ಕೌಶಂಬಿ : ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಟೋಲ್ ಪ್ಲಾಜಾವೊಂದರಲ್ಲಿ ಅನಿಲ ತುಂಬಿದ ಎಲ್ಪಿಜಿ ಟ್ಯಾಂಕರ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದು, ಅನಿಲ ಸೋರಿಕೆಯಾಗಿ ಕೆಲವೇ ನಿಮಿಷಗಳಲ್ಲಿ ಭೀಕರವಾಗಿ ಸ್ಫೋಟಗೊಂಡಿದೆ. ಘಟನೆಯ ಎದೆಝಲ್ಲೆನಿಸುವಂತಹ ಸಿಸಿಟಿವಿ ದೃಶ್ಯಾವಳಿಗಳು ಇದೀಗ ಹೊರಬಂದಿದ್ದು, ಅಪಘಾತದ ತೀವ್ರತೆಗೆ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಗಾಯಗೊಂಡ ಇಬ್ಬರು ಟೋಲ್ ಸಿಬ್ಬಂದಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನ್ಪುರದಿಂದ ವಾರಣಾಸಿಗೆ ಪ್ರಯಾಣಿಸುತ್ತಿದ್ದ ಈ ಟ್ಯಾಂಕರ್ ಜೂನ್ 26ರಂದು ಬೆಳಗಿನ ಜಾವ ಕೋಖ್ರಾಜ್ ಪೊಲೀಸ್ ಠಾಣಾ ವ್ಯಾಪ್ತಿಯ ಸಿಹೋರಿ ಟೋಲ್ ಪ್ಲಾಜಾ ಬಳಿ ತಲುಪಿದಾಗ ಈ ದುರಂತ ಸಂಭವಿಸಿದೆ. ಅತಿ ವೇಗವಾಗಿ ಬಂದ ಟ್ಯಾಂಕರ್ ನೇರವಾಗಿ ರಸ್ತೆ ಡಿವೈಡರ್ಗೆ ಅಪ್ಪಳಿಸಿದ್ದು, ತಕ್ಷಣವೇ ಗ್ಯಾಸ್ ಸೋರಿಕೆಯಾಗಿ ಇಡೀ ಪ್ರದೇಶಕ್ಕೆ ವ್ಯಾಪಿಸಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದ ಕೆಲವೇ ಕ್ಷಣಗಳಲ್ಲಿ ಇಡೀ ಟೋಲ್ ಪ್ಲಾಜಾ ಆವರಣವು ಗ್ಯಾಸ್ನಲ್ಲಿ ಆವರಿಸಿ, ಕೆಲವೇ ಕ್ಷಣಗಳಲ್ಲಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕುವ ದೃಶ್ಯ ಸೆರೆಯಾಗಿದೆ.
ಕ್ಯಾಬಿನ್ನಲ್ಲೇ ಸಜೀವ ದಹನವಾದ ಚಾಲಕ
ಭೀಕರ ಅಪಘಾತ ಸಂಭವಿಸಿದ ತಕ್ಷಣ ಟ್ಯಾಂಕರ್ನ ಮುಂಭಾಗಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ, ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ನಿವಾಸಿಯಾದ ಚಾಲಕ ಧರ್ಮೇಂದ್ರ ದ್ವಿವೇದಿ ಅವರಿಗೆ ವಾಹನದಿಂದ ಹೊರಬರಲು ಸಾಧ್ಯವಾಗಲಿಲ್ಲ. ಟ್ಯಾಂಕರ್ನ ಕ್ಯಾಬಿನ್ನಲ್ಲೇ ಸಿಲುಕಿಕೊಂಡ ಚಾಲಕ ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಅಪಘಾತದ ಭೀಕರತೆಗೆ ಟೋಲ್ ಪ್ಲಾಜಾದಲ್ಲಿದ್ದ ಐವರು ಸಿಬ್ಬಂದಿಗೂ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಪ್ರಯಾಗ್ರಾಜ್ನ ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮರುದಿನವೇ ಆಲೋಕ್ ಸಿಂಗ್ ಎಂಬ ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಗಾಯಾಳುಗಳ ಪೈಕಿ ಗುರುವಾರ ಮತ್ತಿಬ್ಬರು ಸಿಬ್ಬಂದಿ ಕೊನೆಯುಸಿರೆಳೆದಿದ್ದಾರೆ. ಮೃತರನ್ನು ರಾಯ್ಬರೇಲಿ ನಿವಾಸಿ ಹೀರಾಮಣಿ ಸಿಂಗ್ ಮತ್ತು ಲಲಿತ್ಪುರ ನಿವಾಸಿ ಕೃಷ್ಣಪಾಲ್ ಮೌರ್ಯ ಎಂದು ಗುರುತಿಸಲಾಗಿದೆ. ಇದರೊಂದಿಗೆ ದುರಂತದಲ್ಲಿ ಮಡಿದವರ ಒಟ್ಟು ಸಂಖ್ಯೆ 5ಕ್ಕೆ ಏರಿಕೆಯಾಗಿದೆ ಎಂದು ಕೋಖ್ರಾಜ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಚಂದ್ರ ಭೂಷಣ್ ಮೌರ್ಯ ಖಚಿತಪಡಿಸಿದ್ದಾರೆ.
ಪ್ರಸ್ತುತ ಇನ್ನೂ ಇಬ್ಬರು ಟೋಲ್ ನೌಕರರು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಚಾಲಕನ ಅಜಾಗರೂಕತೆಯೇ ಕಾರಣವೇ ಅಥವಾ ತಾಂತ್ರಿಕ ದೋಷವಿತ್ತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಹನಿಮೂನ್ ಮರ್ಡರ್ ಕೇಸ್ : ಆರೋಪಿ ಸೋನಂ ಜಾಮೀನು ಮುಂದುವರಿಕೆಗೆ ಸುಪ್ರೀಂ ಕೋರ್ಟ್ ಸಮ್ಮತಿ!



















