ನವದೆಹಲಿ: ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಅನುಷ್ಠಾನದ ಉದ್ದೇಶ ಹೊಂದಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆ ಸೋಲನುಭವಿಸಿದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ವಿರೋಧ ಪಕ್ಷಗಳ “ಸ್ವಾರ್ಥ ರಾಜಕೀಯ”ದಿಂದಾಗಿ ದೇಶದ ಮಹಿಳೆಯರ ಹಕ್ಕುಗಳ ‘ಭ್ರೂಣಹತ್ಯೆ’ ನಡೆದಿದೆ ಎಂದು ಕಿಡಿಕಾರಿದ್ದಾರೆ.
ಮಹಿಳೆಯರ ಕ್ಷಮೆಯಾಚಿಸಿದ ಪ್ರಧಾನಿ
ಸುಮಾರು 30 ನಿಮಿಷಗಳ ಕಾಲ ಭಾವನಾತ್ಮಕವಾಗಿ ಮಾತನಾಡಿದ ಪ್ರಧಾನಿ ಮೋದಿ, ಮಸೂದೆಯನ್ನು ಅಂಗೀಕರಿಸಲು ಸಾಧ್ಯವಾಗದಿದ್ದಕ್ಕಾಗಿ ದೇಶದ ತಾಯಂದಿರು ಮತ್ತು ಪುತ್ರಿಯರಲ್ಲಿ ಕ್ಷಮೆ ಯಾಚಿಸಿದರು. “ಕಾಂಗ್ರೆಸ್, ಟಿಎಂಸಿ, ಡಿಎಂಕೆ ಮತ್ತು ಸಮಾಜವಾದಿ ಪಕ್ಷಗಳಂತಹ ಪಕ್ಷಗಳ ಕ್ಷುಲ್ಲಕ ರಾಜಕೀಯದಿಂದಾಗಿ ಮಹಿಳೆಯರು ಈ ಹಿನ್ನಡೆಯನ್ನು ಅನುಭವಿಸುವಂತಾಗಿದೆ. ಸಂಸತ್ತಿನಲ್ಲಿ ಮಸೂದೆ ಸೋತಾಗ ವಿರೋಧ ಪಕ್ಷದ ನಾಯಕರು ಮೇಜು ಕುಟ್ಟಿ ಸಂಭ್ರಮಿಸಿದ್ದು ಮಹಿಳೆಯರ ಘನತೆಯ ಮೇಲೆ ನಡೆದ ದಾಳಿಯಾಗಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಪಕ್ಷಗಳಿಗೆ ಮಹಿಳೆಯರೇ ಶಿಕ್ಷೆ ನೀಡಲಿದ್ದಾರೆ:
ಮಹಿಳೆಯರು ತಮಗೆ ಆದ ಅವಮಾನವನ್ನು ಎಂದಿಗೂ ಮರೆಯುವುದಿಲ್ಲ ಎಂದು ಎಚ್ಚರಿಸಿದ ಪ್ರಧಾನಿ, ಸಂಸತ್ತಿನಲ್ಲಿ ಸಂಭ್ರಮಿಸಿದ ನಾಯಕರಿಗೆ ದೇಶದ ಮಹಿಳೆಯರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. “ಯಾವ ನಾಯಕರು ಮಹಿಳೆಯರ ಮೀಸಲಾತಿಯ ಆಶಾಕಿರಣವನ್ನು ನಂದಿಸಿ ಸಂಭ್ರಮಿಸಿದ್ದಾರೋ, ಅವರು ನಿಮ್ಮ ಮನೆ ಬಾಗಿಲಿಗೆ ಬಂದಾಗ ಅವರ ನಡವಳಿಕೆಯನ್ನು ನೆನಪಿಸಿಕೊಳ್ಳಿ” ಎಂದು ಕರೆ ನೀಡಿದರು. ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಪ್ರಧಾನಿಯವರ ಈ ಹೇಳಿಕೆ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಕಾಂಗ್ರೆಸ್ ವಿರುದ್ಧ ‘ವಿಭಜಕ ರಾಜಕೀಯ’ದ ಆರೋಪ
ಕ್ಷೇತ್ರಗಳ ಮರುವಿಂಗಡಣೆ (Delimitation) ವಿಚಾರದಲ್ಲಿ ವಿರೋಧ ಪಕ್ಷಗಳು ಸುಳ್ಳು ಹರಡುತ್ತಿವೆ ಎಂದು ಆರೋಪಿಸಿದ ಮೋದಿ, “ಬ್ರಿಟಿಷರಿಂದ ಬಳುವಳಿಯಾಗಿ ಬಂದ ವಿಭಜಿಸಿ ಆಳುವ ನೀತಿಯನ್ನು ಕಾಂಗ್ರೆಸ್ ಮುಂದುವರಿಸುತ್ತಿದೆ. ಗಡಿ ವಿವಾದ, ನದಿ ನೀರು ಹಂಚಿಕೆ ಮತ್ತು ಒಬಿಸಿ ಮೀಸಲಾತಿಯನ್ನು ದಶಕಗಳ ಕಾಲ ನನೆಗುದಿಗೆ ಹಾಕಿದ್ದೇ ಕಾಂಗ್ರೆಸ್ ಸಾಧನೆ” ಎಂದು ಟೀಕಿಸಿದ್ದಾರೆ. ಪ್ರತಿ ರಾಜ್ಯದ ಲೋಕಸಭಾ ಸೀಟುಗಳನ್ನು ಶೇ.50ರಷ್ಟು ಹೆಚ್ಚಿಸುವ ಮೂಲಕ ಮಹಿಳಾ ಮೀಸಲಾತಿ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿತ್ತು, ಆದರೆ ವಿಪಕ್ಷಗಳು ಅದನ್ನು ತಡೆದಿವೆ ಎಂದು ಅವರು ಕಿಡಿಕಾರಿದ್ದಾರೆ.
ಹಿನ್ನಡೆ ಎಂದರೆ ಸೋಲಲ್ಲ; ಹೋರಾಟ ಮುಂದುವರಿಕೆ
ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವಿಲ್ಲದ ಕಾರಣಕ್ಕೆ ಮಸೂದೆ ಬಿದ್ದಿರಬಹುದು, ಆದರೆ ಇದನ್ನು ಬಿಜೆಪಿಯ ಸೋಲು ಎಂದು ಪರಿಗಣಿಸಬಾರದು ಎಂದು ಪ್ರಧಾನಿ ಸ್ಪಷ್ಟಪಡಿಸಿದ್ದಾರೆ. “ನನಗೆ ದೇಶದ ಕೋಟ್ಯಂತರ ಮಹಿಳೆಯರ ಬೆಂಬಲವಿದೆ. ಮಹಿಳಾ ಮೀಸಲಾತಿ ಹಾದಿಯಲ್ಲಿರುವ ಪ್ರತಿಯೊಂದು ಅಡೆತಡೆಯನ್ನು ನಿವಾರಿಸುವುದಾಗಿ ನಾನು ಭರವಸೆ ನೀಡುತ್ತೇನೆ” ಎನ್ನುವ ಮೂಲಕ, ಮುಂದಿನ ದಿನಗಳಲ್ಲಿ ಹೊಸ ರೂಪದಲ್ಲಿ ಮಸೂದೆಯನ್ನು ತರುವ ಸುಳಿವನ್ನು ಪ್ರಧಾನಿ ನೀಡಿದ್ದಾರೆ.
ಇದನ್ನೂ ಓದಿ: ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಗೆ ಟಗರು ಸಿದ್ದು ಜೈ..!



















