ಬೆಂಗಳೂರು : ವಿಜಯನಗರ ಪೊಲೀಸರು ಸಾಹಸಮಯ ಕಾರ್ಯಾಚರಣೆ ನಡೆಸಿ, ಕುಖ್ಯಾತ ರೌಡಿ ನಹೀಮ್ ಪಾಷ ಹಾಗೂ ಖತರ್ನಾಕ್ ಸರಗಳ್ಳ ಮುದಾಸಿರ್ನನ್ನು ಸಿನಿಮಾ ಸ್ಟೈಲ್ನಲ್ಲಿ ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಬ್ಬರು ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳನ್ನು ಪ್ರಾಣದ ಹಂಗು ತೊರೆದು ಬೆನ್ನಟ್ಟಿ ಹಿಡಿದ ಅಪರಾಧ ವಿಭಾಗದ ಸಿಬ್ಬಂದಿ ಚಂದನ್ ಕುಮಾರ್ ಮತ್ತು ಅನಿಲ್ ಕುಮಾರ್ ಅವರ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ಬಂಧಿತ ಆರೋಪಿಗಳನ್ನು A1-ನಹೀಮ್ ಪಾಷ ಅಲಿಯಾಸ್ ಪಿಂಟು ಹಾಗೂ A2 – ಮುದಾಸಿರ್ ಅಲಿಯಾಸ್ ಇಮ್ರಾನ್ ಅಲಿಯಾಸ್ ಕೋಳಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಒಟ್ಟು 23.60 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ವಿಜಯನಗರದ ರೆಂಕೋ ಲೇಔಟ್ನಲ್ಲಿ ರಾತ್ರಿ ವೇಳೆ ನಡೆದ ಸರಗಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು, ರೌಡಿ ನಹೀಮ್ ಪಾಷ ಹಾಗೂ ಮುದಾಸಿರ್ನನ್ನು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಒಂಟಿಯಾಗಿ ವಾಕಿಂಗ್ ತೆರಳುತ್ತಿದ್ದ ಮಹಿಳೆಯರನ್ನು ಹಿಂಬಾಲಿಸಿ ಕುತ್ತಿಗೆಯಲ್ಲಿದ್ದ ಸುಮಾರು 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಇಬ್ಬರು ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ.

ಬಂಧಿತ ನಹೀಮ್ ಪಾಷ ಅಲಿಯಾಸ್ ಪಿಂಟು ಬ್ಯಾಟರಾಯನಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು, ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ 9ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನೋರ್ವ ಆರೋಪಿ ಮುದಾಸಿರ್ ಅಲಿಯಾಸ್ ಇಮ್ರಾನ್ ಅಲಿಯಾಸ್ ಕೋಳಿ ವಿರುದ್ಧ ಬೆಂಗಳೂರಿನ 38ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಸರಗಳ್ಳತನ, ರಾಬರಿ ಹಾಗೂ ಸುಲಿಗೆ ಪ್ರಕರಣಗಳು ದಾಖಲಾಗಿವೆ.

ಪೊಲೀಸರ ಕಣ್ಣುತಪ್ಪಿಸಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಮುದಾಸಿರ್ ವಿರುದ್ಧ 15ಕ್ಕೂ ಹೆಚ್ಚು ಜಾಮೀನು ರಹಿತ ವಾರಂಟ್ಗಳು (NBW) ಕೂಡ ಜಾರಿಯಾಗಿದ್ದವು. ಸದ್ಯ ಇಬ್ಬರುನ್ನು ವಿಜಯನಗರ ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಮೆಟ್ರೋ ಕಾಮಗಾರಿ ವೇಳೆ ಕಾರ್ಮಿಕ ಸಾವು – BMRCL ಅಧಿಕಾರಿಗಳು ಸೇರಿ ನಾಲ್ವರ ವಿರುದ್ಧ FIR!



















