ನವದೆಹಲಿ : ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನಂತರ ತೀವ್ರ ಮುಖಭಂಗ ಅನುಭವಿಸಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನ್ನ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಲು ಮುಂದಾಗಿದೆ.
ಪರೀಕ್ಷಾ ಪತ್ರಗಳ ಸುರಕ್ಷತೆ, ಕಚೇರಿಗಳ 24×7 ಭದ್ರತೆ, ನೈರ್ಮಲ್ಯ ಹಾಗೂ ಸುರಕ್ಷಿತ ಮುದ್ರಣ ಕಾರ್ಯಗಳಿಗಾಗಿ ಸುಮಾರು 7.5 ಕೋಟಿ ರೂಪಾಯಿ ಮೌಲ್ಯದ ಬೃಹತ್ ಟೆಂಡರ್ ಅನ್ನು ಎನ್ಟಿಎ ಆಹ್ವಾನಿಸಿದೆ. ಜುಲೈ 25ರಂದು ಹೊರಡಿಸಲಾದ ಈ ಟೆಂಡರ್ ಪ್ರಕಾರ, ಆಯ್ಕೆಯಾಗುವ ಭದ್ರತಾ ಸಂಸ್ಥೆಯು ದೆಹಲಿಯ ಮಿಂಟೋ ರಸ್ತೆಯಲ್ಲಿರುವ ಎನ್ಟಿಎ ಪ್ರಧಾನ ಕಚೇರಿ, ಓಖ್ಲಾ ಪ್ರಾದೇಶಿಕ ಕಚೇರಿ ಸೇರಿದಂತೆ ಪ್ರಮುಖ ಕೇಂದ್ರಗಳಿಗೆ ಭದ್ರತೆ ಒದಗಿಸಲಿದೆ.
ಪರೀಕ್ಷಾ ಮಂಡಳಿಯ ಕಚೇರಿಗಳು, ರಹಸ್ಯ ಪರೀಕ್ಷಾ ಸಾಮಗ್ರಿಗಳು, ಸರ್ವರ್ ಕೊಠಡಿಗಳು, ಸ್ಟ್ರಾಂಗ್ ರೂಮ್ಗಳು ಮತ್ತು ದಾಖಲೆ ಕೊಠಡಿಗಳ ಸಂಪೂರ್ಣ ರಕ್ಷಣೆಯ ಹೊಣೆಯನ್ನು ಈ ಸಂಸ್ಥೆ ಹೊರಲಿದೆ. ಮೊದಲ ಹಂತದಲ್ಲಿ 2 ವರ್ಷಗಳ ಅವಧಿಗೆ ಈ ಒಪ್ಪಂದ ಇರಲಿದ್ದು, ಸಂಸ್ಥೆಯ ಕಾರ್ಯಕ್ಷಮತೆ ಆಧರಿಸಿ ಮುಂದಿನ 2 ವರ್ಷಗಳಿಗೆ ವಿಸ್ತರಿಸುವ ಅವಕಾಶವೂ ಇದೆ. ಆಸಕ್ತ ಸಂಸ್ಥೆಗಳು ಆಗಸ್ಟ್ 17 ರವರೆಗೆ ಬಿಡ್ ಸಲ್ಲಿಸಬಹುದಾಗಿದೆ.
‘ಗುಣಮಟ್ಟ’ಕ್ಕೆ ಮೊದಲ ಆದ್ಯತೆ
ಸಾಮಾನ್ಯವಾಗಿ ಸರ್ಕಾರಿ ಇಲಾಖೆಗಳಲ್ಲಿ ಕಡಿಮೆ ವೆಚ್ಚಕ್ಕೆ (Lowest Bid) ಟೆಂಡರ್ ನೀಡುವ ಪದ್ಧತಿಯಿದೆ. ಆದರೆ, ಎನ್ಟಿಎ ಈ ಬಾರಿ ಆ ನಿಯಮವನ್ನು ಬದಿಗೊತ್ತಿ ‘ಗುಣಮಟ್ಟ ಮತ್ತು ವೆಚ್ಚ ಆಧಾರಿತ ಆಯ್ಕೆ’ (QCBS) ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ. ಇದರಡಿ ತಾಂತ್ರಿಕ ಸಾಮರ್ಥ್ಯಕ್ಕೆ ಶೇ.70ರಷ್ಟು ಮತ್ತು ಆರ್ಥಿಕ ಬಿಡ್ಗೆ ಶೇಕಡಾ 30 ರಷ್ಟು ಆದ್ಯತೆ ನೀಡಲಾಗುತ್ತದೆ. ಅಂದರೆ, ಕನಿಷ್ಠ 5 ವರ್ಷಗಳ ಕಾಲ ಕೇಂದ್ರ ಸರ್ಕಾರಿ ಸಂಸ್ಥೆಗಳು, ವಿಮಾನ ನಿಲ್ದಾಣ ಅಥವಾ ಮೆಟ್ರೋ ವ್ಯವಸ್ಥೆಗಳಲ್ಲಿ ಭದ್ರತೆ ಒದಗಿಸಿದ ಅನುಭವ ಹಾಗೂ ಕನಿಷ್ಠ 10 ಕೋಟಿ ರೂ. ವಾರ್ಷಿಕ ವಹಿವಾಟು ಹೊಂದಿರುವ ಅರ್ಹ ಸಂಸ್ಥೆಗಳಿಗೆ ಮಾತ್ರ ಅವಕಾಶ ಸಿಗಲಿದೆ.
ಜಿಪಿಎಸ್ ಟ್ರ್ಯಾಕಿಂಗ್, ಬಯೋಮೆಟ್ರಿಕ್ ಕಾವಲು
ಆಯ್ಕೆಯಾಗುವ ಭದ್ರತಾ ಸಂಸ್ಥೆಯು ಕಚೇರಿಗೆ ಬರುವ ಸಿಬ್ಬಂದಿ ಮತ್ತು ಸಂದರ್ಶಕರನ್ನು ಬಯೋಮೆಟ್ರಿಕ್, ಮೆಟಲ್ ಡಿಟೆಕ್ಟರ್ಗಳ ಮೂಲಕ ತೀವ್ರ ತಪಾಸಣೆಗೆ ಒಳಪಡಿಸಬೇಕಾಗುತ್ತದೆ. ಭದ್ರತಾ ಸಿಬ್ಬಂದಿಯ ಚಲನವಲನಗಳನ್ನು ಗಮನಿಸಲು ಜಿಪಿಎಸ್ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ ಮತ್ತು ಡಿಜಿಟಲ್ ಘಟನಾ ವರದಿ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಜೊತೆಗೆ, ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಗೌಪ್ಯ ಮಾಹಿತಿಯನ್ನು ಯಾವುದೇ ಹಂತದಲ್ಲೂ ಸೋರಿಕೆ ಮಾಡದಂತೆ ಕಟ್ಟುನಿಟ್ಟಿನ ನಿಯಮಗಳನ್ನು ವಿಧಿಸಲಾಗಿದೆ.
ಪರೀಕ್ಷಾ ವ್ಯವಸ್ಥೆಯ ಪುನಶ್ಚೇತನದತ್ತ ಹೆಜ್ಜೆ
ಕಳೆದ ಮೇ ತಿಂಗಳಿನಲ್ಲಿ ನಡೆದಿದ್ದ ನೀಟ್-ಯುಜಿ ಪರೀಕ್ಷೆಯ ಪತ್ರಿಕೆ ಸೋರಿಕೆಯಾಗಿ ಪರೀಕ್ಷೆಯನ್ನು ರದ್ದುಗೊಳಿಸಿ, ಜೂನ್ನಲ್ಲಿ ಮರುಪರೀಕ್ಷೆ ನಡೆಸಲಾಗಿತ್ತು. ಇದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಸಂಸತ್ತಿನಲ್ಲಿ ‘ಸಾರ್ವಜನಿಕ ಪರೀಕ್ಷೆಗಳ ಅಕ್ರಮ ತಡೆ ಕಾಯ್ದೆ’ಯನ್ನೂ ಜಾರಿಗೆ ತರಲಾಗಿತ್ತು. ಪ್ರಸ್ತುತ ಎನ್ಟಿಎ ತೆಗೆದುಕೊಂಡಿರುವ ಈ ಕಟ್ಟುನಿಟ್ಟಿನ ಕ್ರಮಗಳು ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಎಂದು ಪರಿಗಣಿಸಲ್ಪಟ್ಟಿದೆ.
ಇದನ್ನೂ ಓದಿ : ‘ಅಧಿಕಾರಕ್ಕೆ ಬಂದರೂ ಹಫ್ತಾ ವಸೂಲಿ ತಡೆಯಲು ಸಾಧ್ಯವಾಗಿಲ್ಲ’ : ಪ.ಬಂಗಾಳ ಬಿಜೆಪಿ ಅಧ್ಯಕ್ಷ ಅಚ್ಚರಿ ಹೇಳಿಕೆ


















