ಪಾಟ್ನಾ : ಖ್ಯಾತ ರಾಜಕೀಯ ಚುನಾವಣಾ ವ್ಯೂಹರಚನೆಕಾರ, ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಈಗಾಗಲೇ ಸಕ್ರಿಯ ಚುನಾವಣಾ ರಾಜಕಾರಣಕ್ಕೆ ಅಧಿಕೃತವಾಗಿ ಧುಮುಕಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರಿಂದ ತೆರವಾಗಿರುವ ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅವರು ನಾಮಪತ್ರ ಸಲ್ಲಿಕೆ ಮಾಡಿದ್ದು, ತಮ್ಮ ಅಫಿಡವಿಟ್ನಲ್ಲಿ ಒಟ್ಟು 96 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ ಪ್ರಶಾಂತ್ ಕಿಶೋರ್ ಅವರಿಗಿಂತ ಅವರ ಪತ್ನಿಯೇ ಹೆಚ್ಚು ಶ್ರೀಮಂತೆ.
ದಂಪತಿಯ ಒಟ್ಟು ಆಸ್ತಿ ವಿವರ ಹೀಗಿದೆ
ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾಧಿಕಾರಿಗೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, 49 ವರ್ಷದ ಪ್ರಶಾಂತ್ ಕಿಶೋರ್ ಅವರು 22.19 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 73.87 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಇನ್ನು ಅಸ್ಸಾಂ ಮೂಲದ ವೈದ್ಯೆಯಾಗಿರುವ ಅವರ ಪತ್ನಿ ಜಾಹ್ನವಿ ದಾಸ್ ಅವರು ಬರೋಬ್ಬರಿ 89.51 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 12.42 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು 102 ಕೋಟಿ ರೂ.ಗೂ ಅಧಿಕ ಆಸ್ತಿಯ ಒಡತಿಯಾಗಿದ್ದಾರೆ. ಜೊತೆಗೆ ಪ್ರಶಾಂತ್ ಕಿಶೋರ್ ಹೆಸರಿನಲ್ಲಿ 5.77 ಕೋಟಿ ರೂಪಾಯಿ ಬ್ಯಾಂಕ್ ಸಾಲವೂ ಇದೆ.
ದೇಶದ ವಿವಿಧೆಡೆ ಇರುವ ಆಸ್ತಿ ಹಾಗೂ ಕಂಪನಿ
ಪ್ರಶಾಂತ್ ಕಿಶೋರ್ ಹಾಗೂ ಅವರ ಪತ್ನಿ ದೇಶದ ಪ್ರಮುಖ ನಗರಗಳಲ್ಲಿ ಅಪಾರ್ಟ್ಮೆಂಟ್ಗಳು ಮತ್ತು ಭೂಮಿಯನ್ನು ಹೊಂದಿದ್ದಾರೆ. ಕಿಶೋರ್ ಅವರು ಗಾಜಿಯಾಬಾದ್ನಲ್ಲಿ ಎರಡು ಫ್ಲಾಟ್ಗಳು, ದೆಹಲಿಯ ವಸಂತ್ ವಿಹಾರ್ ಮತ್ತು ಪಾಟ್ನಾದ ಪಾಟಲಿಪುತ್ರ ಕಾಲೋನಿಯಲ್ಲಿ ನಿವೇಶನಗಳನ್ನು ಹೊಂದಿದ್ದರೆ, ಅವರ ಪತ್ನಿ ಗುವಾಹಟಿಯಲ್ಲಿ ಬಂಗಲೆ ಮತ್ತು ನೋಯ್ಡಾದಲ್ಲಿ ಆಸ್ತಿಯನ್ನು ಹೊಂದಿದ್ದಾರೆ. ಇದಲ್ಲದೆ ಕಿಶೋರ್ ಒಡೆತನದ ‘ವೇಧಾ ವೆಂಚರ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ತಮ್ಮದೇ ಆದ ಜನ ಸುರಾಜ್ ಪಕ್ಷ ಹಾಗೂ ವಿವಿಧ ಫೌಂಡೇಶನ್ಗಳಿಗೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿರುವುದು ಅಫಿಡವಿಟ್ನಲ್ಲಿ ಬಹಿರಂಗವಾಗಿದೆ.
ಬಂಕಿಪುರದಲ್ಲಿ ಜಿದ್ದಾಜಿದ್ದಿನ ಫೈಟ್
ಬಿಜೆಪಿ ನಾಯಕ ನಿತಿನ್ ನಬೀನ್ ರಾಜೀನಾಮೆಯಿಂದ ತೆರವಾಗಿದ್ದ ಬಂಕಿಪುರ ಕ್ಷೇತ್ರಕ್ಕೆ ಈ ಉಪಚುನಾವಣೆ ನಡೆಯುತ್ತಿದ್ದು, ಪ್ರಶಾಂತ್ ಕಿಶೋರ್ ಅವರಿಗೆ ಇದು ಮೊದಲ ನೇರ ಚುನಾವಣಾ ಸ್ಪರ್ಧೆಯಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯು ಯುವ ಮೋರ್ಚಾ ನಾಯಕ 32 ವರ್ಷದ ನೀರಜ್ ಕುಮಾರ್ ಸಿನ್ಹಾ ಅವರನ್ನು ಕಣಕ್ಕಿಳಿಸಿದೆ. “ಇದು ಕೇವಲ ನನ್ನ ನಾಮಪತ್ರ ಸಲ್ಲಿಕೆಯಲ್ಲ, ಬದಲಿಗೆ ಬಿಹಾರದಲ್ಲಿ ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಗಳನ್ನು ಅಧಿಕಾರದಿಂದ ಕೆಳಗಿಳಿಸಲು ಜನಸಾಮಾನ್ಯರು ನೀಡುತ್ತಿರುವ ಬದಲಾವಣೆಯ ಕರೆ” ಎಂದು ಕಿಶೋರ್ ನಾಮಪತ್ರ ಸಲ್ಲಿಕೆ ಬಳಿಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2021ರ ಬಂಗಾಳ ಚುನಾವಣೆಯ ಬಳಿಕ ರಾಜಕೀಯ ಸಲಹಾ ವೃತ್ತಿಯಿಂದ ನಿವೃತ್ತಿ ಘೋಷಿಸಿದ್ದ ಕಿಶೋರ್, ಅಕ್ಟೋಬರ್ 2, 2022ರಿಂದ ಬಿಹಾರದಾದ್ಯಂತ ಸುದೀರ್ಘ ಪಾದಯಾತ್ರೆ ನಡೆಸಿ ಜನ ಸುರಾಜ್ ಅಭಿಯಾನ ಆರಂಭಿಸಿದ್ದರು. ಇತ್ತೀಚಿನ ಬಿಹಾರ ಚುನಾವಣೆಯಲ್ಲಿ ಈ ಪಕ್ಷ ಸೀಟು ಗೆಲ್ಲದಿದ್ದರೂ ಸದ್ಯದ ಉಪಚುನಾವಣೆಯಲ್ಲಿ ಕಿಶೋರ್ ಕಣಕ್ಕಿಳಿದಿರುವುದು ಕುತೂಹಲ ಮೂಡಿಸಿದೆ. ಲಕ್ನೋ ವಿಶ್ವವಿದ್ಯಾಲಯದಿಂದ ಬಿಬಿಎ ಮತ್ತು ಹೈದರಾಬಾದ್ನ ಎಎಸ್ಸಿಐನಿಂದ ಹೆಲ್ತ್ಕೇರ್ ಮ್ಯಾನೇಜ್ಮೆಂಟ್ ಪದವಿ ಪಡೆದಿರುವ ಕಿಶೋರ್ ವಿರುದ್ಧ ಒಟ್ಟು ಎಂಟು ಕ್ರಿಮಿನಲ್ ಪ್ರಕರಣಗಳಿದ್ದು, ಯಾವುದೇ ಪ್ರಕರಣದಲ್ಲೂ ಇದುವರೆಗೆ ಕೋರ್ಟ್ನಲ್ಲಿ ದೋಷಾರೋಪ ನಿಗದಿಯಾಗಿಲ್ಲ.
ಇದನ್ನೂ ಓದಿ : ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ದಾಳಿಗೆ ಭಾರತೀಯ ನಾವಿಕ ಸಾವು : ಇರಾನ್ ರಾಯಭಾರಿಗೆ ಭಾರತ ಸಮನ್ಸ್!



















