ಭೋಪಾಲ್ : ನಟಿ, ಮಾಡೆಲ್ ತ್ವಿಷಾ ಶರ್ಮಾ ಅವರ ನಿಗೂಢ ಸಾವು ಪ್ರಕರಣದ ತನಿಖೆಯು ದಿನಕಳೆದಂತೆ ಚುರುಕುಗೊಳ್ಳುತ್ತಿದ್ದು, ತನಿಖೆ ಕೈಗೆತ್ತಿಕೊಂಡಿರುವ ಸಿಬಿಐ, ಘಟನೆಯ ಹಿಂದಿನ ರಹಸ್ಯವನ್ನು ಬೇಧಿಸಲು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಮೊರೆ ಹೋಗಿದೆ. ಮೇ 12ರಂದು ಭೋಪಾಲ್ನಲ್ಲಿರುವ ತಮ್ಮ ಪತಿಯ ಮನೆಯಲ್ಲಿ ತ್ವಿಷಾ ಶವವಾಗಿ ಪತ್ತೆಯಾಗಿದ್ದರು. ಸಾವಿಗೂ ಮುನ್ನ ಅವರ ಕೊನೆಯ ಕ್ಷಣಗಳಲ್ಲಿ ಏನಾಗಿತ್ತು ಎಂಬುದನ್ನು ಪತ್ತೆಹಚ್ಚಲು ಸಿಬಿಐ ಈಗ ‘ಟನಲ್ ವ್ಯೂ’ (Tunnel View) ಎಂಬ ವಿಶೇಷ ತನಿಖಾ ತಂತ್ರಜ್ಞಾನವನ್ನು ಬಳಸಿಕೊಂಡು ನಿಮಿಷದಿಂದ ನಿಮಿಷದ ವರ್ಚುವಲ್ ಮರುಸೃಷ್ಟಿ (ಡಿಜಿಟಲ್ ರಿಕನ್ಸ್ಟ್ರಕ್ಷನ್) ನಡೆಸುತ್ತಿದೆ.
ಏನಿದು ‘ಟನಲ್ ವ್ಯೂ’ ಡಿಜಿಟಲ್ ತಂತ್ರಜ್ಞಾನ?
‘ಟನಲ್ ವ್ಯೂ’ ಎನ್ನುವುದು ಅಪರಾಧ ತನಿಖೆಯಲ್ಲಿ ಬಳಸಲಾಗುವ ಅತ್ಯಂತ ಸುಧಾರಿತ ವೈಜ್ಞಾನಿಕ ವಿಧಾನವಾಗಿದೆ. ಇದರ ಅಡಿಯಲ್ಲಿ ತನಿಖಾಧಿಕಾರಿಗಳು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಫೋನ್ ಕರೆಗಳ ವಿವರಗಳು (CDRs), ವೈ-ಫೈ ಲಾಗ್ಗಳು, ಇಂಟರ್ನೆಟ್ ಚಟುವಟಿಕೆಗಳು, ಸ್ಮಾರ್ಟ್ ಸಾಧನಗಳ ಡೇಟಾ, ವಿಧಿವಿಜ್ಞಾನ ಮ್ಯಾಪಿಂಗ್ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಒಂದೇ ಸೂರಿನಡಿ ತಂದು ಸಿಂಕ್ರೊನೈಸ್ ಮಾಡುತ್ತಾರೆ. ಭೋಪಾಲ್ನ ಕಟಾರಾ ಹಿಲ್ಸ್ ನಿವಾಸದ ಕೊಠಡಿಗಳ ನಕ್ಷೆಯನ್ನು ಬಳಸಿಕೊಂಡು ಸಿಬಿಐ ಈಗ ಮನೆಯ ವರ್ಚುವಲ್ ಮಾದರಿಯನ್ನು ಸೃಷ್ಟಿಸುತ್ತಿದೆ. ಇದರ ಮೂಲಕ ಘಟನೆಯ ರಾತ್ರಿ ಯಾರು ಮನೆಗೆ ಬಂದಿದ್ದರು, ಯಾರು ಹೊರಗೆ ಹೋಗಿದ್ದರು ಮತ್ತು ಸಾಕ್ಷಿಗಳ ಹೇಳಿಕೆಯಲ್ಲಿ ಏನಾದರೂ ವ್ಯತ್ಯಾಸಗಳಿವೆಯೇ ಎಂಬುದನ್ನು ನಿಖರವಾಗಿ ಪತ್ತೆಹಚ್ಚಬಹುದಾಗಿದೆ. ಸಾಕ್ಷ್ಯ ನಾಶಪಡಿಸುವ ಯಾವುದೇ ಪ್ರಯತ್ನ ನಡೆದಿದ್ದರೂ ಈ ತಂತ್ರಜ್ಞಾನದ ಮೂಲಕ ಅದನ್ನು ಪತ್ತೆಹಚ್ಚಬಹುದು.
ಕೌಟುಂಬಿಕ ದೌರ್ಜನ್ಯ, ಕೊಲೆಯ ಆರೋಪ
ನೋಯ್ಡಾ ಮೂಲದ 33 ವರ್ಷದ ತ್ವಿಷಾ ಶರ್ಮಾ ಅವರು ಕಳೆದ ವರ್ಷದ ಡಿಸೆಂಬರ್ನಲ್ಲಿ ಭೋಪಾಲ್ನ ಸಮರ್ಥ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಆದರೆ ಮೇ 12 ರಂದು ಅವರು ಶಂಕಾಸ್ಪದ ರೀತಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತ್ವಿಷಾ ಅವರ ಪೋಷಕರು ತಮ್ಮ ಮಗಳ ಸಾವು ಆತ್ಮಹತ್ಯೆಯಲ್ಲ, ಅದು ಕೊಲೆ ಎಂದು ಆರೋಪಿಸಿದ್ದಾರೆ. ಪತಿ ಮತ್ತು ಅತ್ತೆಯ ಕಡೆಯವರು ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅವರು ದೂರಿದ್ದಾರೆ.
ಮೊದಲ ಪೋಸ್ಟ್ಮಾರ್ಟಮ್ ವರದಿಯನ್ನು ಒಪ್ಪದ ಪೋಷಕರು ದೆಹಲಿಯ ಏಮ್ಸ್ನಲ್ಲಿ ಎರಡನೇ ಬಾರಿಗೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಪಟ್ಟು ಹಿಡಿದಿದ್ದರು. ಅದರಂತೆ ಏಮ್ಸ್ನಲ್ಲಿ ಎರಡನೇ ಮರಣೋತ್ತರ ಪರೀಕ್ಷೆ ನಡೆದ ನಂತರ ಮೇ 24 ರಂದು ತ್ವಿಷಾ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಇನ್ನೊಂದೆಡೆ, ತ್ವಿಷಾ ಅವರ ಅತ್ತೆ-ಮಾವ ಈ ಆರೋಪಗಳನ್ನು ನಿರಾಕರಿಸಿದ್ದು, ಏಪ್ರಿಲ್ನಲ್ಲಿ ಗರ್ಭಿಣಿಯಾಗಿರುವ ವಿಷಯ ತಿಳಿದ ನಂತರ ತ್ವಿಷಾ ವಿಚಿತ್ರವಾಗಿ ವರ್ತಿಸುತ್ತಿದ್ದರು ಮತ್ತು ಗರ್ಭಪಾತ ಮಾಡಿಸಿಕೊಳ್ಳಲು ಬಯಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಮಾಜಿ ನ್ಯಾಯಾಧೀಶೆಯಾಗಿದ್ದ ಅತ್ತೆಯ ಬಂಧನ
ಈ ಹೈಪ್ರೊಫೈಲ್ ಪ್ರಕರಣದಲ್ಲಿ ಸಿಬಿಐ ಭಾರಿ ಮುನ್ನಡೆ ಸಾಧಿಸಿದ್ದು, ತ್ವಿಷಾ ಶರ್ಮಾ ಅವರ ಅತ್ತೆ, ಮಾಜಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರನ್ನು ಮೇ 28 ರಂದು ಬಂಧಿಸಿದೆ. ಭೋಪಾಲ್ನ ಬಾಗ್ ಮುಘಾಲಿಯಾ ಎಕ್ಸ್ಟೆನ್ಶನ್ ಪ್ರದೇಶದಲ್ಲಿರುವ ಅವರ ನಿವಾಸದಲ್ಲಿ ಸುದೀರ್ಘ ವಿಚಾರಣೆ ನಡೆಸಿದ ನಂತರ ಸಿಬಿಐ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಸೆಷನ್ಸ್ ನ್ಯಾಯಾಲಯವು ಗಿರಿಬಾಲಾ ಅವರಿಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಮಧ್ಯಪ್ರದೇಶ ಹೈಕೋರ್ಟ್ ರದ್ದುಗೊಳಿಸಿದ ಬೆನ್ನಲ್ಲೇ ಈ ಬಂಧನ ನಡೆದಿದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಜಾಮೀನು ರದ್ದುಗೊಳಿಸುವುದು ಸೂಕ್ತ ಎಂದು ಹೈಕೋರ್ಟ್ ತಿಳಿಸಿದೆ. ಘಟನೆಯ ನಂತರ 10 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಪತಿ ಸಮರ್ಥ್ ಸಿಂಗ್ ಮೇ 22ರಂದು ಜಬಲ್ಪುರದಲ್ಲಿ ಶರಣಾಗಿದ್ದ. ಸದ್ಯ ತಾಯಿ ಮತ್ತು ಮಗ ಇಬ್ಬರನ್ನೂ ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲು ಸಿಬಿಐ ಸಿದ್ಧತೆ ನಡೆಸಿದ್ದು, ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆಯನ್ನು ಚುರುಕುಗೊಳಿಸಿದೆ.
ಇದನ್ನೂ ಓದಿ : ನೀಟ್ ಮರುಪರೀಕ್ಷೆಗೆ ವಾಯುಪಡೆ ಕಾವಲು : ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರದ ಮಹತ್ವದ ಹೆಜ್ಜೆ!



















