ನವದೆಹಲಿ : ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಕಳೆದ ತಿಂಗಳು ನಡೆದಿದ್ದ ಸಂಸತ್ ಚಲೋ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರ ಮೇಲೆ ಅತಿಯಾದ ಬಲಪ್ರಯೋಗ ಮಾಡಲಾಗಿದೆ ಎಂಬ ಆರೋಪಗಳನ್ನು ದೆಹಲಿ ಪೊಲೀಸರು ತಳ್ಳಿಹಾಕಿದ್ದಾರೆ. ಜುಲೈ 20 ರಂದು ನಡೆದ ಪ್ರತಿಭಟನೆಯಲ್ಲಿ 30,000ಕ್ಕೂ ಹೆಚ್ಚು ಜನರಿದ್ದು, ಹಿಂಸಾಚಾರ ತೀವ್ರಗೊಂಡಾಗ ಪರಿಸ್ಥಿತಿಯನ್ನು ಹತೋಟಿಗೆ ತರಲು ನಿಯಮಾನುಸಾರ ಅಗತ್ಯ ಬಲಪ್ರಯೋಗ ಮಾಡಲಾಗಿದೆ ಅಷ್ಟೇ ಎಂದು ಪೊಲೀಸರು ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಬ್ಯಾರಿಕೇಡ್ ಮುರಿದು ಸಂಸತ್ತಿನತ್ತ ನುಗ್ಗಿದ್ದ ಪ್ರತಿಭಟನಾಕಾರರು
ಸುಪ್ರೀಂ ಕೋರ್ಟ್ಗೆ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಜಂಟಿ ಉತ್ತರವಾಗಿ ಅಫಿಡವಿಟ್ ಸಲ್ಲಿಸಿರುವ ಉಪ ಪೊಲೀಸ್ ಆಯುಕ್ತ (DCP) ಸಚಿನ್ ಶರ್ಮಾ, ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ‘ಸಂಸತ್ ಚಲೋ’ ಆರಂಭದಲ್ಲಿ ಶಾಂತಿಯುತವಾಗಿತ್ತು. ಆದರೆ, ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿದ್ದ 30,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಬ್ಯಾರಿಕೇಡ್ಗಳನ್ನು ಮುರಿದು ಸಂಸತ್ತಿನತ್ತ ಧಾವಿಸಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. 5,000ದಷ್ಟಿದ್ದ ಪೊಲೀಸ್ ಸಿಬ್ಬಂದಿಗೆ ಪರಿಸ್ಥಿತಿ ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಿತ್ತು ಎಂದು ಪೊಲೀಸರು ಕೋರ್ಟ್ಗೆ ವಿವರಿಸಿದ್ದಾರೆ.
ಪೊಲೀಸರ ಮೇಲೆ ದಾಳಿ
ಪ್ರತಿಭಟನೆಯಲ್ಲಿ ರೌಡಿಶೀಟರ್ಗಳು, ಸಮಾಜಘಾತುಕ ಶಕ್ತಿಗಳು ಮತ್ತು ಗಂಭೀರ ಅಪರಾಧ ಹಿನ್ನೆಲೆಯುಳ್ಳವರು ಒಳನುಸುಳಿದ್ದರು ಎಂದು ದೆಹಲಿ ಪೊಲೀಸರು ಆರೋಪಿಸಿದ್ದಾರೆ. ಘಟನಾ ಸ್ಥಳದಲ್ಲಿದ್ದ 2,873 ಜನರನ್ನು ಮುಖ ಗುರುತಿಸುವ ತಂತ್ರಜ್ಞಾನದ (Facial Recognition Technology) ಮೂಲಕ ಗುರುತಿಸಲಾಗಿದ್ದು, ಅವರ ವಿರುದ್ಧ ಕೊಲೆ, ಕೊಲೆಯತ್ನ, ದರೋಡೆ ಮತ್ತು ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣಗಳು ದಾಖಲಾಗಿರುವುದು ಕಂಡುಬಂದಿದೆ. ಪ್ರತಿಭಟನಾಕಾರರು ಪೊಲೀಸರನ್ನು ಸುತ್ತುವರಿದು, ಅವರ ರಕ್ಷಣಾ ಕವಚಗಳನ್ನು ಕಸಿದುಕೊಂಡು, ಕಲ್ಲು ಹಾಗೂ ಕಾಂಕ್ರೀಟ್ ರಸ್ತೆಗಳ ಮೇಲೆ ಎಳೆದಾಡಿ ದಾಳಿ ನಡೆಸಿದ್ದಾರೆ. ಈ ಸಂಘರ್ಷದಲ್ಲಿ 240ಕ್ಕೂ ಹೆಚ್ಚು ಪೊಲೀಸರು ಮತ್ತು ಸುಮಾರು 200 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.
ಪೆಲೆಟ್ ಗನ್ ಬಳಕೆಯ ಆರೋಪ ನಿರಾಕರಣೆ
ಪ್ರತಿಭಟನಾಕಾರರನ್ನು ಚದುರಿಸಲು ಆಣಿ ಹೊಡೆದ ಲಾಠಿಗಳು ಮತ್ತು ಪೆಲೆಟ್ ಗನ್ಗಳನ್ನು (Pellet Guns) ಬಳಸಲಾಗಿದೆ ಎಂಬ ಆರೋಪವನ್ನು ದೆಹಲಿ ಪೊಲೀಸ್ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣವಾಗಿ ತಳ್ಳಿಹಾಕಿವೆ. ವೀಡಿಯೊಗಳಲ್ಲಿ ಕಂಡುಬಂದ ಆಣಿಯಿರುವ ಕೋಲು ಸಾರ್ವಜನಿಕರು ತಂದಿದ್ದ ರಾಷ್ಟ್ರಧ್ವಜದ ಕೋಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಸಿವಿಲ್ ಉಡುಪಿನಲ್ಲಿದ್ದ ಲಾಠಿ ಹಿಡಿದ ವ್ಯಕ್ತಿಗಳು ಪೊಲೀಸರ ‘ಸ್ಪಾಟರ್ಗಳು’ (Spotters) ಎಂದು ತಿಳಿಸಿರುವ ಪೊಲೀಸರು, ರಕ್ಷಣಾತ್ಮಕವಾಗಿ ಕೇವಲ ಅಶ್ರುವಾಯು ಮತ್ತು ಸೀಮಿತ ಪ್ರಮಾಣದ ಲಾಠಿಚಾರ್ಜ್ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ವಿಶೇಷ ತನಿಖಾ ತಂಡದಿಂದ ವಿಚಾರಣೆ
ಪ್ರತಿಭಟನೆಯಲ್ಲಿ ಭಾಗವಹಿಸಿದ ಅಪರಾಧ ಹಿನ್ನೆಲೆಯುಳ್ಳವರ ಬಗ್ಗೆ ದೆಹಲಿ ಪೊಲೀಸ್ ಆಯುಕ್ತರು ರಚಿಸಿರುವ ವಿಶೇಷ ತನಿಖಾ ತಂಡ (SIT) ತನಿಖೆ ನಡೆಸುತ್ತಿದೆ. ಪೊಲೀಸರ ಕ್ರಮದ ಪ್ರಮಾಣಬದ್ಧತೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಯಾವುದೇ ಸಮಿತಿ ರಚಿಸಿದರೂ ಅದಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪ್ರಸ್ತುತ ಈ ಪ್ರಕರಣವು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ.
ಇದನ್ನೂ ಓದಿ : ಕರ್ನಾಟಕ ಹೈಕೋರ್ಟ್ನಲ್ಲಿ SDA ಹುದ್ದೆಗಳ ನೇಮಕಾತಿ : 81 ಸಾವಿರ ರೂ. ಸಂಬಳ



















