ಪುಣೆ : ಪುಣೆಯ ಪ್ರಸಿದ್ಧ ಸಿಹಿತಿಂಡಿಯ ಮಳಿಗೆಯೊಂದರ ಲೈಸೆನ್ಸ್ ಅನ್ನು ಅಮಾನತಿನಲ್ಲಿಟ್ಟ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಮಂಡಳಿ(FDA)ಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಮುಂಬೈ ಹೈಕೋರ್ಟ್, ಶೇಕಡಾ 98ರಷ್ಟು ನಿಯಮಗಳನ್ನು ಪಾಲಿಸಿದ್ದರೂ ಪರವಾನಗಿ ಮರಳಿಸದೇ ವ್ಯಾಪಾರಕ್ಕೆ ನಷ್ಟ ಉಂಟುಮಾಡಿದ ಇಲಾಖೆಯು ಅಂಗಡಿಯ ಮಾಲೀಕರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ಎಫ್ಡಿಎ ಕಟ್ಟುನಿಟ್ಟಿನ ಕ್ರಮಕ್ಕೆ ಹೈಕೋರ್ಟ್ ಬೇಸರ
ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರಿದ್ದ ಪೀಠವು, “ಆಹಾರ ಸುರಕ್ಷತೆಯ ವಿಚಾರದಲ್ಲಿ ಎಫ್ಡಿಎ ಇಲಾಖೆಯ ಉದ್ದೇಶ ಪ್ರಶಂಸನೀಯ. ಆದರೆ ನೀವು ಅತಿಯಾಗಿ ವರ್ತಿಸುತ್ತಿದ್ದೀರಿ” ಎಂದು ಹೇಳಿದೆ. ಹೋಟೆಲ್ ಮತ್ತು ಅಂಗಡಿಗಳ ಲೈಸೆನ್ಸ್ ಅಮಾನತುಗೊಳಿಸುವ ಇಲಾಖೆಯ ನೀತಿಯು ವಿಚಿತ್ರ ಮತ್ತು ಅನುಚಿತವಾಗಿದೆ ಎಂದು ನ್ಯಾಯಪೀಠ ಬಣ್ಣಿಸಿದೆ.

ಜೂನ್ನಲ್ಲಿ ಬಂದಾಗಿದ್ದ ‘ಗುರುನಾನಕ್ ಡೈರಿ’
ಪುಣೆಯ ‘ಗುರುನಾನಕ್ ಡೈರಿ ಅಂಡ್ ಸ್ವೀಟ್ಸ್’ ಅಂಗಡಿಯ ಮೇಲ್ಮನವಿಯ ಆಧಾರದ ಮೇಲೆ ಹೈಕೋರ್ಟ್ ಈ ತೀರ್ಪು ನೀಡಿದೆ. ಜೂನ್ 12 ರಂದು ವಿಷಪೂರಿತ ಆಹಾರ ದೂರಿನ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ, ನೈರ್ಮಲ್ಯದ ನೆಪವೊಡ್ಡಿ ಅಂಗಡಿಯ ಲೈಸೆನ್ಸ್ ಅಮಾನತುಗೊಳಿಸಿದ್ದರು. ಬಳಿಕ ಜುಲೈ 13 ರಂದು ನಡೆಸಿದ ಮರು ಪರಿಶೀಲನೆಯಲ್ಲಿ ಅಂಗಡಿಯು ಶೇ.98 ರಷ್ಟು ಶುಚಿತ್ವ ನಿಯಮಗಳನ್ನು ಪಾಲಿಸಿರುವುದು ಕಂಡುಬಂದಿತ್ತು. ಆದಾಗ್ಯೂ ಲೈಸೆನ್ಸ್ ರದ್ದು ಆದೇಶವನ್ನು ಹಿಂಪಡೆಯದಿದ್ದರಿಂದ ಅಂಗಡಿಗೆ ಸುಮಾರು 8.74 ಲಕ್ಷ ರೂಪಾಯಿ ಆದಾಯ ನಷ್ಟವಾಗಿತ್ತು.
ಒಂದು ತಿಂಗಳಲ್ಲಿ 5 ಲಕ್ಷ ರೂ. ಪರಿಹಾರ ಪಾವತಿಗೆ ಆದೇಶ
ಮರು ಪರಿಶೀಲನೆ ವರದಿಯಲ್ಲಿ ನಿಯಮ ಪಾಲನೆ ದೃಢಪಟ್ಟ ತಕ್ಷಣವೇ ಅಮಾನತು ಆದೇಶವನ್ನು ರದ್ದುಗೊಳಿಸಬೇಕಿತ್ತು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಕೂಡಲೇ ಅಂಗಡಿಯನ್ನು ಮತ್ತೆ ಆರಂಭಿಸಲು ಅನುಮತಿ ನೀಡಿರುವ ನ್ಯಾಯಾಲಯ, ಒಂದು ತಿಂಗಳ ಒಳಗಾಗಿ ಅಂಗಡಿಯ ಮಾಲೀಕರಿಗೆ 5 ಲಕ್ಷ ರೂಪಾಯಿ ನಷ್ಟ ಪರಿಹಾರ ಪಾವತಿಸುವಂತೆ ಎಫ್ಡಿಎಗೆ ನಿರ್ದೇಶಿಸಿದೆ. ಈ ನಡುವೆ, ಈ ನ್ಯಾಯಾಲಯದ ಆದೇಶವನ್ನು ಪರಿಶೀಲಿಸಿದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಫ್ಡಿಎ ಆಯುಕ್ತ ತುಕಾರಾಂ ಮುಂಧೆ ತಿಳಿಸಿದ್ದಾರೆ.
ಇದನ್ನೂ ಓದಿ : ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಕೇಸ್ ; A2 ಶಿವಕುಮಾರ್ ಮಾಫಿ ಸಾಕ್ಷಿ ಅರ್ಜಿ ವಜಾ!


















