮಧ್ಯಸ್ಥಿಕೆ ವಹಿಸಿ ಬೆನ್ನುತಟ್ಟಿಕೊಂಡಿದ್ದ ಪಾಕಿಸ್ತಾನ, ಈಗ ತನ್ನದೇ ನೆರೆರಾಷ್ಟ್ರದಲ್ಲಿ ರಕ್ತದೋಕುಳಿ ಹರಿಸಿದ ಕಳಂಕಕ್ಕೆ ತುತ್ತಾಗಿದೆ. ಅಫ್ಘಾನಿಸ್ತಾನದ ಗಡಿಯುದ್ದಕ್ಕೂ ಪಾಕಿಸ್ತಾನ ಸೇನೆ ನಡೆಸಿರುವ ಭೀಕರ ‘ಡಬಲ್-ಟ್ಯಾಪ್’ ವೈಮಾನಿಕ ದಾಳಿಯಲ್ಲಿ ಕನಿಷ್ಠ 35 ನಾಗರಿಕರು ಬಲಿಯಾಗಿದ್ದಾರೆ. ಪಾಕಿಸ್ತಾನವು ಇವರನ್ನು ಉಗ್ರರೆಂದು ಬಿಂಬಿಸುತ್ತಿದ್ದರೂ, ಮೃತರ ಪೈಕಿ ಹೆಚ್ಚಿನವರು ಮಹಿಳೆಯರು ಮತ್ತು 4 ರಿಂದ 9 ವರ್ಷದೊಳಗಿನ ಚಿಕ್ಕ ಮಕ್ಕಳಾಗಿದ್ದಾರೆ ಎಂದು ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಏನಿದು ‘ಡಬಲ್-ಟ್ಯಾಪ್’ ತಂತ್ರ?
ಮಿಲಿಟರಿ ಕಾರ್ಯಾಚರಣೆಗಳಲ್ಲಿ ಅತ್ಯಂತ ವಿವಾದಾತ್ಮಕ ಮತ್ತು ಅಮಾನವೀಯ ಎಂದು ಪರಿಗಣಿಸಲಾಗುವ ‘ಡಬಲ್-ಟ್ಯಾಪ್’ ತಂತ್ರವನ್ನು ಪಾಕಿಸ್ತಾನವು ಇಲ್ಲಿ ಬಳಸಿದೆ. ಇದರ ಪ್ರಕಾರ, ಮೊದಲು ಒಂದು ಪ್ರದೇಶದ ಮೇಲೆ ಬಾಂಬ್ ದಾಳಿ ನಡೆಸಲಾಗುತ್ತದೆ. ದಾಳಿಯ ಬಳಿಕ ಅಲ್ಲಿ ಸಿಲುಕಿರುವವರನ್ನು ರಕ್ಷಿಸಲು ರಕ್ಷಣಾ ಸಿಬ್ಬಂದಿ, ವೈದ್ಯರು ಮತ್ತು ಸ್ಥಳೀಯ ನಾಗರಿಕರು ಧಾವಿಸಿ ಬಂದಾಗ, ಸರಿಯಾಗಿ ಯೋಜಿಸಿ ಅದೇ ಜಾಗದ ಮೇಲೆ ಎರಡನೇ ಬಾರಿಗೆ ದಾಳಿ ಮಾಡಲಾಗುತ್ತದೆ. ರಕ್ಷಣೆಗೆ ಬಂದವರನ್ನೇ ಗುರಿಯಾಗಿಸಿ ನಡೆಸುವ ಈ ಕ್ರೂರ ತಂತ್ರದಿಂದಾಗಿಯೇ ಪ್ರಾಣಹಾನಿಯ ಸಂಖ್ಯೆ ದಿಢೀರನೆ ಏರಿಕೆಯಾಗಿದೆ.
ಮಹಿಳೆಯರು, ಮಕ್ಕಳು ಸೇರಿ 35 ಬಲಿ
ಪಾಕಿಸ್ತಾನದ ವಾಯುಪಡೆಯ ಯುದ್ಧವಿಮಾನಗಳು ತಡರಾತ್ರಿ 12.30ರ ಸುಮಾರಿಗೆ ಆಫ್ಘಾನಿಸ್ತಾನದ ಗ್ಯಾನ, ಚಮ್ಕಾನಿ ಮತ್ತು ಮಾರಾವಾರಾ ಜಿಲ್ಲೆಗಳ ವಸತಿ ಪ್ರದೇಶಗಳು ಹಾಗೂ ಮಸೀದಿಗಳನ್ನು ಗುರಿಯಾಗಿಸಿ ಮೊದಲ ದಾಳಿ ನಡೆಸಿದವು. ಈ ಬಾಂಬ್ ದಾಳಿಯಿಂದ ಕಟ್ಟಡಗಳು ಧ್ವಂಸಗೊಂಡು ಭೀತಿ ನಿರ್ಮಾಣವಾಯಿತು. ದಾಳಿ ನಡೆದ ಕೇವಲ 25 ನಿಮಿಷಗಳ ನಂತರ, ಅಂದರೆ 12.55ಕ್ಕೆ ಸ್ಥಳೀಯರು ಧ್ವಂಸಗೊಂಡ ಅವಶೇಷಗಳ ಅಡಿಯಿಂದ ಮಹಿಳೆಯರು ಮತ್ತು ಮಕ್ಕಳನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾಗ, ಪಾಕಿಸ್ತಾನದ ವಿಮಾನಗಳು ಮತ್ತೆ ಬಂದು ಎರಡನೇ ಸುತ್ತಿನ ಬಾಂಬ್ಗಳನ್ನು ಸುರಿದವು. ಈ ದೃಶ್ಯವನ್ನು ಕಣ್ಣಾರೆ ಕಂಡ ಗಾಯಾಳುವೊಬ್ಬರು, ಕೇವಲ ನಾಗರಿಕರನ್ನು ಕೊಲ್ಲಲು ಪಾಕಿಸ್ತಾನ ಜಗತ್ತಿಗೆ ಸುಳ್ಳು ಹೇಳುತ್ತಿದೆ ಎಂದು ಆಸ್ಪತ್ರೆಯ ಹಾಸಿಗೆಯಿಂದ ಅಳಲು ತೋಡಿಕೊಂಡಿದ್ದಾರೆ.
ಉಗ್ರರ ಅಡಗುದಾಣಗಳೆಂದ ಪಾಕಿಸ್ತಾನ
ಕರಾಚಿಯಲ್ಲಿ ಇತ್ತೀಚೆಗೆ ನಡೆದ ದಾಳಿಯಲ್ಲಿ ಪಾಕಿಸ್ತಾನದ ಮೂವರು ಅರೆಸೇನಾ ಸಿಬ್ಬಂದಿ ಸಾವನ್ನಪ್ಪಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತಾವುಲ್ಲಾ ತರಾರ್ ಸಮರ್ಥಿಸಿಕೊಂಡಿದ್ದಾರೆ. ಜಮಾತ್-ಉಲ್-ಅಹ್ರಾರ್ ಮತ್ತು ಟಿಟಿಪಿ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ಈ ನಿಖರ ದಾಳಿ ನಡೆಸಲಾಗಿದ್ದು, 29 ಉಗ್ರರನ್ನು ಮಟ್ಟಹಾಕಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಆದರೆ, ತಮ್ಮ ನೆಲದಲ್ಲಿ ಯಾವುದೇ ಭಯೋತ್ಪಾದಕರಿಗೆ ಆಶ್ರಯ ನೀಡಿಲ್ಲ ಎಂದು ಕಾಬೂಲ್ ಆಡಳಿತವು ಸ್ಪಷ್ಟಪಡಿಸಿದೆ.
ಆಂತರಿಕ ವೈಫಲ್ಯ ಮರೆಮಾಚುವ ಪ್ರಯತ್ನ
ಪಾಕಿಸ್ತಾನವು ತನ್ನ ದೇಶದೊಳಗಿನ ಭದ್ರತಾ ವೈಫಲ್ಯಗಳು, ಬಲೂಚ್ ಹೋರಾಟಗಾರರ ಮೇಲಿನ ದೌರ್ಜನ್ಯಗಳು ಮತ್ತು ಮಾಧ್ಯಮಗಳ ಮೇಲಿನ ನಿರ್ಬಂಧಗಳಂತಹ ತೀವ್ರ ಆಂತರಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಇವುಗಳಿಂದ ಜಾಗತಿಕ ಗಮನವನ್ನು ಬೇರೆಡೆ ಸೆಳೆಯಲು ಭಾರತ ಮತ್ತು ಆಫ್ಘಾನಿಸ್ತಾನದ ಮೇಲೆ ಗೂಬೆ ಕೂರಿಸುವ ಹಳೆಯ ತಂತ್ರವನ್ನು ಇಸ್ಲಾಮಾಬಾದ್ ಮುಂದುವರಿಸಿದೆ ಎಂದು ರಾಜತಾಂತ್ರಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಕಳೆದ 9 ತಿಂಗಳುಗಳಲ್ಲಿ ಪಾಕಿಸ್ತಾನ ನಡೆಸಿದ ಗಡಿ ದಾಳಿಗಳಿಗೆ ಸುಮಾರು 570 ನಿರಪರಾಧಿ ಆಫ್ಘನ್ ನಾಗರಿಕರು ಬಲಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಇದಕ್ಕೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ : ಯುಪಿಎಸ್ಸಿಯಲ್ಲಿ ಭರ್ಜರಿ 450 ಹುದ್ದೆಗಳ ನೇಮಕಾತಿ : ಕೂಡಲೇ ಅರ್ಜಿ ಸಲ್ಲಿಸಿ



















