ವಾಷಿಂಗ್ಟನ್: ಅಮೆರಿಕದ ರೈತರ ಹಿತರಕ್ಷಣೆಗಾಗಿ ಭಾರತದಿಂದ ಆಮದಾಗುವ ಅಕ್ಕಿ ಮತ್ತು ಕೆನಡಾದಿಂದ ಬರುವ ರಸಗೊಬ್ಬರದ ಮೇಲೆ ಹೊಸ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ದೇಶಗಳೊಂದಿಗಿನ ವ್ಯಾಪಾರ ಮಾತುಕತೆಗಳಲ್ಲಿ ಯಾವುದೇ ಮಹತ್ವದ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಟ್ರಂಪ್ ಈ ನಿರ್ಧಾರದ ಸುಳಿವು ನೀಡಿದ್ದಾರೆ.
ಶ್ವೇತಭವನದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಟ್ರಂಪ್, ಅಮೆರಿಕದ ರೈತರಿಗೆ ಬಹುಕೋಟಿ ಡಾಲರ್ ಪರಿಹಾರ ಪ್ಯಾಕೇಜ್ ಘೋಷಿಸುವಾಗ ಈ ವಿಷಯ ಪ್ರಸ್ತಾಪಿಸಿದ್ದಾರೆ. ಇದೇ ವೇಳೆ ಅವರು ಭಾರತ ಮತ್ತು ಇತರೆ ಏಷ್ಯಾದ ದೇಶಗಳಿಂದ ಕೃಷಿ ಉತ್ಪನ್ನಗಳ ಆಮದಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದ ಅಕ್ಕಿ ಮೇಲೆ ಕಣ್ಣು
ಅಮೆರಿಕದ ಮಾರುಕಟ್ಟೆಯಲ್ಲಿ ಭಾರತದ ಅಕ್ಕಿ ಕಂಪನಿಗಳು ಪ್ರಾಬಲ್ಯ ಸಾಧಿಸಿವೆ ಎಂಬ ವಿಷಯ ಪ್ರಸ್ತಾಪವಾದಾಗ, ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದರು. “ಅವರು ನಮ್ಮ ಮಾರುಕಟ್ಟೆಯಲ್ಲಿ ಅಕ್ಕಿಯನ್ನು ತಂದು ಸುರಿಯುತ್ತಿದ್ದಾರೆ. ಇದನ್ನು ತಡೆಯಲೇಬೇಕು. ಸುಂಕ ವಿಧಿಸುವ ಮೂಲಕ ಕೇವಲ ಎರಡು ನಿಮಿಷಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬಹುದು,” ಎಂದು ಅವರು ಹೇಳಿದರು. ಲೂಸಿಯಾನದ ಅಕ್ಕಿ ಬೆಳೆಗಾರರೊಬ್ಬರು, ಭಾರತದ ಅಕ್ಕಿ ಆಮದಿನಿಂದ ದಕ್ಷಿಣ ಅಮೆರಿಕದ ಬೆಳೆಗಾರರಿಗೆ ಭಾರೀ ನಷ್ಟವಾಗುತ್ತಿದೆ ಎಂದು ದೂರಿದ ನಂತರ ಟ್ರಂಪ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಕೆನಡಾ ರಸಗೊಬ್ಬರಕ್ಕೂ ಸುಂಕದ ಬಿಸಿ
ಕೆನಡಾದಿಂದ ಆಮದಾಗುವ ರಸಗೊಬ್ಬರದ ಮೇಲೂ ಕಠಿಣ ಸುಂಕ ವಿಧಿಸುವ ಸಾಧ್ಯತೆಯ ಬಗ್ಗೆಯೂ ಟ್ರಂಪ್ ಸುಳಿವು ನೀಡಿದ್ದಾರೆ. ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಲು ಈ ಕ್ರಮ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಮೆರಿಕದ ರೈತರಿಗೆ 12 ಬಿಲಿಯನ್ ಡಾಲರ್ ನೆರವು
ವಿದೇಶಿ ಆಮದಿನಿಂದ ಸಂಕಷ್ಟದಲ್ಲಿರುವ ಅಮೆರಿಕದ ರೈತರಿಗಾಗಿ ಟ್ರಂಪ್ ಆಡಳಿತವು 12 ಬಿಲಿಯನ್ ಡಾಲರ್ (ಸುಮಾರು 1 ಲಕ್ಷ ಕೋಟಿ ರೂ.) ಆರ್ಥಿಕ ನೆರವನ್ನು ಘೋಷಿಸಿದೆ. ಇತರ ದೇಶಗಳಿಂದ ಸಂಗ್ರಹಿಸುವ ಸುಂಕದ ಹಣವನ್ನೇ ಈ ಪರಿಹಾರಕ್ಕೆ ಬಳಸಲಾಗುವುದು ಎಂದು ಟ್ರಂಪ್ ತಿಳಿಸಿದ್ದಾರೆ. “ರೈತರು ಅಮೆರಿಕದ ಬೆನ್ನೆಲುಬು ಮತ್ತು ಅನಿವಾರ್ಯ ರಾಷ್ಟ್ರೀಯ ಆಸ್ತಿ,” ಎಂದು ಅವರು ಬಣ್ಣಿಸಿದ್ದಾರೆ.
ಭಾರತ-ಅಮೆರಿಕ ಕೃಷಿ ವ್ಯಾಪಾರ ಸಂಬಂಧ
ಕಳೆದ ಒಂದು ದಶಕದಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ಕೃಷಿ ವ್ಯಾಪಾರ ವಿಸ್ತರಣೆಯಾಗಿದೆ. ಭಾರತವು ಬಾಸ್ಮತಿ ಅಕ್ಕಿ, ಮಸಾಲೆ ಪದಾರ್ಥಗಳು ಮತ್ತು ಸಮುದ್ರ ಉತ್ಪನ್ನಗಳನ್ನು ರಫ್ತು ಮಾಡಿದರೆ, ಅಮೆರಿಕದಿಂದ ಬಾದಾಮಿ, ಹತ್ತಿ ಮತ್ತು ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ, ಸಬ್ಸಿಡಿಗಳು ಮತ್ತು ಮಾರುಕಟ್ಟೆ ಪ್ರವೇಶದ ವಿಚಾರದಲ್ಲಿ, ವಿಶೇಷವಾಗಿ ಅಕ್ಕಿ ಮತ್ತು ಸಕ್ಕರೆಗೆ ಸಂಬಂಧಿಸಿದಂತೆ, ಉಭಯ ದೇಶಗಳ ನಡುವೆ ಆಗಾಗ ಭಿನ್ನಾಭಿಪ್ರಾಯಗಳು ತಲೆದೋರುತ್ತಿವೆ.
ಇದನ್ನೂ ಓದಿ: ಕಾಶ್ಮೀರದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಚೀನಾ ವ್ಯಕ್ತಿಯ ಬಂಧನ!




















ದರ್ಶನ್ ಪತ್ನಿಗೆ ಅಶ್ಲೀಲ ಕಾಮೆಂಟ್ ಮಾಡಿದವರಲ್ಲಿ ಸುದೀಪ್ ಫ್ಯಾನ್ಸ್?