ನವದೆಹಲಿ : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಲಡಾಖ್ನ ಪ್ರಸಿದ್ಧ ಶಿಕ್ಷಣ ತಜ್ಞ, ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ದೆಹಲಿಯ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಬಾಲಿವುಡ್ನ ಸೂಪರ್ಹಿಟ್ ಸಿನಿಮಾ ‘3 ಈಡಿಯಟ್ಸ್’ ಖ್ಯಾತಿಯ ನಟ ಓಮಿ ವೈದ್ಯ (ಚತುರ್ ಪಾತ್ರಧಾರಿ) ಭಾವುಕ ಬೆಂಬಲ ಸೂಚಿಸಿದ್ದಾರೆ.
‘3 ಈಡಿಯಟ್ಸ್’ ಚಿತ್ರದ ಜನಪ್ರಿಯ ಪಾತ್ರ ‘ಫುನ್ಸುಖ್ ವಾಂಗ್ಡು’ಗೆ ಸ್ಫೂರ್ತಿಯಾಗಿರುವ ವಾಂಗ್ಚುಕ್ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಅವರ ಹೋರಾಟದ ಕಡೆಗೆ ಇಡೀ ದೇಶ ಗಮನಹರಿಸಬೇಕು ಎಂದು ಓಮಿ ವೈದ್ಯ ಕರೆ ನೀಡಿದ್ದಾರೆ. ನಟ ಓಮಿ ವೈದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, “ನನಗೆ ಫುನ್ಸುಖ್ ವಾಂಗ್ಡು ಸಾಯುವುದು ಇಷ್ಟವಿಲ್ಲ. ‘3 ಈಡಿಯಟ್ಸ್’ ಚಿತ್ರದ ಅಮೀರ್ ಖಾನ್ ಅವರ ಪಾತ್ರವು ಲಡಾಖ್ನ ನೈಜ ಹೀರೋ ಸೋನಮ್ ವಾಂಗ್ಚುಕ್ ಅವರಿಂದ ಪ್ರೇರಿತವಾಗಿದೆ ಎಂಬುದು ನಿಮಗೆ ಗೊತ್ತೇ? ನಾನು ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದೇನೆ, ಅವರು ಅತ್ಯಂತ ಸರಳ ಹಾಗೂ ಅಸಾಧಾರಣ ಸಾಧಕ. ಪ್ರಸ್ತುತ ಅವರು ದೀರ್ಘಾವಧಿಯ ಉಪವಾಸ ಸತ್ಯಾಗ್ರಹದಲ್ಲಿದ್ದು, ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ತೀವ್ರವಾಗಿ ಕುಸಿದಿದೆ.
ಮಾಧ್ಯಮಗಳು ಇದನ್ನು ವರದಿ ಮಾಡುತ್ತಿವೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇದು ಗಂಭೀರ ವಿಷಯ. ಅವರ ಬೇಡಿಕೆಗಳೇನು ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು,” ಎಂದು ಮನವಿ ಮಾಡಿದ್ದಾರೆ. ಈ ವಿಡಿಯೋವನ್ನು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರೂ ಹಂಚಿಕೊಂಡು, ಅಮೀರ್ ಖಾನ್ ಈ ಬಗ್ಗೆ ಯಾವಾಗ ಪ್ರತಿಕ್ರಿಯಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ನೀಟ್ ಅಕ್ರಮ ವಿರೋಧಿಸಿ 16 ದಿನಗಳಿಂದ ಉಪವಾಸ
ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ‘ನೀಟ್’ (NEET) ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಕಳೆದ 24 ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಜೂನ್ 28 ರಂದು ಈ ಹೋರಾಟಕ್ಕೆ ಕೈಜೋಡಿಸಿದ ಸೋನಮ್ ವಾಂಗ್ಚುಕ್ ಅವರು, ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅವರ ನಿರಶನವು ಮಂಗಳವಾರಕ್ಕೆ 16ನೇ ದಿನಕ್ಕೆ ಕಾಲಿಟ್ಟಿದೆ. ನಿರಂತರ ಉಪವಾಸದಿಂದಾಗಿ ಅವರು ಈಗಾಗಲೇ ಸುಮಾರು 9 ಕೆಜಿ ತೂಕ ಕಳೆದುಕೊಂಡಿದ್ದು, ಅವರ ದೇಹ ಸ್ಥಿತಿ ಗಂಭೀರವಾಗಿದೆ.
ಸಂಸತ್ ಚಲೋಗೆ ಸಿದ್ಧತೆ
ಈ ಹೋರಾಟದ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಲಾಗಿದೆ. ಅಷ್ಟೇ ಅಲ್ಲದೆ, ನೀಟ್ ವಿವಾದದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಆಕಾಂಕ್ಷಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿರುವ ಜುಲೈ 20ರಂದು ಜಂತರ್ ಮಂತರ್ನಿಂದ ಸಂಸತ್ ಭವನದವರೆಗೆ ಬೃಹತ್ ಶಾಂತಿಯುತ ಮೆರವಣಿಗೆ ನಡೆಸಲು ಪ್ರತಿಭಟನಾಕಾರರು ನಿರ್ಧರಿಸಿದ್ದು, ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳ ನಾಯಕರು ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ : ಇ-20 ಪೆಟ್ರೋಲ್ ವಿವಾದ : ಮನೆಯಲ್ಲಿ ಕಾರಿನ ಮೈಲೇಜ್ ನಿಖರವಾಗಿ ಅಳೆಯಲು ಸಾಧ್ಯವಿಲ್ಲ ಎಂದ ಗಡ್ಕರಿ!



















