ನವದೆಹಲಿ : ಭಾರತದ ರಾಜಧಾನಿ ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ಶುಕ್ರವಾರ ನಡೆದ 80ನೇ ಸ್ವಾತಂತ್ರ್ಯ ದಿನದ ಕಾರ್ಯಕ್ರಮವನ್ನು ಬಳಸಿಕೊಂಡು ಪಾಕಿಸ್ತಾನದ ರಾಯಭಾರ ಅಧಿಕಾರಿ ಮತ್ತೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಉದ್ಧಟತನ ತೋರಿದ್ದಾರೆ.
ಪಾಕಿಸ್ತಾನದ ಹೈಕಮಿಷನ್ನ ಪ್ರಭಾರಿ (ಚಾರ್ಜ್ ಡಿ ಅಫೇರ್ಸ್) ಸಾದ್ ಅಹ್ಮದ್ ವರೈಚ್ ಅವರು ಹೈಕಮಿಷನ್ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದಕ್ಷಿಣ ಏಷ್ಯಾದಲ್ಲಿ ಸುಸ್ಥಿರ ಹಾಗೂ ದೀರ್ಘಕಾಲೀನ ಶಾಂತಿ ನೆಲೆಸಬೇಕಾದರೆ ಕಾಶ್ಮೀರ ವಿವಾದವನ್ನು ವಿಶ್ವಸಂಸ್ಥೆಯ ನಿರ್ಣಯಗಳು ಹಾಗೂ ಕಾಶ್ಮೀರಿ ಜನರ ಆಶೋತ್ತರಗಳಿಗೆ ಅನುಗುಣವಾಗಿ ಬಗೆಹರಿಸುವುದೊಂದೇ ಮಾರ್ಗ ಎಂದು ಪ್ರತಿಪಾದಿಸಿದರು.
ತಮ್ಮ ಭಾಷಣದಲ್ಲಿ ಪಾಕಿಸ್ತಾನವು ಶಾಂತಿಯುತ ಸಹಬಾಳ್ವೆ, ಸಂವಾದ ಮತ್ತು ರಾಜತಾಂತ್ರಿಕತೆಯನ್ನು ನಂಬುತ್ತದೆ ಎಂದು ಹೇಳಿಕೊಂಡ ಅವರು, ದೇಶದ ಅಣ್ವಸ್ತ್ರ ಸಾಮರ್ಥ್ಯವು ದಕ್ಷಿಣ ಏಷ್ಯಾದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವ ಪ್ರಮುಖ ಅಂಶವಾಗಿದೆ ಎಂದು ಸಮರ್ಥಿಸಿಕೊಂಡರು.
ಇದೇ ವೇಳೆ ಇತ್ತೀಚೆಗೆ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ನಡುವೆ ನಡೆದ ‘ಮಕ್ಕಾ ಜಂಟಿ ರಕ್ಷಣಾ ಒಪ್ಪಂದ’ವನ್ನು (Makkah Joint Defence Agreement) ವರೈಚ್ ವಿಶೇಷವಾಗಿ ಉಲ್ಲೇಖಿಸಿದರು.
ಈ ಐತಿಹಾಸಿಕ ಒಪ್ಪಂದವು ಪ್ರಾದೇಶಿಕ ಸ್ಥಿರತೆ ಮತ್ತು ಜಾಗತಿಕ ಶಾಂತಿಗೆ ನೀಡಿದ ದೊಡ್ಡ ಕೊಡುಗೆಯಾಗಿದೆ ಎಂದು ಅವರು ಪ್ರತಿಪಾದಿಸಿದರು. ಮೂರು ದೇಶಗಳ ನಡುವಿನ ಈ ಮೈತ್ರಿಯ ಪ್ರಕಾರ, ಯಾವುದೇ ಒಂದು ದೇಶದ ಮೇಲಿನ ಸಶಸ್ತ್ರ ದಾಳಿಯನ್ನು ಮೂರೂ ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಪಾಕಿಸ್ತಾನದ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ 150ನೇ ಜನ್ಮವರ್ಷಾಚರಣೆಯ ಅಂಗವಾಗಿ ಹೈಕಮಿಷನ್ನಲ್ಲಿ ಆಯೋಜಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನವನ್ನು ಸಹ ಅವರು ಉದ್ಘಾಟಿಸಿದರು. ದೆಹಲಿಯಲ್ಲಿ ನಡೆದ ಅಧಿಕೃತ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪಾಕ್ ರಾಯಭಾರಿಯು ಕಾಶ್ಮೀರ ವಿಚಾರ, ಪ್ರಾದೇಶಿಕ ಭದ್ರತೆ ಹಾಗೂ ರಕ್ಷಣಾ ಒಪ್ಪಂದಗಳನ್ನು ಪ್ರಸ್ತಾಪಿಸುವ ಮೂಲಕ ಭಾರತದ ವಿರುದ್ಧ ಜಾಗತಿಕ ಮಟ್ಟದಲ್ಲಿ ರಾಜತಾಂತ್ರಿಕ ಒತ್ತಡ ಹೇರುವ ತಂತ್ರವನ್ನು ಮುಂದುವರಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : IPL ಬಳಿಕ ಮೈದಾನದಿಂದ ದೂರವಿದ್ದ ಆಂಗ್ಕ್ರಿಶ್ ರಘುವಂಶಿ ಫಿಟ್ : ಸ್ಪರ್ಧಾತ್ಮಕ ಕ್ರಿಕೆಟ್ಗೆ ಕಂಬ್ಯಾಕ್ ಮಾಡಲು ಸಜ್ಜು!



















