ನವದೆಹಲಿ : ದೇಶಾದ್ಯಂತ ”ಫ್ರಿಡ್ಜ್ ಮರ್ಡರ್” ಎಂದೇ ಕುಖ್ಯಾತಿ ಗಳಿಸಿರುವ ಶ್ರದ್ಧಾ ವಾಕರ್ ಭೀಕರ ಕೊಲೆ ಪ್ರಕರಣ ನಡೆದು ನಾಲ್ಕು ವರ್ಷಗಳು ಕಳೆದಿದ್ದರೂ, ಸಂತ್ರಸ್ತೆಯ ಕುಟುಂಬಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲ. ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾ ತನ್ನ ವೈಯಕ್ತಿಕ ಅಗತ್ಯಗಳನ್ನು ಮುನ್ನೆಲೆಗೆ ತಂದು ತನಿಖಾ ಪ್ರಕ್ರಿಯೆಯನ್ನು ಪದೇ ಪದೇ ಮುಂದೂಡುತ್ತಿದ್ದಾನೆ ಎಂಬ ಆಘಾತಕಾರಿ ಮಾಹಿತಿ ಸದ್ಯ ಬೆಳಕಿಗೆ ಬಂದಿದೆ.
ಪರೀಕ್ಷೆಯ ನೆಪದಲ್ಲಿ ವಿಚಾರಣೆಗೆ ಗೈರು
ಜುಲೈ 20 ರಂದು ನಿಗದಿಯಾಗಿದ್ದ ನ್ಯಾಯಾಲಯದ ಪ್ರಮುಖ ವಿಚಾರಣೆಗೆ ಗೈರುಹಾಜರಾಗಲು ದೆಹಲಿ ನ್ಯಾಯಾಲಯವು ಅಫ್ತಾಬ್ಗೆ ಅನುಮತಿ ನೀಡಿದೆ. ತಿಹಾರ್ ಜೈಲಿನಿಂದಲೇ ಎಂಎ ಸೋಷಿಯಾಲಜಿ (ಸಮಾಜಶಾಸ್ತ್ರ) ಪರೀಕ್ಷೆ ಬರೆಯಬೇಕಿದೆ ಎಂಬ ಆತನ ಮನವಿಯನ್ನು ಪುರಸ್ಕರಿಸಿ ಈ ವಿನಾಯಿತಿ ನೀಡಲಾಗಿದೆ. ಆದರೆ, ಈ ರೀತಿ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಅಡ್ಡಿಪಡಿಸುತ್ತಿರುವುದು ಇದೇ ಮೊದಲೇನಲ್ಲ. ಹತ್ತು ತಿಂಗಳ ಹಿಂದೆ ಹಲ್ಲಿನ ಚಿಕಿತ್ಸೆಯ ನೆಪ ಒಡ್ಡಿ ವಿಚಾರಣೆಯನ್ನು ಮುಂದೂಡಿದ್ದ ಆತ, ಮತ್ತೊಮ್ಮೆ ಮಾನಸಿಕ ಚಿಕಿತ್ಸೆಯ ಸಮಾಲೋಚನೆಗಾಗಿ ಸಮಯ ಕೋರಿದ್ದ. ಹೀಗೆ ಆರೋಪಿಯ ಅನುಕೂಲಕ್ಕೆ ತಕ್ಕಂತೆ ನ್ಯಾಯಾಲಯದ ದಿನಾಂಕಗಳು ಬದಲಾಗುತ್ತಿರುವುದು ತನಿಖೆಯ ವೇಗಕ್ಕೆ ಮುಳ್ಳಾಗಿದೆ.
ಮೂರು ವರ್ಷ ಕಳೆದರೂ ಮುಗಿಯದ ಸಾಕ್ಷ್ಯ ವಿಚಾರಣೆ
2022ರ ನವೆಂಬರ್ 10 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿತ್ತು. ತನಿಖಾ ಸಂಸ್ಥೆಯು ಬರೋಬ್ಬರಿ 13,000 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದು, ಮೇ 2023 ರಲ್ಲಿ ಆರೋಪ ನಿಗದಿಪಡಿಸಲಾಗಿತ್ತು. ಕಳೆದ ಮೂರು ವರ್ಷಗಳಲ್ಲಿ 215 ಕ್ಕೂ ಹೆಚ್ಚು ಬಾರಿ ವಿಚಾರಣೆಗಳು ನಡೆದಿದ್ದರೂ, ಪ್ರಾಸಿಕ್ಯೂಷನ್ ಇನ್ನೂ ಸಾಕ್ಷ್ಯಾಧಾರಗಳನ್ನು ಮಂಡಿಸುತ್ತಲೇ ಇದೆ. ಆರೋಪಿ ಪರ ವಕೀಲರ ಸುದೀರ್ಘ ಕ್ರಾಸ್ ಎಕ್ಸಾಮಿನೇಷನ್ (ಪಾಟೀಸವಾಲು) ಪ್ರಕ್ರಿಯೆಯೂ ವಿಳಂಬಕ್ಕೆ ಮುಖ್ಯ ಕಾರಣವಾಗಿದೆ. ಕೇವಲ ಒಬ್ಬ ಹೆಡ್ ಕಾನ್ಸ್ಟೆಬಲ್ ಸಾಕ್ಷ್ಯವನ್ನು ವಿಚಾರಣೆ ನಡೆಸಲು ಬರೋಬ್ಬರಿ ಎಂಟು ದಿನಾಂಕಗಳನ್ನು ತೆಗೆದುಕೊಳ್ಳಲಾಗಿದ್ದು, ಆ ಪ್ರಕ್ರಿಯೆ ಇನ್ನೂ ಮುಂದುವರಿದಿದೆ.
ನ್ಯಾಯಕ್ಕಾಗಿ ಕಾಯುತ್ತಲೇ ಕೊನೆಯುಸಿರೆಳೆದ ತಂದೆ
ಆರೋಪಿ ಅಫ್ತಾಬ್ ಜೈಲಿನಲ್ಲಿದ್ದುಕೊಂಡೇ ಸ್ನಾತಕೋತ್ತರ ಪದವಿ ಓದುತ್ತಾ ಸವಲತ್ತುಗಳನ್ನು ಪಡೆಯುತ್ತಿದ್ದಾನೆ. ಆದರೆ, ಮಗಳ ಸಾವಿಗೆ ನ್ಯಾಯ ಸಿಗಬಹುದು ಎಂದು ಕಾಯುತ್ತಿದ್ದ ಶ್ರದ್ಧಾ ವಾಕರ್ ತಂದೆ ವಿಕಾಸ್ ವಾಕರ್ ಅವರು 2025ರ ಫೆಬ್ರವರಿಯಲ್ಲಿ ನ್ಯಾಯ ಸಿಗದೆಯೇ ಕಣ್ಣು ಮುಚ್ಚಿದ್ದಾರೆ. ಇದೇ ಅವಧಿಯಲ್ಲಿ ಶ್ರದ್ಧಾಳ ಅಜ್ಜಿಯೂ ನಿಧನರಾಗಿದ್ದಾರೆ. ತನಿಖೆಯ ಸಾಕ್ಷ್ಯಗಳಾಗಿ ದೇಹದ ಭಾಗಗಳನ್ನು ಇನ್ನೂ ಸಂರಕ್ಷಿಸಿಡಲಾಗಿರುವುದರಿಂದ, ಕುಟುಂಬಸ್ಥರಿಗೆ ಇದುವರೆಗೆ ಶ್ರದ್ಧಾಳ ಅಂತ್ಯಸಂಸ್ಕಾರ ಮಾಡಲು ಸಹ ಸಾಧ್ಯವಾಗಿಲ್ಲ.
ಪ್ರಸ್ತುತ ಪ್ರತಿ ವಿಚಾರಣೆಗೂ ಮುಂಬೈನಿಂದ ದೆಹಲಿಗೆ ಅಲೆಯುತ್ತಿರುವ ಶ್ರದ್ಧಾಳ ಚಿಕ್ಕಮ್ಮ ರಾಜಲ್ ನಾಯ್ಕ್ ಅವರು ಕೋರ್ಟ್ನ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ತ್ವರಿತಗತಿ ನ್ಯಾಯಾಲಯದಲ್ಲೂ ಆರೋಪಿಯ ಓದು ಹಾಗೂ ವೈಯಕ್ತಿಕ ಹಿತಾಸಕ್ತಿಗಳಿಗೆ ಮನ್ನಣೆ ನೀಡುತ್ತಿರುವುದು ಎಷ್ಟು ಸರಿ? ನಮಗೆ ತಕ್ಷಣ ನ್ಯಾಯ ಬೇಕು ಮತ್ತು ಅಫ್ತಾಬ್ಗೆ ಮರಣದಂಡನೆ ಶಿಕ್ಷೆಯಾಗಬೇಕು,” ಎಂದು ಅವರು ಆಕ್ರೋಶಭರಿತರಾಗಿ ಆಗ್ರಹಿಸುತ್ತಾ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ : “ಫುನ್ಸುಖ್ ವಾಂಗ್ಡುವನ್ನು ಸಾಯಲು ಬಿಡಬೇಡಿ” : ವಾಂಗ್ಚುಕ್ ಉಪವಾಸ ಸತ್ಯಾಗ್ರಹಕ್ಕೆ ‘3 ಈಡಿಯಟ್ಸ್’ ಚತುರ್ ಬೆಂಬಲ!



















