ನವದೆಹಲಿ : ದೇಶಾದ್ಯಂತ ಬಿಸಿಲಿನ ಝಳ ತೀವ್ರಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಉರಿಬಿಸಿಲಿನ ಪರಿಣಾಮವಾಗಿ ದೇಶದಲ್ಲಿ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ದಾಖಲೆ ಬರೆದಿದೆ. ವಾಯುವ್ಯ ಭಾರತದ 10 ರಾಜ್ಯಗಳಲ್ಲಿ ತೀವ್ರ ಉಷ್ಣಮಾರುತ (ಹೀಟ್ ವೇವ್) ಹಾಗೂ ಸೆಖೆಯಿಂದ ಕೂಡಿದ ರಾತ್ರಿಗಳ ಕುರಿತು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಉತ್ತರ ಪ್ರದೇಶದ ಬಾಂಡಾ ದೇಶದಲ್ಲೇ ಅತಿ ಹೆಚ್ಚು, ಅಂದರೆ 47.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾದ ನಗರವಾಗಿ ಹೊರಹೊಮ್ಮಿದೆ.
ವಿದ್ಯುತ್ ಬೇಡಿಕೆಯಲ್ಲಿ ಹೊಸ ದಾಖಲೆ
ಬೇಸಿಗೆಯ ತಾಪಮಾನ ವಿಪರೀತವಾಗಿ ಹೆಚ್ಚಾಗುತ್ತಿದ್ದಂತೆಯೇ ಜನರು ಹವಾನಿಯಂತ್ರಣ (ಎಸಿ) ಹಾಗೂ ಕೂಲರ್ಗಳ ಮೊರೆ ಹೋಗುತ್ತಿದ್ದಾರೆ. ಇದರ ನೇರ ಪರಿಣಾಮ ಎಂಬಂತೆ ದೇಶದಲ್ಲಿ ವಿದ್ಯುತ್ ಬೇಡಿಕೆ ಹಿಂದೆಂದಿಗಿಂತಲೂ ಅಧಿಕವಾಗಿದೆ. ಪ್ರಸ್ತುತ ದೇಶದ ವಿದ್ಯುತ್ ಬೇಡಿಕೆಯು 252.07 ಗಿಗಾವ್ಯಾಟ್ಗೆ (GW) ತಲುಪಿದ್ದು, ಇದು ಇದುವರೆಗಿನ ಗರಿಷ್ಠ ಮಟ್ಟವಾಗಿದೆ. ಇದಕ್ಕೂ ಮುನ್ನ, ಮೇ 2024ರಲ್ಲಿ 250 ಗಿಗಾವ್ಯಾಟ್ ವಿದ್ಯುತ್ ಬೇಡಿಕೆ ದಾಖಲಾಗಿದ್ದೇ ಈವರೆಗಿನ ಗರಿಷ್ಠ ಮಟ್ಟವಾಗಿತ್ತು.
ವಿವಿಧ ರಾಜ್ಯಗಳಲ್ಲಿ ಗರಿಷ್ಠ ತಾಪಮಾನದ ವಿವರ
ಉತ್ತರ ಪ್ರದೇಶದ ಬಾಂಡಾದಲ್ಲಿ 47.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಶನಿವಾರ ದೇಶದ ಅತಿ ಬಿಸಿಯಾದ ನಗರವೆನಿಸಿಕೊಂಡಿದೆ. ಇದೇ ರಾಜ್ಯದ ಪ್ರಯಾಗ್ರಾಜ್ನಲ್ಲಿ 45.5 ಡಿಗ್ರಿ, ವಾರಣಾಸಿಯಲ್ಲಿ 45 ಡಿಗ್ರಿ ಹಾಗೂ ಝಾನ್ಸಿಯಲ್ಲಿ 44.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ರಾಜಸ್ಥಾನದ ಬಾಡಮೇರ್ನಲ್ಲಿ 45.7 ಡಿಗ್ರಿ, ಪಂಜಾಬ್ನ ಫರೀದ್ಕೋಟ್ನಲ್ಲಿ 45.2 ಡಿಗ್ರಿ ಮತ್ತು ಹರ್ಯಾಣದ ರೋಹ್ಟಕ್ನಲ್ಲಿ 44.6 ಡಿಗ್ರಿ ಸೆಲ್ಸಿಯಸ್ ತಾಪಮಾನ ವರದಿಯಾಗಿದೆ.
ಮಹಾರಾಷ್ಟ್ರದ ಅಕೋಲಾ ಮತ್ತು ಅಮರಾವತಿಯಲ್ಲಿ ತಲಾ 45.6 ಡಿಗ್ರಿ, ವಾರ್ಧಾದಲ್ಲಿ 45.5 ಡಿಗ್ರಿ ತಾಪಮಾನ ದಾಖಲಾಗಿದ್ದರೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಋತುವಿನ ಅತಿ ಹೆಚ್ಚು, ಅಂದರೆ 42.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕೇರಳ ಹಾಗೂ ಆಂಧ್ರಪ್ರದೇಶದಲ್ಲೂ ಬಿಸಿಲಿನ ಝಳವಿದ್ದು, ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದೆ. ಹಿಮಾಚಲ ಪ್ರದೇಶದ ಉನಾದಲ್ಲಿ 42.2 ಡಿಗ್ರಿ ಸೆಲ್ಸಿಯಸ್ ವರದಿಯಾಗಿದ್ದರೂ, ಏಪ್ರಿಲ್ 27ರಿಂದ ಮಳೆಯಾಗುವ ನಿರೀಕ್ಷೆಯಿರುವುದು ಕೊಂಚ ನೆಮ್ಮದಿ ತಂದಿದೆ.
ಮಧ್ಯಪ್ರದೇಶದಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮಧ್ಯಪ್ರದೇಶ ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಇಂದೋರ್ ಮತ್ತು ಗ್ವಾಲಿಯರ್ ಜಿಲ್ಲೆಗಳಲ್ಲಿನ ಅಂಗನವಾಡಿ ಕೇಂದ್ರಗಳು ಹಾಗೂ 8ನೇ ತರಗತಿವರೆಗಿನ ಎಲ್ಲಾ ಶಾಲೆಗಳಿಗೆ ಏಪ್ರಿಲ್ 27 ರಿಂದ ಏಪ್ರಿಲ್ 30ರವರೆಗೆ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.
ಏ.27ರಂದು ಹರ್ಯಾಣ, ಚಂಡೀಗಢ, ದೆಹಲಿ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಬಿಹಾರ ಮತ್ತು ಜಾರ್ಖಂಡ್ನ ಕೆಲವು ಭಾಗಗಳಲ್ಲಿ ತೀವ್ರ ಉಷ್ಣಮಾರುತದ ಪರಿಸ್ಥಿತಿ ಇರಲಿದೆ. ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಒಡಿಶಾ ಮತ್ತು ತಮಿಳುನಾಡಿನಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಮೇಲುಗೈ ಸಾಧಿಸುವ ಸಾಧ್ಯತೆಯಿದೆ.
ಅಂತೆಯೇ, ಏ.28 ರಂದು ಬಿಹಾರ, ಛತ್ತೀಸ್ಗಢ, ಹರ್ಯಾಣ, ಚಂಡೀಗಢ, ದೆಹಲಿ, ಮಧ್ಯಪ್ರದೇಶ, ಪಂಜಾಬ್, ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಉತ್ತರ ಪ್ರದೇಶದಲ್ಲಿ ಉಷ್ಣಮಾರುತ ಮುಂದುವರಿಯಲಿದೆ. ಆಂಧ್ರಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಗುಜರಾತ್, ಗೋವಾ, ಒಡಿಶಾ ಮತ್ತು ತಮಿಳುನಾಡಿನಲ್ಲಿ ಅತ್ಯಂತ ಬಿಸಿ ಹಾಗೂ ಆರ್ದ್ರತೆಯಿಂದ ಕೂಡಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ
ಇದನ್ನೂ ಓದಿ : ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗೆ ಧಮ್ಕಿ ಹಾಕಿದ ಬಿಜೆಪಿ ಮುಖಂಡ.. ವಿಡಿಯೋ ವೈರಲ್!



















