ಬೆಂಗಳೂರು : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಇತಿಹಾಸ ರಚಿಸಿದೆ. ಕಮ್ಯುನಿಸ್ಟ್ ಪಕ್ಷದ ವಿರುದ್ಧ ದಶಕಗಳವರೆಗೆ ಹೋರಾಡಿ ಪಶ್ಚಿಮ ಬಂಗಾಳದ ಅಧಿಕಾರದ ಗದ್ದುಗೆ ಹಿಡಿದಿದ್ದ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಇಳಿಸುವಲ್ಲಿ ಬಿಜೆಪಿಯು ಕೊನೆಗೂ ಯಶಸ್ವಿಯಾಗಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿಗೆ ಭಾರಿ ಸ್ಪರ್ಧೆಯೊಡ್ಡಿದ್ದ ಬಿಜೆಪಿ ಈಗ ಬಂಗಾಳದಲ್ಲಿ ಬಹುಮತ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದೆ. ಹೀಗೆ, ಕಳೆದ ಒಂದು ದಶಕದಲ್ಲಿಯೇ ಬಿಜೆಪಿಯು ಬಂಗಾಳದಲ್ಲಿ ಅಧಿಕಾರ ರಚಿಸಿದ್ದು ಹೇಗೆ? ಚುನಾವಣೆಯಲ್ಲಿ ಜನ ದೀದಿಯನ್ನು ಸೋಲಿಸಿದ್ದು ಹೇಗೆ? ಬಿಜೆಪಿಗೆ ಯಾವ ಅಂಶಗಳು ಪ್ಲಸ್ ಪಾಯಿಂಟ್ ಆದವು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಮೋದಿ-ಶಾ ಜೋಡಿ ಮೋಡಿ
ಬಿಜೆಪಿಯು ಬಂಗಾಳದಲ್ಲಿ ತನ್ನ ‘ಹಿಂದುತ್ವ’ ಅಜೆಂಡಾವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿತು. ನುಸುಳುಕೋರರ ಸಮಸ್ಯೆ ಮತ್ತು ತುಷ್ಟೀಕರಣದ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ ಮೋದಿ ಮತ್ತು ಅಮಿತ್ ಶಾ ಜೋಡಿ, ಹಿಂದೂ ಮತದಾರರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾದರು. ಇದು ಬಿಜೆಪಿಯ ವೋಟ್ ಬ್ಯಾಂಕ್ ಅನ್ನು ಗಣನೀಯವಾಗಿ ಹೆಚ್ಚಿಸುವ ಜತೆಗೆ ಅಧಿಕಾರವನ್ನೂ ತಂದು ಕೊಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಬಂಗಾಳದ ಮತದಾರರ ಮೇಲೆ ಭಾರಿ ಪ್ರಭಾವ ಬೀರಿತು. ಅವರು ನಡೆಸಿದ ಬೃಹತ್ ರ್ಯಾಲಿಗಳು ಮತ್ತು ನೀಡಿದ ‘ಆಸೋಲ್ ಪೋರಿಬೋರ್ತನ್’ (ನಿಜವಾದ ಬದಲಾವಣೆ) ಘೋಷಣೆಯು ಜನರ ಮನಸ್ಸಿನಲ್ಲಿ ಹೊಸ ಭರವಸೆ ಮೂಡಿಸಿತು. ನಾವು ಬಂಗಾಳದ ಗಡಿಗಳನ್ನು ರಕ್ಷಿಸುತ್ತೇವೆ, ನುಸುಳುಕೋರರನ್ನು ಓಡಿಸದೆ ಬಿಡುವುದಿಲ್ಲ ಎಂಬುದು ಸೇರಿ ಹಲವು ಘೋಷಣೆಗಳ ಮೋದಿ ಅವರು ಚುನಾವಣೆಯಲ್ಲಿ ಮೋಡಿ ಮಾಡಿದರು. ಇದು ಕೂಡ ಬಿಜೆಪಿ ಗೆಲುವಿಗೆ ಕಾರಣವಾಗಿದೆ.
ಬಲಿಷ್ಠ ಸಂಘಟನೆ
ಹಿಂದೆ ಬಂಗಾಳದಲ್ಲಿ ಕೇವಲ ಎಡಪಂಥೀಯರು ಮತ್ತು ಟಿಎಂಸಿ ಮಾತ್ರ ಬಲವಾದ ಕಾರ್ಯಕರ್ತರ ಪಡೆಯನ್ನು ಹೊಂದಿದ್ದವು. ಆದರೆ, ಬಿಜೆಪಿ ತಳಮಟ್ಟದಿಂದ ತನ್ನ ಸಂಘಟನೆಯನ್ನು ಕಟ್ಟಿತು. ಆರ್ ಎಸ್ ಎಸ್ ನೆರವಿನೊಂದಿಗೆ ಹಳ್ಳಿ ಹಳ್ಳಿಗಳಲ್ಲಿ ಬೂತ್ ಮಟ್ಟದ ಸಮಿತಿಗಳನ್ನು ರಚಿಸಿ, ಮತದಾರರ ಮನೆ ಬಾಗಿಲಿಗೆ ತಲುಪಿದ್ದು ಬಿಜೆಪಿಯ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.
ಕೇಂದ್ರ ಸರ್ಕಾರದ ಯೋಜನೆಗಳ ಪ್ರಚಾರ
ಪ್ರಧಾನ ಮಂತ್ರಿ ಆವಾಸ್ ಯೋಜನೆ, ಉಜ್ವಲ ಯೋಜನೆ ಮತ್ತು ಕಿಸಾನ್ ಸಮ್ಮಾನ್ ನಿಧಿಯಂತಹ ಕೇಂದ್ರ ಸರ್ಕಾರದ ನೇರ ಲಾಭದ ಯೋಜನೆಗಳ ಬಗ್ಗೆ ಬಿಜೆಪಿ ಇನ್ನಿಲ್ಲದ ಪ್ರಚಾರ ನೀಡಿತು. ರಾಜ್ಯ ಸರ್ಕಾರದ ಯೋಜನೆಗಳಿಗಿಂತ ಕೇಂದ್ರದ ಯೋಜನೆಗಳು ಹೆಚ್ಚು ಪಾರದರ್ಶಕವಾಗಿವೆ ಎಂದು ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಯಿತು.
ಟಿಎಂಸಿಯ ‘ಕಮಿಷನ್ ಸಂಸ್ಕೃತಿ’ ವಿರುದ್ಧದ ಅಸ್ತ್ರ
ಸ್ಥಳೀಯ ಮಟ್ಟದಲ್ಲಿ ಟಿಎಂಸಿ ನಾಯಕರ ವಿರುದ್ಧ ಕೇಳಿಬಂದ ಭ್ರಷ್ಟಾಚಾರ ಮತ್ತು ‘ಟೋಲಾಬಾಜಿ’ (ಕಮಿಷನ್ ಪಡೆಯುವುದು) ಆರೋಪಗಳನ್ನು ಬಿಜೆಪಿ ದೊಡ್ಡ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿತು. ಇದರಿಂದ ರೋಸಿಹೋದ ಜನಸಾಮಾನ್ಯರು ಬದಲಾವಣೆಗಾಗಿ ಬಿಜೆಪಿಯತ್ತ ಮುಖ ಮಾಡಿದರು. ಆಡಳಿತ ವಿರೋಧಿ ಅಲೆಯನ್ನು ಬಿಜೆಪಿಯು ಸದ್ಬಳಕೆ ಮಾಡಿಕೊಂಡಿತು.
ಪ್ರಭಾವಿ ನಾಯಕರ ಸೇರ್ಪಡೆ
ಟಿಎಂಸಿಯಲ್ಲಿ ಮಮತಾ ಬ್ಯಾನರ್ಜಿ ಅವರ ನಂತರದ ಪ್ರಭಾವಿ ನಾಯಕರಾಗಿದ್ದ ಸುವೇಂದು ಅಧಿಕಾರಿ ಮತ್ತು ಇತರ ಹಿರಿಯ ನಾಯಕರು ಬಿಜೆಪಿಗೆ ಸೇರ್ಪಡೆಯಾದದ್ದು ಪಕ್ಷಕ್ಕೆ ದೊಡ್ಡ ಬಲ ನೀಡಿತು. ಇದರಿಂದ ಟಿಎಂಸಿಯ ಆಂತರಿಕ ಕೋಟೆ ಬಿರುಕು ಬಿಟ್ಟಿತು ಮತ್ತು ಬಿಜೆಪಿಗೆ ಸ್ಥಳೀಯ ಮಟ್ಟದ ಸಮರ್ಥ ಹಾಗೂ ಗಟ್ಟಿ ನಾಯಕತ್ವ ಸಿಕ್ಕಂತಾಯಿತು.
ಇದನ್ನೂ ಓದಿ : ಅಸ್ಸಾಂನಲ್ಲಿ ಬಿಜೆಪಿಯನ್ನು ದಡ ಸೇರಿಸಿದ ‘ಹಿಂದುತ್ವದ ಅಲೆ’ – ಕಮಲದ ಗೆಲುವಿನ ಸೀಕ್ರೆಟ್ಸ್ ಇಲ್ಲಿವೆ!



















