ಚೆನ್ನೈ : ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಶೇ. 84.69ರಷ್ಟು ಮತದಾನವಾಗಿದ್ದು, ರಾಜ್ಯದ ಚುನಾವಣಾ ಇತಿಹಾಸದಲ್ಲೇ ಅತ್ಯಧಿಕ ಎಂಬ ದಾಖಲೆ ಬರೆದಿದೆ.
ಈ ಪೈಕಿ ಮಹಿಳಾ ಮತದಾರರು ಅಭೂತಪೂರ್ವ ಉತ್ಸಾಹ ತೋರಿದ್ದು, ಶೇ.85.76ರಷ್ಟು ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ತಮಿಳುನಾಡಿನ ರಾಜಕೀಯ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಭಾರಿ ಪ್ರಮಾಣದಲ್ಲಿ ಮತದಾನವಾದಾಗಲೆಲ್ಲಾ ಆಡಳಿತ ವಿರೋಧಿ ಅಲೆ ಎದ್ದು ಹಾಲಿ ಸರ್ಕಾರ ಪತನಗೊಂಡಿದೆ. ಹೀಗಾಗಿ, ಪ್ರಸ್ತುತ ಆಡಳಿತಾರೂಢ ಡಿಎಂಕೆ ಪಾಳಯದಲ್ಲಿ ಈ ಬಾರಿಯ ದಾಖಲೆಯ ಮತದಾನ ತೀವ್ರ ಆತಂಕ ಹಾಗೂ ನಡುಕ ಹುಟ್ಟಿಸಿದೆ.
ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ…
2006ರಿಂದೀಚೆಗೆ ತಮಿಳುನಾಡು ನಿರಂತರವಾಗಿ ಶೇ.70ಕ್ಕೂ ಹೆಚ್ಚು ಮತದಾನವನ್ನು ದಾಖಲಿಸುತ್ತಾ ಬಂದಿದೆ. 2011ರಲ್ಲಿ ಶೇ.78.29ರಷ್ಟು ಬೃಹತ್ ಮತದಾನವಾದಾಗ ವಿದ್ಯುತ್ ಕಡಿತ, ಬೆಲೆ ಏರಿಕೆ ಹಾಗೂ 2ಜಿ ಹಗರಣದ ಬಗ್ಗೆ ಜನರ ಆಕ್ರೋಶ ಭುಗಿಲೆದ್ದಿತ್ತು. ಇದರ ಪರಿಣಾಮವಾಗಿ ಡಿಎಂಕೆ ಅಧಿಕಾರ ಕಳೆದುಕೊಂಡು ಜಯಲಲಿತಾ ನೇತೃತ್ವದ ಎಐಎಡಿಎಂಕೆ (AIADMK) ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು.
2016ರಲ್ಲಿ ಶೇ.74.81ರಷ್ಟು ಮತದಾನವಾಗಿ ಜಯಲಲಿತಾ ಮತ್ತೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಇನ್ನು 2021ರಲ್ಲಿ ಕೋವಿಡ್ ಸಾಂಕ್ರಾಮಿಕದ ನಡುವೆಯೂ ಶೇ.73.63ರಷ್ಟು ಮತದಾನವಾಗಿತ್ತು. ಆಗ ಎಐಎಡಿಎಂಕೆ ವಿರುದ್ಧದ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡ ಡಿಎಂಕೆ ದಶಕದ ಬಳಿಕ ಮತ್ತೆ ಗದ್ದುಗೆ ಏರಿತ್ತು. ದೊಡ್ಡ ಮಟ್ಟದ ಮತದಾನ ಯಾವಾಗಲೂ ತಮಿಳುನಾಡಿನಲ್ಲಿ ಸ್ಪಷ್ಟ ಹಾಗೂ ನಿರ್ಣಾಯಕ ಜನಾದೇಶವನ್ನು ನೀಡುತ್ತಾ ಬಂದಿದೆ.
ಮಹಿಳಾ ಮತದಾರರೇ ಗೇಮ್ ಚೇಂಜರ್ಸ್
ಇತ್ತೀಚಿನ ಚುನಾವಣೆಗಳಲ್ಲಿ ತಮಿಳುನಾಡಿನಲ್ಲಿ ಮಹಿಳಾ ಮತದಾರರ ಪಾಲ್ಗೊಳ್ಳುವಿಕೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬರುತ್ತಿದ್ದಾರೆ. ಈ ಬಾರಿಯಂತೂ ಮಹಿಳಾ ಮತದಾನದ ಪ್ರಮಾಣ ಶೇ.85.76ರಷ್ಟಿದ್ದು, ಇವರೇ ಸೋಲು-ಗೆಲುವಿನ ರೂವಾರಿಗಳಾಗಲಿದ್ದಾರೆ. ಎಲ್ಲಾ ಪ್ರಮುಖ ಪಕ್ಷಗಳು ಮಹಿಳೆಯರನ್ನೇ ಗುರಿಯಾಗಿಸಿಕೊಂಡು ತಮ್ಮ ಪ್ರಣಾಳಿಕೆಯಲ್ಲಿ ನೇರ ನಗದು ವರ್ಗಾವಣೆ ಮತ್ತು ಕಲ್ಯಾಣ ಯೋಜನೆಗಳ ಭರವಸೆಗಳನ್ನು ನೀಡಿವೆ. ಹೀಗಾಗಿ, ನಿಶ್ಯಬ್ದ ಅಲೆಯ ಹಿಂದಿರುವ ಪ್ರಮುಖ ಶಕ್ತಿಯಾಗಿ ಮಹಿಳಾ ಮತದಾರರು ಹೊರಹೊಮ್ಮಿದ್ದು, ಒಲವು ಯಾರ ಕಡೆಗಿದೆ ಎಂಬುದು ಕುತೂಹಲ ಮೂಡಿಸಿದೆ.
ಮೂರನೇ ಶಕ್ತಿಯಾಗಿ ನಟ ವಿಜಯ್ ಪ್ರಭಾವವೆಷ್ಟು?
ದಾಖಲೆಯ ಮತದಾನವಾದರೂ ತಮಿಳುನಾಡು ರಾಜಕಾರಣ ಬಹುಪಾಲು ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಕೂಟಗಳ ನಡುವಿನ ಸ್ಪರ್ಧೆಯಾಗಿಯೇ ಉಳಿದಿದೆ. ಎಷ್ಟೇ ದೊಡ್ಡ ಮಟ್ಟದ ಮತದಾನವಾದರೂ ಸಣ್ಣ ಪಕ್ಷಗಳು ಅದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವಲ್ಲಿ ಅಥವಾ ದೊಡ್ಡ ಮಟ್ಟದ ಬದಲಾವಣೆ ತರುವಲ್ಲಿ ವಿಫಲವಾಗಿವೆ. ಮತಗಳೆಲ್ಲವೂ ಪ್ರಮುಖ ಮೈತ್ರಿಕೂಟಗಳತ್ತಲೇ ವಾಲಿವೆ. ಆದರೆ, ಈ ಬಾರಿ ನಟ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ (TVK) ಪ್ರಬಲ ಮೂರನೇ ಶಕ್ತಿಯಾಗಿ ಕಣಕ್ಕಿಳಿದಿದೆ. ಹಿಂದಿನ ಇತಿಹಾಸವನ್ನು ಅಳಿಸಿಹಾಕಿ ವಿಜಯ್ ಹೊಸ ಮೈಲಿಗಲ್ಲು ಸ್ಥಾಪಿಸುತ್ತಾರೆಯೇ ಅಥವಾ ಎಂದಿನಂತೆ ಡಿಎಂಕೆ ಹಾಗೂ ಎಐಎಡಿಎಂಕೆ ನಡುವೆಯೇ ಅಧಿಕಾರ ಹಂಚಿಕೆಯಾಗಲಿದೆಯೇ ಎಂಬ ಪ್ರಶ್ನೆಗೆ ಮೇ 4ರಂದು ಉತ್ತರ ಸಿಗಲಿದೆ.
ಇದನ್ನೂ ಓದಿ : ನದಿ ಬಿಟ್ಟು ಕೃಷಿ ಜಮೀನಿಗೆ ನುಗ್ಗಿದ ಬೃಹತ್ ಮೊಸಳೆ – ಬೆಚ್ಚಿಬಿದ್ದ ಗ್ರಾಮಸ್ಥರು!



















