ದಿ ಹೇಗ್ : ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯ ಕುಸಿಯುತ್ತಿದೆ ಮತ್ತು ಧಾರ್ಮಿಕ, ಅಲ್ಪಸಂಖ್ಯಾತರ ಹಕ್ಕುಗಳ ಹರಣವಾಗುತ್ತಿದೆ ಎಂಬ ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟೆನ್ ಅವರ ಹೇಳಿಕೆಯನ್ನು ಭಾರತ ಸರ್ಕಾರ ತೀವ್ರವಾಗಿ ತಿರಸ್ಕರಿಸಿದೆ. ಭಾರತವು ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯವನ್ನು ಖಾತರಿಪಡಿಸುವಂಥ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಎಂದು ಭಾರತದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಇಂತಹ ಆರೋಪಗಳು ಭಾರತದ ಬಗ್ಗೆ ಇರುವ ‘ತಿಳಿವಳಿಕೆಯ ಕೊರತೆ’ಯಿಂದ ಮೂಡಿಬಂದಿವೆ ಎಂದು ಭಾರತ ತಿರುಗೇಟು ನೀಡಿದೆ.
ಪ್ರಧಾನಿ ಮೋದಿ ಅವರ ಎರಡು ದಿನಗಳ ನೆದರ್ಲ್ಯಾಂಡ್ಸ್ ಭೇಟಿಯ ಸಂದರ್ಭದಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸದ ಕುರಿತು ಮತ್ತು ಭಾರತದಲ್ಲಿ ಮುಸ್ಲಿಮರು ಸೇರಿದಂತೆ ಇತರೆ ಅಲ್ಪಸಂಖ್ಯಾತರ ಹಕ್ಕುಗಳ ಸ್ಥಿತಿಗತಿಯ ಬಗ್ಗೆ ಡಚ್ ಪತ್ರಕರ್ತರೊಬ್ಬರು ಪ್ರಶ್ನೆ ಎತ್ತಿದ್ದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಿಬಿ ಜಾರ್ಜ್, “ಪ್ರಶ್ನೆ ಕೇಳುವ ವ್ಯಕ್ತಿಗೆ ಭಾರತದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದಿರುವುದೇ ಇಂತಹ ಪ್ರಶ್ನೆಗಳಿಗೆ ಮುಖ್ಯ ಕಾರಣ” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಭಾರತದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತಾಪಿಸಿದ ರಾಜತಾಂತ್ರಿಕ ಅಧಿಕಾರಿ ಸಿಬಿ ಜಾರ್ಜ್, ಭಾರತವು 5,000 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ನಾಗರಿಕತೆಯಾಗಿದೆ. ಭಾಷೆ, ಆಹಾರ, ಸಂಸ್ಕೃತಿ ಮತ್ತು ಧರ್ಮದಲ್ಲಿ ಭಾರತ ಹೊಂದಿರುವ ವೈವಿಧ್ಯತೆಯನ್ನು ಜಗತ್ತಿನ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಧರ್ಮಗಳೂ ಸೇರಿದಂತೆ ಜಗತ್ತಿನ ನಾಲ್ಕು ಪ್ರಮುಖ ಧರ್ಮಗಳು ಭಾರತದಲ್ಲೇ ಜನ್ಮ ತಳೆದು ಇಂದಿಗೂ ಸಮೃದ್ಧವಾಗಿ ಬೆಳೆಯುತ್ತಿವೆ ಎಂದು ಹೇಳಿದ್ದಾರೆ.
ಕಳೆದ 2,500 ವರ್ಷಗಳಿಂದ ಯಹೂದಿ ಧರ್ಮದ ಜನರು ಭಾರತದಲ್ಲಿ ಯಾವುದೇ ಕಿರುಕುಳವಿಲ್ಲದೆ ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಯೇಸು ಕ್ರಿಸ್ತನ ಪುನರುತ್ಥಾನದ ಬೆನ್ನಲ್ಲೇ ಭಾರತಕ್ಕೆ ಕ್ರಿಶ್ಚಿಯನ್ ಧರ್ಮ ಆಗಮಿಸಿತು ಮತ್ತು ಪ್ರವಾದಿ ಮುಹಮ್ಮದ್ ಅವರ ಕಾಲದಲ್ಲೇ ಇಸ್ಲಾಂ ಧರ್ಮ ಕೂಡ ಭಾರತವನ್ನು ಪ್ರವೇಶಿಸಿ ಇಲ್ಲಿ ವಿಸ್ತಾರವಾಗಿ ಬೆಳೆದಿದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಎಷ್ಟು ಗಟ್ಟಿಯಾಗಿವೆ ಎಂದರೆ, ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಶೇ.90ಕ್ಕೂ ಹೆಚ್ಚು ಮತದಾರರು ಭಾಗವಹಿಸಿ ಶಾಂತಿಯುತವಾಗಿ ಅಧಿಕಾರ ಹಸ್ತಾಂತರಕ್ಕೆ ಕಾರಣರಾಗಿದ್ದಾರೆ. ಇದು ಭಾರತೀಯ ಪ್ರಜಾಪ್ರಭುತ್ವದ ನೈಜ ಸೌಂದರ್ಯ ಎಂದು ಅವರು ಡಚ್ ಮಾಧ್ಯಮಗಳಿಗೆ ವಿವರಿಸಿದ್ದಾರೆ.
ವಿಶ್ವದ ಒಟ್ಟು ಜನಸಂಖ್ಯೆಯ ಆರನೇ ಒಂದು ಭಾಗದಷ್ಟು ಜನರನ್ನು ಹೊಂದಿರುವ ಭಾರತವು, ಜಗತ್ತಿನ ಪ್ರಜಾಸತ್ತಾತ್ಮಕ ನಿಯಮಗಳಿಗೆ ಧಕ್ಕೆ ತರದೇ ಬಡತನ ನಿರ್ಮೂಲನೆ ಮತ್ತು ಆರ್ಥಿಕ ಯಶಸ್ಸನ್ನು ಸಾಧಿಸಿದೆ. ಭಾರತದಲ್ಲಿ ಅಲ್ಪಸಂಖ್ಯಾತರು ಅತ್ಯಂತ ಸುರಕ್ಷಿತವಾಗಿ ಮತ್ತು ಸಮೃದ್ಧವಾಗಿ ಬದುಕುತ್ತಿದ್ದಾರೆ ಎಂಬುದಕ್ಕೆ ಅಂಕಿ-ಅಂಶಗಳೇ ಸಾಕ್ಷಿ ಎಂದು ಜಾರ್ಜ್ ಪ್ರತಿಪಾದಿಸಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಶೇ.11 ರಷ್ಟಿತ್ತು. ಇಂದು ಅದು ಶೇ.20ಕ್ಕಿಂತ ಹೆಚ್ಚಾಗಿದೆ. ಜಗತ್ತಿನ ಬೇರೆ ಯಾವುದೇ ದೇಶದಲ್ಲೂ ಅಲ್ಪಸಂಖ್ಯಾತರ ಜನಸಂಖ್ಯೆ ಈ ಪ್ರಮಾಣದಲ್ಲಿ ಹೆಚ್ಚಾಗಿರುವ ಉದಾಹರಣೆ ಇಲ್ಲ. ಹೀಗಾಗಿ ಟೀಕೆ ಮಾಡುವ ಮುನ್ನ ಭಾರತದ ಬೆಳವಣಿಗೆಯನ್ನು ಅರಿತುಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಡಚ್ ಪ್ರಧಾನಿ ಜೆಟ್ಟೆನ್ ಹೇಳಿಕೆಯ ಹಿನ್ನೆಲೆ
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಮುನ್ನ ಡಚ್ ಪ್ರಧಾನಿ ರಾಬ್ ಜೆಟ್ಟೆನ್ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ನೆದರ್ಲ್ಯಾಂಡ್ಸ್ ಸರ್ಕಾರಕ್ಕೂ ಕಳಕಳಿ ಇದೆ ಎಂದು ಹೇಳಿದ್ದರು. ಭಾರತದಲ್ಲಿ ಕೇವಲ ಮಾಧ್ಯಮ ಸ್ವಾತಂತ್ರ್ಯ ಮಾತ್ರವಲ್ಲದೆ ಅಲ್ಪಸಂಖ್ಯಾತರ ಹಕ್ಕುಗಳೂ ತೀವ್ರ ಒತ್ತಡದಲ್ಲಿವೆ ಮತ್ತು ಈ ವಿಷಯವನ್ನು ಭಾರತ ಸರ್ಕಾರದ ಮುಂದೆ ನಿಯಮಿತವಾಗಿ ಪ್ರಸ್ತಾಪಿಸಲಾಗುತ್ತಿದೆ ಎಂದು ಜೆಟ್ಟೆನ್ ಪ್ರತಿಪಾದಿಸಿದ್ದರು ಎನ್ನಲಾಗಿದೆ.
ಆದರೆ, ಈ ವಿವಾದದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಡಚ್ ಪ್ರಧಾನಿ, “ಭಾರತ ಮತ್ತು ನೆದರ್ಲ್ಯಾಂಡ್ಸ್ ಎರಡೂ ದೇಶಗಳು ಪ್ರಜಾಪ್ರಭುತ್ವ, ಉತ್ತಮ ಆಡಳಿತ ಮತ್ತು ನಿಯಮ ಆಧಾರಿತ ಜಾಗತಿಕ ವ್ಯವಸ್ಥೆಗೆ ಹೆಚ್ಚಿನ ಮಹತ್ವ ನೀಡುತ್ತವೆ” ಎಂದು ಬರೆಯುವ ಮೂಲಕ ರಾಜತಾಂತ್ರಿಕ ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಉಭಯ ದೇಶಗಳ ನಡುವೆ ದೀರ್ಘಕಾಲದಿಂದ ಇರುವ ಮಕ್ಕಳ ಪಾಲನೆಗೆ (ಚೈಲ್ಡ್ ಕಸ್ಟಡಿ) ಸಂಬಂಧಿಸಿದ ಕಾನೂನು ವಿವಾದದ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಕೇರಳಂನ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ವಿ.ಡಿ ಸತೀಶನ್ – 20 ಸದಸ್ಯರ ಹೊಸ ಸಚಿವ ಸಂಪುಟ ಅಸ್ತಿತ್ವಕ್ಕೆ!


















