ಪುಣೆ: ತನ್ನ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯ ಮೇಲೆ ಪತಿಯ ಕಚೇರಿ ಸಿಬ್ಬಂದಿಯನ್ನು ವಕೀಲರೊಬ್ಬರ ಪತ್ನಿಯೇ ಬರ್ಬರವಾಗಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. 35 ವರ್ಷದ ಪೂನಂ ದಿನೇಶ್ ಮುನ್ ಕೊಲೆಯಾದ ದುರ್ದೈವಿ. ಈ ಸಂಬಂಧ ಆರೋಪಿ ಸ್ವಾತಿ ಸಾವಂತ್ (42) ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಕೀಲ ಸಂಜಯ್ ಸಾವಂತ್ ಅವರ ಕಚೇರಿಯಲ್ಲಿ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದ ಪೂನಂ ಅವರು ಸಂಜೆ ಕೆಲಸ ಮುಗಿಸಿ ಮನೆಗೆ ಮರಳದಿದ್ದಾಗ ಆಕೆಯ ಪತಿ ಆತಂಕಗೊಂಡು ಎಲ್ಲೆಡೆ ಹುಡುಕಾಡಿದ್ದರು. ಆದರೂ ಪತ್ತೆಯಾಗದ ಕಾರಣ ಮರುದಿನವೇ ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ಅನುಮಾನಗೊಂಡು ಪತ್ನಿಯ ಕಚೇರಿಗೆ ಹುಡುಕಿಕೊಂಡು ಹೋದಾಗ, ಕಚೇರಿಯ ಬಾಗಿಲು ತೆರೆದಿರುವುದು ಕಂಡುಬಂದಿತ್ತು. ಒಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಪೂನಂ ಶವ ಪತ್ತೆಯಾಗಿದೆ. ಆರೋಪಿ ಸ್ವಾತಿಯು ಕೊಲೆಯ ಬಳಿಕ ಸಾಕ್ಷ್ಯ ನಾಶಪಡಿಸಲು ಶವವನ್ನು ಗೋಣಿ ಚೀಲಕ್ಕೆ ತುಂಬಿ ಅಡಗಿಸಿಡಲು ಯತ್ನಿಸಿದ್ದಳು ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಕೊಲೆ ನಡೆದಿದ್ದು ಹೇಗೆ?
ಪ್ರಾಥಮಿಕ ತನಿಖೆಯ ಪ್ರಕಾರ, ತನ್ನ ಪತಿ ಸಂಜಯ್ ಮತ್ತು ಪೂನಂ ನಡುವೆ ಅನೈತಿಕ ಸಂಬಂಧವಿದೆ ಎಂದು ಸ್ವಾತಿ ಶಂಕಿಸಿದ್ದಳು. ಇದೇ ವಿಷಯವಾಗಿ ಕಚೇರಿಗೆ ಬಂದು ಗಲಾಟೆ ಮಾಡಿದ್ದ ಸ್ವಾತಿ, ಆಕ್ರೋಶದ ಭರದಲ್ಲಿ ಭಾರವಾದ ಕಬ್ಬಿಣದ ವಸ್ತುವಿನಿಂದ ಪೂನಂ ತಲೆಗೆ ಬಲವಾಗಿ ಹೊಡೆದಿದ್ದಾಳೆ. ತೀವ್ರ ರಕ್ತಸ್ರಾವದಿಂದಾಗಿ ಪೂನಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಕೀಯ ನಂಟಿನ ವಕೀಲನಿಗೆ ಸಂಕಷ್ಟ
ಈ ಪ್ರಕರಣದಲ್ಲಿ ಆರೋಪಿಯ ಪತಿ ಸಂಜಯ್ ಸಾವಂತ್ ಅವರ ಪಾತ್ರದ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಸಂಜಯ್ ಪ್ರಮುಖ ರಾಜಕೀಯ ಪಕ್ಷವೊಂದರ ಕಾನೂನು ಘಟಕದಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಯಾಗಿದ್ದು, ಹಲವು ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಪ್ರತಿಯೊಂದು ಆಯಾಮವನ್ನೂ ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಸದ್ಯ ಸ್ವಾತಿಯನ್ನು ಬಂಧಿಸಲಾಗಿದ್ದು, ಕೊಲೆಗೆ ಬೇರೆ ಯಾರಾದರೂ ಸಾಥ್ ನೀಡಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: “ವಿಪಕ್ಷಗಳಿಂದ ಮಹಿಳಾ ಹಕ್ಕುಗಳ ಭ್ರೂಣಹತ್ಯೆ” : ಮೀಸಲಾತಿ ಮಸೂದೆ ಸೋಲಿನ ಬಳಿಕ ಪ್ರಧಾನಿ ಮೋದಿ ಆಕ್ರೋಶ



















