ಪಂಜಾಬ್ : ಭಾರತ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಹಾಗೂ ನಾಯಕ ಶುಭಮನ್ ಗಿಲ್ ತಮ್ಮ ಕ್ರಿಕೆಟ್ ಭವಿಷ್ಯವನ್ನು ರೂಪಿಸಿದ ಮತ್ತು ಯಶಸ್ಸಿನ ಪ್ರಮುಖ ರೂವಾರಿಯಾದ ತಮ್ಮ ತಂದೆ ಲಖ್ವಿಂದರ್ ಸಿಂಗ್ ಗಿಲ್ ಅವರನ್ನು ಅತ್ಯಂತ ಭಾವುಕರಾಗಿ ಸ್ಮರಿಸಿದ್ದಾರೆ. ತಮ್ಮ ತಂದೆಯ ಆಸಕ್ತಿ, ಸಮರ್ಪಣಾಭಾವ ಹಾಗೂ ಅವರು ಕಂಡ ಆ ಒಂದು ಕನಸೇ ಇಂದು ತಾವು ಈ ಎತ್ತರಕ್ಕೆ ಬೆಳೆಯಲು ಅತಿ ದೊಡ್ಡ ಕಾರಣ ಎಂದು ಅವರು ಮನದುಂಬಿ ಹೇಳಿದ್ದಾರೆ.
ಪಂಜಾಬ್ನ ಮೊಹಾಲಿಯಲ್ಲಿ ಜರುಗಿದ ‘ಶೇರ್-ಎ-ಪಂಜಾಬ್ ಟಿ-20 ಲೀಗ್’ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಯುವ ಕ್ರಿಕೆಟಿಗ ಶುಭಮನ್ ಗಿಲ್, ತಮ್ಮ ಕ್ರಿಕೆಟ್ ಪಯಣದ ಹಿಂದಿರುವ ತಂದೆಯ ಪಾತ್ರವನ್ನು, ಹಳ್ಳಿಯ ಉಚಿತ ಕ್ರಿಕೆಟ್ ಅಕಾಡೆಮಿಯ ವಿಚಾರವನ್ನು ಹಾಗೂ ಎಂದಿಗೂ ಮರೆಯಲಾಗದ ‘ಲಕ್ಕಿ ಕುರ್ತಾ-ಪೈಜಾಮಾ’ ಕಥೆಯನ್ನು ಅಭಿಮಾನಿಗಳ ಮುಂದಿಟ್ಟರು. ಲಂಕಾ ಪ್ರವಾಸಕ್ಕೂ ಮುನ್ನ ಶುಭಮನ್ ಹಂಚಿಕೊಂಡಿರುವ ಈ ವಿಚಾರಗಳು ಎಲ್ಲರ ಗಮನ ಸೆಳೆದಿವೆ.
ತಂದೆಯ ಕನಸೇ ನನ್ನ ಯಶಸ್ಸಿನ ಮೆಟ್ಟಿಲು
ತಮ್ಮ ಕ್ರಿಕೆಟ್ ಬದುಕಿನ ಏಳಿಗೆಯ ಕುರಿತು ಮಾತನಾಡಿದ ಶುಭಮನ್ ಗಿಲ್, ತಮ್ಮ ತಂದೆಗೆ ತಮ್ಮನ್ನು ಓರ್ವ ಯಶಸ್ವಿ ಕ್ರಿಕೆಟಿಗನಾಗಿ ನೋಡಬೇಕು ಎಂಬ ದೊಡ್ಡ ಕನಸಿತ್ತು ಹಾಗೂ ಆ ಅದಮ್ಯ ಆಸಕ್ತಿಯೇ ತಮ್ಮ ಯಶಸ್ಸಿಗೆ ಬುನಾದಿ ಎಂದು ಬಣ್ಣಿಸಿದರು. ಕ್ರೀಡೆಯ ಮೇಲಿನ ಅವರ ಪ್ರೀತಿ ಹಾಗೂ ಆಸಕ್ತಿಯೇ ಇಂದು ನಾನು ಈ ಮಟ್ಟದ ವೇದಿಕೆಯಲ್ಲಿ ಕೂತು ಮಾತನಾಡಲು ಕಾರಣವಾಗಿದೆ ಎಂದು ಗಿಲ್ ಹೆಮ್ಮೆಯಿಂದ ನುಡಿದರು. ವಾಸ್ತವದಲ್ಲಿ, ಲಖ್ವಿಂದರ್ ಸಿಂಗ್ ಗಿಲ್ ಅವರು ಸ್ವತಃ ಓರ್ವ ಕ್ರಿಕೆಟಿಗನಾಗಬೇಕು ಎಂಬ ಆಸೆ ಹೊಂದಿದ್ದರು. ಆದರೆ ಅದು ಸಾಧ್ಯವಾಗದಿದ್ದಾಗ, ತಮ್ಮ ಅಪೂರ್ಣ ಕನಸನ್ನು ಮಗನ ಮೂಲಕ ನನಸು ಮಾಡಲು ನಿರ್ಧರಿಸಿ ತಮ್ಮ ಇಡೀ ಜೀವನವನ್ನು ಮಗನ ಏಳಿಗೆಗಾಗಿ ಮುಡಿಪಾಗಿಟ್ಟರು.
ಹಳ್ಳಿಯಲ್ಲಿರುವ ಉಚಿತ ಕ್ರಿಕೆಟ್ ಗರಡಿ
ಇದೇ ವೇಳೆ, ತಮ್ಮ ಹಳ್ಳಿಯಲ್ಲಿ ನಡೆಸಲಾಗುತ್ತಿರುವ ಉಚಿತ ಕ್ರಿಕೆಟ್ ಅಕಾಡೆಮಿ ಬಗ್ಗೆ ಗಿಲ್ ವಿಶೇಷ ಮಾಹಿತಿ ನೀಡಿದರು. ಅವರ ಕುಟುಂಬದ ನೇತೃತ್ವದಲ್ಲಿ ಈ ಅಕಾಡೆಮಿ ನಡೆಯುತ್ತಿದ್ದು, ಸುತ್ತಮುತ್ತಲಿನ ಹಳ್ಳಿಗಳ ಪ್ರತಿಭಾವಂತ ಮಕ್ಕಳು ಇಲ್ಲಿಗೆ ಬಂದು ಉಚಿತವಾಗಿ ಕ್ರಿಕೆಟ್ ಕಲಿಯುತ್ತಿದ್ದಾರೆ. ಲಖ್ವಿಂದರ್ ಸಿಂಗ್ ಅವರಿಗೆ ಬಿಡುವು ಸಿಕ್ಕಾಗಲೆಲ್ಲಾ ಅವರು ಆ ಮೈದಾನಕ್ಕೆ ತೆರಳಿ ಚಿಕ್ಕಮಕ್ಕಳು ಆಟವಾಡುವುದನ್ನು ಅತ್ಯಂತ ಆಸಕ್ತಿಯಿಂದ ನೋಡುತ್ತಿರುತ್ತಾರೆ. ಆರು ಅಥವಾ ಏಳು ವರ್ಷದ ಬಾಲಕನ ಉತ್ತಮ ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ನೋಡಿ ಬೆರಗಾಗುವ ಅವರು, ಆ ಬಗ್ಗೆ ಬಂದು ತಮ್ಮ ಮಗನ ಜೊತೆ ಉತ್ಸಾಹದಿಂದ ಹಂಚಿಕೊಳ್ಳುತ್ತಾರೆ. ಕ್ರಿಕೆಟ್ ಮೇಲಿನ ಅವರ ಈ ಉತ್ಸಾಹವೇ ಅನೇಕ ಯುವ ಬೆರಗುಗಳನ್ನು ಬೆಳಕಿಗೆ ತರುತ್ತಿದೆ ಎಂದು ಗಿಲ್ ವಿವರಿಸಿದರು.
ಕುರ್ತಾ-ಪೈಜಾಮಾದ ಹಿಂದಿರುವ ‘ಲಕ್ಕಿ’ ರಹಸ್ಯ
ಸಮಾರಂಭದಲ್ಲಿ ಗಿಲ್ ಹಂಚಿಕೊಂಡ ಮತ್ತೊಂದು ಅತ್ಯಂತ ಸ್ವಾರಸ್ಯಕರ ವಿಚಾರವೆಂದರೆ ಅವರ ತಂದೆಯ ‘ಲಕ್ಕಿ ಕುರ್ತಾ’ ಕಥೆ. ಕ್ರೀಡಾಲೋಕದಲ್ಲಿ ನಂಬಿಕೆಗಳು ಸಾಮಾನ್ಯ ಎಂಬಂತೆ, ಲಖ್ವಿಂದರ್ ಸಿಂಗ್ ಅವರಿಗೂ ಉಡುಪಿನ ವಿಚಾರದಲ್ಲಿ ಒಂದು ವಿಶೇಷವಾದ ನಂಬಿಕೆಯಿದೆ. ಭಾರತ ತಂಡದ ಪಂದ್ಯವಿರುವಾಗಲೆಲ್ಲಾ ಅವರು ಸಾಂಪ್ರದಾಯಿಕ ಕುರ್ತಾ-ಪೈಜಾಮಾ ಧರಿಸಲು ಇಷ್ಟಪಡುತ್ತಾರೆ. ಯಾವಾಗಲೆಲ್ಲಾ ಅವರು ಈ ಕುರ್ತಾ-ಪೈಜಾಮಾ ತೊಡುತ್ತಾರೋ, ಆಗ ಭಾರತ ತಂಡ ಪಂದ್ಯವನ್ನು ಗೆಲ್ಲುತ್ತದೆ ಅಥವಾ ತಮ್ಮ ಮಗ ಗಿಲ್ ಹೆಚ್ಚು ರನ್ ಗಳಿಸುತ್ತಾರೆ ಎಂಬುದು ಅವರ ಬಲವಾದ ನಂಬಿಕೆಯಾಗಿದೆ. ಇದೇ ಕಾರಣಕ್ಕಾಗಿ ಅವರು ಪಂದ್ಯ ವೀಕ್ಷಿಸಲು ಎಲ್ಲಿಗೆ ಹೋದರೂ ಅದೇ ಉಡುಪನ್ನು ಅತ್ಯಂತ ಖುಷಿಯಿಂದ ಧರಿಸುತ್ತಾರೆ ಎಂದು ಗಿಲ್ ಮುಗುಳ್ನಕ್ಕರು.
ಕೃಷಿಕನಿಂದ ಯಶಸ್ವಿ ಕ್ರಿಕೆಟಿಗನ ಹಿಂದಿನ ರೂವಾರಿ
ಪಂಜಾಬ್ ಮೂಲದ ಕೃಷಿಕರಾಗಿರುವ ಲಖ್ವಿಂದರ್ ಸಿಂಗ್ ತಮ್ಮ ಮಗನ ಭವಿಷ್ಯವನ್ನು ರೂಪಿಸಲು ಮಾಡಿದ ತ್ಯಾಗ ನಿಜಕ್ಕೂ ಅಪಾರವಾದದ್ದು. ತಮ್ಮ ಕೃಷಿ ಭೂಮಿಯಲ್ಲೇ ವಿಶೇಷವಾದ ಕ್ರಿಕೆಟ್ ಪಿಚ್ ನಿರ್ಮಿಸಿದ ಅವರು, ಪ್ರತಿನಿತ್ಯ ಮಗನಿಗೆ ಅಂದಾಜು ಐನೂರರಿಂದ ಏಳುನೂರು ಎಸೆತಗಳನ್ನು ಎಸೆಯುವ ಮೂಲಕ ಬ್ಯಾಟಿಂಗ್ ಕೌಶಲ್ಯವನ್ನು ಸಾಣೆ ಹಿಡಿದರು. ಅಷ್ಟೇ ಅಲ್ಲದೆ, ಶುಭಮನ್ ವಿಕೆಟ್ ಪಡೆದ ಬೌಲರ್ಗಳಿಗೆ ಬಹುಮಾನ ನೀಡುವುದಾಗಿ ಘೋಷಿಸುವ ಮೂಲಕ ಮಗನ ಸ್ಪರ್ಧಾತ್ಮಕ ಗುಣಬೆಳೆಸಿದ್ದರು. ಮಗನಿಗೆ ಇನ್ನೂ ಉತ್ತಮ ಮತ್ತು ವೃತ್ತಿಪರ ತರಬೇತಿ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ತಮ್ಮ ಇಡೀ ಕುಟುಂಬವನ್ನೇ ಫಾಜಿಲ್ಕಾದಿಂದ ಮೊಹಾಲಿಗೆ ಸ್ಥಳಾಂತರಿಸಿದರು. ಒಬ್ಬ ತಂದೆ ತನ್ನ ಮಗನಿಗಾಗಿ ಬೆವರಸುರಿಸಿ ಮಾಡಿದ ಆ ನಿರಂತರ ಶ್ರಮದ ಪ್ರತಿಫಲವೇ ಇಂದು ಭಾರತೀಯ ಕ್ರಿಕೆಟ್ಗೆ ಶುಭಮನ್ ಗಿಲ್ ಎಂಬ ಅಮೂಲ್ಯ ರತ್ನ ಸಿಗಲು ಕಾರಣವಾಗಿದೆ.
ಇದನ್ನೂ ಓದಿ : ತಾಯ್ನಾಡಿಗೆ ಮರಳಿದ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾತಾರೆಗಳಿಗೆ ಅದ್ದೂರಿ ಸ್ವಾಗತ!



















