ನವದೆಹಲಿ : ಭಾರತದ ರಕ್ಷಣಾ ಉತ್ಪಾದನಾ ವಲಯದಲ್ಲಿ ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಮತ್ತು ಐತಿಹಾಸಿಕ ನಿರ್ಧಾರವೊಂದನ್ನು ಕೈಗೊಂಡಿದೆ. ಇದುವರೆಗೆ ಕೇವಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗಷ್ಟೇ ಸೀಮಿತವಾಗಿದ್ದ ‘ಕ್ಷಿಪಣಿ (ಮಿಸೈಲ್) ಅಭಿವೃದ್ಧಿ ಮತ್ತು ಉತ್ಪಾದನಾ’ ವಲಯವನ್ನು ಇದೀಗ ದೇಶದ ಖಾಸಗಿ ಕಂಪನಿಗಳಿಗೂ ಮುಕ್ತಗೊಳಿಸಲು ಸಿದ್ಧತೆ ನಡೆಸಲಾಗಿದೆ.
ಭಾರತೀಯ ಸಶಸ್ತ್ರ ಪಡೆಗಳು ಹಾಗೂ ವಿದೇಶಿ ಮಿತ್ರ ರಾಷ್ಟ್ರಗಳಿಂದ ಕ್ಷಿಪಣಿಗಳಿಗೆ ಬೇಡಿಕೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ವಲಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಶೀಯ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಈ ಬೃಹತ್ ಸುಧಾರಣೆಗೆ ಮುಂದಾಗಿದೆ.
ಮೊದಲ ಹಂತದಲ್ಲಿ ಅಸ್ತ್ರ ಮಾರ್ಕ್-2 ಕ್ಷಿಪಣಿ ತಯಾರಿ
ರಕ್ಷಣಾ ಸಚಿವಾಲಯವು ಶೀಘ್ರದಲ್ಲೇ ‘ಅಸ್ತ್ರ ಮಾರ್ಕ್-2’ (Astra Mark 2) ಎಂಬ ಕಣ್ಣಿಗೆ ಕಾಣದ, ಅತ್ಯಾಧುನಿಕ ಹಾಗೂ ಆಕಾಶದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯ ಉತ್ಪಾದನೆಗಾಗಿ ಖಾಸಗಿ ಕಂಪನಿಗಳಿಂದ ಪ್ರಸ್ತಾಪಗಳನ್ನು ಆಹ್ವಾನಿಸಲಿದೆ. ಈ ಬೃಹತ್ ರಕ್ಷಣಾ ಯೋಜನೆಯಲ್ಲಿ ದೇಶದ ಮುಂಚೂಣಿ ಖಾಸಗಿ ಸಂಸ್ಥೆಗಳಾದ ಟಾಟಾ ಗ್ರೂಪ್, ಮಹೀಂದ್ರಾ ಗ್ರೂಪ್, ಅದಾನಿ, ಭಾರತ್ ಫೋರ್ಜ್ ಮತ್ತು ಐಕಾಮ್ (ICOMM) ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಿರುವ ಈ ಅಸ್ತ್ರ ಮಾರ್ಕ್-2 ಕ್ಷಿಪಣಿಯು 180 ರಿಂದ 200 ಕಿಲೋಮೀಟರ್ ವ್ಯಾಪ್ತಿಯ ಗುರಿಯನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದ್ದು, ಚೀನಾದ ಸುಧಾರಿತ ಪಿಎಲ್-15ಇ ಕ್ಷಿಪಣಿಗೆ ಪ್ರತಿಯಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ತೇಜಸ್, ಮಿಗ್-29 ಮತ್ತು ಸುಖೋಯ್-30 ಎಂಕೆಐನಂತಹ ಯುದ್ಧವಿಮಾನಗಳಲ್ಲಿ ಅಳವಡಿಸಲಾಗುತ್ತದೆ.
ಖಾಸಗಿಯವರ ಕೈಗೆ ಪ್ರಳಯ ಬ್ಯಾಲಿಸ್ಟಿಕ್ ಕ್ಷಿಪಣಿ
ಅಸ್ತ್ರ ಕ್ಷಿಪಣಿಯ ಯಶಸ್ಸಿನ ಬೆನ್ನಲ್ಲೇ ‘ಪ್ರಳಯ’ (Pralay) ಎಂಬ ಅತ್ಯಂತ ಶಕ್ತಿಶಾಲಿ ಯುದ್ಧತಾಂತ್ರಿಕ ಖಂಡಾಂತರ ಕ್ಷಿಪಣಿಯ ಅಭಿವೃದ್ಧಿ ಮತ್ತು ಉತ್ಪಾದನಾ ಜವಾಬ್ದಾರಿಯನ್ನು ಖಾಸಗಿ ವಲಯಕ್ಕೆ ವಹಿಸಲು ಸರ್ಕಾರ ಯೋಜಿಸಿದೆ. ಎರಡು ಹಂತದ ಇಂಧನ ವ್ಯವಸ್ಥೆ ಹೊಂದಿರುವ ಈ ಪ್ರಳಯ ಕ್ಷಿಪಣಿಯು ಸುಮಾರು 500 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ಶಬ್ದದ ವೇಗಕ್ಕಿಂತ ಆರು ಪಟ್ಟು ವೇಗವಾಗಿ ಚಲಿಸುವ ದೈತ್ಯ ಶಕ್ತಿಯಾಗಿದೆ. ಇದು ಭಾರತದ ಇಂಟಿಗ್ರೇಟೆಡ್ ರಾಕೆಟ್ ಫೋರ್ಸ್ನ ಪ್ರಮುಖ ಭಾಗವಾಗಲಿದ್ದು, ದೇಶದ ಆಕ್ರಮಣಕಾರಿ ರಕ್ಷಣಾ ನೀತಿಗೆ ದೊಡ್ಡ ಬಲ ತುಂಬಲಿದೆ.
ಆಪರೇಷನ್ ಸಿಂದೂರ, ಇರಾನ್ ಯುದ್ಧದಿಂದ ಕಲಿತ ಪಾಠ
ಕಳೆದ ವರ್ಷ ಪಾಕಿಸ್ತಾನದ ಗಡಿಯಲ್ಲಿ ನಡೆದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆಯು ಆಧುನಿಕ ಯುದ್ಧಗಳಲ್ಲಿ ಅತ್ಯಾಧುನಿಕ ಕ್ಷಿಪಣಿಗಳ ಪ್ರಾಮುಖ್ಯತೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿತ್ತು. ಇದಲ್ಲದೆ, ಪ್ರಸ್ತುತ ನಡೆಯುತ್ತಿರುವ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವು ಕ್ಷಿಪಣಿ ದಾಳಿಗಳು ದೇಶವೊಂದರ ಮೂಲಸೌಕರ್ಯಗಳ ಮೇಲೆ ಎಷ್ಟು ಭೀಕರ ಪರಿಣಾಮ ಬೀರಬಲ್ಲವು ಎಂಬುದನ್ನು ಸಾಬೀತುಪಡಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ಶತ್ರು ರಾಷ್ಟ್ರಗಳಾದ ಚೀನಾ ಮತ್ತು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಭಾರತದ ಕ್ಷಿಪಣಿ ಸಾಮರ್ಥ್ಯ ಹಾಗೂ ವಾಯು ರಕ್ಷಣಾ ವ್ಯವಸ್ಥೆಯನ್ನು ಕ್ಷಿಪ್ರ ವಾಗಿ ಬಲಪಡಿಸುತ್ತಿದೆ.
ವೈಮಾನಿಕ ರಕ್ಷಣಾ ಜಾಲದ ಮಹಾ ಕೋಟೆ
ಕ್ಷಿಪಣಿ ಉತ್ಪಾದನೆಯನ್ನು ಹೆಚ್ಚಿಸುವುದರ ಜೊತೆಗೆ, ಭಾರತವು ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು (Air Defence Network) ಉಕ್ಕಿನ ಕೋಟೆಯನ್ನಾಗಿ ಪರಿವರ್ತಿಸುತ್ತಿದೆ. ನೌಕಾಪಡೆಯ ಯುದ್ಧನೌಕೆಗಳ ರಕ್ಷಣೆಗಾಗಿ ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ದೀರ್ಘಾವಧಿಯ ಮೇಲ್ಮೈನಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಯನ್ನು ಅಭಿವೃದ್ಧಿಪಡಿಸುತ್ತಿವೆ.
ಇದರೊಂದಿಗೆ, ಪಾಕಿಸ್ತಾನ ಬಳಸುವ ಟರ್ಕಿ ಮೂಲದ ಡ್ರೋನ್ಗಳು ಮತ್ತು ಚೀನಾದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹೊಡೆದುರುಳಿಸಲು ಬಹುಪದರದ ರಕ್ಷಣಾ ಜಾಲವನ್ನು ಸಿದ್ಧಪಡಿಸಲಾಗುತ್ತಿದೆ. ರಷ್ಯಾದಿಂದ ಬರಬೇಕಿರುವ 5ನೇ ತುಕಡಿಯ ಎಸ್-400 ವಾಯು ರಕ್ಷಣಾ ವ್ಯವಸ್ಥೆಯು ನವೆಂಬರ್ನಲ್ಲಿ ಭಾರತಕ್ಕೆ ಬರಲಿದ್ದು, ಇನ್ನು ಐದು ಹೆಚ್ಚುವರಿ ಎಸ್-400 ವ್ಯವಸ್ಥೆಗಳನ್ನು ಖರೀದಿಸಲು ಸರ್ಕಾರ ಮುಂದಾಗಿದೆ. ಈ ವ್ಯವಸ್ಥೆಗಳನ್ನು ಶತ್ರುಗಳ ಡ್ರೋನ್ ದಾಳಿಯಿಂದ ರಕ್ಷಿಸಲು ರಷ್ಯಾದದೇ ಆದ ‘ಪ್ಯಾಂಟ್ಸಿರ್’ ರಕ್ಷಣಾ ವ್ಯವಸ್ಥೆಯನ್ನು ಸಹ ಬಳಸಿಕೊಳ್ಳಲು ಭಾರತ ನಿರ್ಧರಿಸಿದೆ.
ಇದನ್ನೂ ಓದಿ : ಇರಾನ್ನ 140 ನೆಲೆಗಳ ಮೇಲೆ ಅಮೆರಿಕ ಭೀಕರ ದಾಳಿ – UAE, ಕತಾರ್ ಮೇಲೆ ಟೆಹ್ರಾನ್ ಕ್ಷಿಪಣಿ ಪ್ರಹಾರ!



















