ಬೆಂಗಳೂರು : ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಬಿಜೆಪಿಯು ಹ್ಯಾಟ್ರಿಕ್ ಸಾಧಿಸಿದೆ. ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸುವ ಮೂಲಕ ಈಶಾನ್ಯ ಭಾರತದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿದೆ ಎಂಬುದನ್ನು ಸಾಬೀತುಪಡಿಸಿದೆ. ಹೀಗೆ ಬಿಜೆಪಿಯು ಅಸ್ಸಾಂನಲ್ಲಿ ಸತತ ಮೂರನೇ ಬಾರಿಗೆ ಗೆಲುವು ಸಾಧಿಸಲು ಹಲವು ಕಾರಣಗಳಿವೆ. ಮೋದಿ, ಅಮಿತ್ ಶಾ ಪ್ರಚಾರ, ಹಿಮಂತ ಬಿಸ್ವಾ ಶರ್ಮಾ ನಾಯಕತ್ವ, ಹಿಂದುತ್ವದ ರಾಜಕಾರಣ ಸೇರಿ ಹತ್ತಾರು ಕಾರಣಗಳು ಮೋಡಿವೆ. ಅಂತಹ ಪ್ರಮುಖ ಕಾರಣಗಳ ಪಟ್ಟಿ ಇಲ್ಲಿದೆ.
ಹಿಮಂತ ಬಿಸ್ವಾ ಶರ್ಮಾ ‘ಅಸ್ಸಾಂ ಫಸ್ಟ್’ ಅಭಿವೃದ್ಧಿ ಮಾದರಿ
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಳೆದ ಐದು ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಹೊಸ ಸೇತುವೆಗಳು ಮತ್ತು ರಾಜ್ಯಾದ್ಯಂತ ನಿರ್ಮಿಸಲಾದ ನಾಲ್ಕು ಪಥದ ರಸ್ತೆಗಳು ಜನರ ವಿಶ್ವಾಸ ಗಳಿಸಲು ನೆರವಾದವು. ರಾಜ್ಯದಲ್ಲಿ ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳ ಸ್ಥಾಪನೆಯು ಯುವ ಸಮೂಹವನ್ನು ಬಿಜೆಪಿಯತ್ತ ಸೆಳೆಯಿತು. ಹಾಗೆಯೇ, ಅಸ್ಸಾಂ ಮಾತ್ರವಲ್ಲದೆ ಇಡೀ ಈಶಾನ್ಯ ಭಾರತದ ಪ್ರಭಾವಿ ನಾಯಕನಾಗಿ ಹೊರಹೊಮ್ಮಿದ ಶರ್ಮಾ ಅವರು, ಪ್ರಚಾರದ ಸಂದರ್ಭದಲ್ಲಿ ನೀಡಿದ ನೇರ ಮತ್ತು ಖಡಕ್ ಭಾಷಣಗಳು ಜನರನ್ನು ಸೆಳೆದವು ಎಂದು ವಿಶ್ಲೇಷಿಸಲಾಗುತ್ತಿದೆ.
ಬಲಿಷ್ಠ ಹಿಂದುತ್ವ ಮತ್ತು ಸಾಂಸ್ಕೃತಿಕ ಅಸ್ಮಿತೆ
ಅಸ್ಸಾಂನ ಸ್ಥಳೀಯ ಸಂಸ್ಕೃತಿಯನ್ನು ರಕ್ಷಿಸುವ ಭರವಸೆಯೊಂದಿಗೆ ಬಿಜೆಪಿ ಚುನಾವಣಾ ಅಖಾಡಕ್ಕಿಳಿದಿತ್ತು. ಅಲ್ಲದೆ, ಅಕ್ರಮ ನುಸುಳುಕೋರರ ಪತ್ತೆ ಮತ್ತು ಭೂಮಿಯ ಹಕ್ಕು ಕೇವಲ ಅಸ್ಸಾಂನ ಮೂಲ ನಿವಾಸಿಗಳಿಗೆ ಮಾತ್ರ ಎಂಬ ನಿಲುವು ಮೇಲ್ವರ್ಗದ ಮತ್ತು ಬುಡಕಟ್ಟು ಮತದಾರರನ್ನು ಒಂದುಗೂಡಿಸಿತು. ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು ಹಿಂದೂ ಮತಗಳ ಧ್ರುವೀಕರಣಕ್ಕೆ ಕಾರಣವಾಯಿತು ಎಂದೇ ಹೇಳಲಾಗುತ್ತಿದೆ.
ಮಹಿಳಾ ಮತದಾರರ ಒಲವು
ಬಿಜೆಪಿಯ ಈ ಗೆಲುವಿನಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದಿದೆ. ಒರುನೋದೋಯ್ (Orunodoi) ಯೋಜನೆಯಡಿ ಬಡ ಕುಟುಂಬಗಳ ಮಹಿಳೆಯರಿಗೆ ನೇರವಾಗಿ ಹಣಕಾಸಿನ ನೆರವು ನೀಡುತ್ತಿರುವುದು ಗ್ರಾಮೀಣ ಭಾಗದ ಮಹಿಳಾ ಮತದಾರರನ್ನು ಬಿಜೆಪಿಯ ಗಟ್ಟಿ ಬೆಂಬಲಿಗರನ್ನಾಗಿ ಮಾಡಿತು. ಮೈಕ್ರೋಫೈನಾನ್ಸ್ ಸಾಲ ಮನ್ನಾ ಮಾಡುವ ನಿರ್ಧಾರವೂ ಕೂಡ ಬಡ ವರ್ಗದ ಮಹಿಳೆಯರಿಗೆ ವರದಾನವಾಯಿತು.
ವಿರೋಧ ಪಕ್ಷಗಳ ಒಕ್ಕೂಟದ ವೈಫಲ್ಯ
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟವು ಸಮರ್ಥ ನಾಯಕತ್ವದ ಕೊರತೆ ಎದುರಿಸಿತು. ಎಐಯುಡಿಎಫ್ ಜತೆಗಿನ ಅಸ್ಪಷ್ಟ ಮೈತ್ರಿಯು ಕಾಂಗ್ರೆಸ್ಸಿಗೆ ಹಿನ್ನಡೆಯಾಯಿತು. ಬಿಜೆಪಿ ಇದನ್ನು ‘ತುಷ್ಟೀಕರಣದ ರಾಜಕಾರಣ’ ಎಂದು ಬಿಂಬಿಸುವಲ್ಲಿ ಯಶಸ್ವಿಯಾಯಿತು.
ಡಬಲ್ ಎಂಜಿನ್ ಸರ್ಕಾರ
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಆಡಳಿತವಿದ್ದರೆ ಅಭಿವೃದ್ಧಿ ವೇಗವಾಗಿ ನಡೆಯುತ್ತದೆ ಎಂಬ ಮಂತ್ರವನ್ನು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ತಮ್ಮ ರ್ಯಾಲಿಗಳಲ್ಲಿ ಯಶಸ್ವಿಯಾಗಿ ಸಾರಿದರು.
ಬುಡಕಟ್ಟು ಸಮುದಾಯಗಳ ಬೆಂಬಲ
ಹಿಂದೆ ಬಿಜೆಪಿಯಿಂದ ದೂರವಿದ್ದ ಹಲವು ಬುಡಕಟ್ಟು ಸಂಘಟನೆಗಳ ಜತೆ ಶಾಂತಿ ಒಪ್ಪಂದ ಮಾಡಿಕೊಳ್ಳುವಲ್ಲಿ, ಅವರ ವಿಶ್ವಾಸ ಗಳಿಸುವಲ್ಲಿ ಹಿಮಂತ ಸರ್ಕಾರ ಯಶಸ್ವಿಯಾಯಿತು. ಇದು ಬೋಡೋಲ್ಯಾಂಡ್ ಸೇರಿ ವಿವಿಧ ಬುಡಕಟ್ಟು ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಿಜೆಪಿಗೆ ಲಾಭ ತಂದುಕೊಟ್ಟಿತು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಫಲಿತಾಂಶದ ಬೆನ್ನಲ್ಲೇ ಗೆದ್ದ ಅಭ್ಯರ್ಥಿಗಳನ್ನು ರೆಸಾರ್ಟ್ಗೆ ಸ್ಥಳಾಂತರಿಸಲು ವಿಜಯ್ ಮಾಸ್ಟರ್ ಪ್ಲಾನ್!



















