ಜೈಪುರ: ರಾಜಸ್ಥಾನದ ಜೈಪುರದಲ್ಲಿ ಇತ್ತೀಚೆಗೆ ನಡೆದಿದ್ದ ನೀರಜ್ ಶರ್ಮಾ ಎಂಬ ಮಹಿಳೆಯ ಭೀಕರ ಕೊಲೆ ಪ್ರಕರಣಕ್ಕೆ ಈಗ ಮತ್ತೊಂದು ಆಘಾತಕಾರಿ ತಿರುವು ಸಿಕ್ಕಿದೆ. ತನ್ನ ತಾಯಿಯ ಕೊಲೆ ಸಂಚಿನ ಆರೋಪದ ಮೇಲೆ ಈಗಾಗಲೇ ಬಂಧನಕ್ಕೊಳಗಾಗಿರುವ 23 ವರ್ಷದ ಕಾನೂನು ವಿದ್ಯಾರ್ಥಿನಿ ಆಯುಷಿ ಶರ್ಮಾ, ಈಗ ತನ್ನ ತಂದೆ ವಿಜಯ್ ಶರ್ಮಾ ಅವರ ಸಾವಿಗೂ ಕಾರಣವಾಗಿದ್ದಳು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆಸ್ತಿ ಮತ್ತು ಅನುಕಂಪದ ಆಧಾರದಲ್ಲಿ ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಆಯುಷಿ ತನ್ನ ತಂದೆಯನ್ನೂ ವ್ಯವಸ್ಥಿತವಾಗಿ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ಆಕೆಯ ಸೋದರಮಾವ ರಾಕೇಶ್ ಶರ್ಮಾ ಪೊಲೀಸರು ಮತ್ತು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಅಪಘಾತ ಎಂದು ಬಿಂಬಿಸಿ ತಾಯಿಯ ಕೊಲೆ
ಜುಲೈ 3 ರಂದು ಜೈಪುರದ ಪ್ರತಾಪ್ ನಗರದಲ್ಲಿ ಕೆಳ ವಿಭಾಗದ ಕ್ಲರ್ಕ್(ಎಲ್ಡಿಸಿ) ಆಗಿದ್ದ ನೀರಜ್ ಶರ್ಮಾ ಅವರ ಮೇಲೆ ಸ್ಕಾರ್ಪಿಯೋ ಎಸ್ಯುವಿ ಕಾರನ್ನು ಹರಿಸಿ ಅತ್ಯಂತ ಕ್ರೂರವಾಗಿ ಕೊಲ್ಲಲಾಗಿತ್ತು. ಮೊದಲಿಗೆ ಇದು ರಸ್ತೆ ಅಪಘಾತ ಎನ್ನಲಾಗಿತ್ತಾದರೂ, ಪೊಲೀಸರ ತನಿಖೆಯಲ್ಲಿ ಮಗಳು ಆಯುಷಿಯೇ ತನ್ನ ಸೋದರಸಂಬಂಧಿ ಬಲರಾಮ್ ಯಾನೆ ರವಿ ಜೊತೆ ಸೇರಿ ಈ ಹತ್ಯೆಗೆ ಸಂಚು ರೂಪಿಸಿದ್ದು ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಷಿ ಸೇರಿದಂತೆ ಏಳು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಪ್ರಮುಖ ಆರೋಪಿ ಬಲರಾಮ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ತನಗಿಂತ ತನ್ನ ವಿಕಲಾಂಗ ಸಹೋದರನಿಗೆ ಹೆಚ್ಚಿನ ಪ್ರೀತಿ ಸಿಗುತ್ತಿದೆ ಎಂಬ ದ್ವೇಷ ಮತ್ತು ಆಸ್ತಿಗಾಗಿನ ದುರಾಸೆಯೇ ಈ ಕೊಲೆಗೆ ಕಾರಣ ಎಂದು ಆಯುಷಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ.
ತಂದೆಯ ಜೀವ ಹಿಂಡಿದ ‘ಫೀಡಿಂಗ್ ಟ್ಯೂಬ್’ ರಹಸ್ಯ
ಆಯುಷಿ ಸೋದರಮಾವ ರಾಕೇಶ್ ಶರ್ಮಾ ನೀಡಿರುವ ಹೊಸ ದೂರಿನ ಪ್ರಕಾರ, ರಾಜಸ್ಥಾನ ಹೈಕೋರ್ಟ್ನಲ್ಲಿ ಕೋರ್ಟ್ ಮಾಸ್ಟರ್ ಆಗಿದ್ದ ವಿಜಯ್ ಶರ್ಮಾ ಅವರು 2024ರಲ್ಲಿ ಮಿದುಳಿನ ರಕ್ತಸ್ರಾವದಿಂದ (Brain Haemorrhage) ಬಳಲುತ್ತಿದ್ದರು. ಆದರೆ ಅವರು ಚೇತರಿಸಿಕೊಳ್ಳುತ್ತಿದ್ದಾಗ ಆಯುಷಿ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗದಂತೆ ತಡೆದಿದ್ದಳು. ಉತ್ತಮ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ತಂದೆಯನ್ನು ಸುಮಾರು ಮೂರು ತಿಂಗಳ ಕಾಲ ಯಾರಿಗೂ ತಿಳಿಯದ ರಹಸ್ಯ ಸ್ಥಳದಲ್ಲಿ ಇಟ್ಟಿದ್ದಳು. ಅಂತಿಮವಾಗಿ 2025ರ ಏಪ್ರಿಲ್ನಲ್ಲಿ ವಿಜಯ್ ಶರ್ಮಾ ಸಾವನ್ನಪ್ಪುವ ಕೆಲವೇ ದಿನಗಳ ಮುನ್ನ ಜೈಪುರದ ಆಸ್ಪತ್ರೆಗೆ ದಾಖಲಿಸಿದಾಗ, ಆಕೆಯ ತಂದೆಯ ಶೇ.90ರಷ್ಟು ಅಂಗಾಂಗಗಳು ನಿಷ್ಕ್ರಿಯಗೊಂಡಿದ್ದವು ಎಂದು ವೈದ್ಯರು ತಿಳಿಸಿದ್ದರು. ಒಮ್ಮೆ ಮನೆಯಲ್ಲಿ ಜಗಳ ನಡೆಯುವಾಗ ಆಯುಷಿ ತನ್ನ ತಾಯಿಗೆ, “ನನ್ನ ತಂದೆಯ ಫೀಡಿಂಗ್ ಟ್ಯೂಬ್ (ಆಹಾರ ನೀಡುವ ನಳಿಕೆ) ಕಿತ್ತುಹಾಕಿಯೇ ಕೊಂದಿದ್ದೇನೆ. ಇನ್ನು ನಿನ್ನನ್ನು ಕೊಲ್ಲುವುದು ದೊಡ್ಡ ಕೆಲಸವಲ್ಲ” ಎಂದು ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತಾಯಿಯ ಸಾವಿಗೂ ಮುನ್ನ ಆಕೆ ತನ್ನ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ “ನಾನು ಬಯಸಿದ ಜೀವನಕ್ಕೆ ಇನ್ನು ಕೇವಲ ಎರಡು ದಿನ ಬಾಕಿ ಇದೆ” ಎಂದು ಬರೆದುಕೊಂಡಿದ್ದಳು ಎನ್ನಲಾಗಿದೆ.
ಪೊಲೀಸ್ ಇಲಾಖೆಯಿಂದ ತನಿಖೆ ತೀವ್ರ
ತಂದೆಯ ಸಾವಿನ ಬೆನ್ನಲ್ಲೇ ಆಯುಷಿ ತನಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ಬೇಕು ಮತ್ತು ಕುಟುಂಬದ ಆಸ್ತಿಗಳನ್ನು ತನ್ನ ಹೆಸರಿಗೆ ವರ್ಗಾಯಿಸಬೇಕು ಎಂದು ಪಟ್ಟು ಹಿಡಿದಿದ್ದಳು. ಸದ್ಯ ಎಲ್ಎಲ್ಬಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿರುವ ಆಯುಷಿ, ಕಾನೂನಿನ ಬಗ್ಗೆ ಸಂಪೂರ್ಣ ಅರಿವು ಹೊಂದಿದ್ದು, ಅತ್ಯಂತ ಚಾಣಾಕ್ಷತನದಿಂದ ನಡೆದುಕೊಳ್ಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ತನಿಖೆ ಮಾಡಲು ಮನಶ್ಶಾಸ್ತ್ರಜ್ಞರ ಸಹಾಯ ಪಡೆಯಲಾಗುತ್ತಿದೆ. ತಂದೆಯ ಸಾವಿನ ಕುರಿತು ಕೇಳಿಬಂದಿರುವ ಹೊಸ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ಅಗತ್ಯ ಬಿದ್ದರೆ ಪ್ರತ್ಯೇಕ ಕೊಲೆ ಪ್ರಕರಣ ದಾಖಲಿಸಲಾಗುವುದು ಎಂದು ಜೈಪುರ ಉಪ ಪೊಲೀಸ್ ಕಮಿಷನರ್ (DCP) ರಂಜಿತಾ ಶರ್ಮಾ ತಿಳಿಸಿದ್ದಾರೆ.



















