ಬೆಂಗಳೂರು: ದೇಶದಲ್ಲಿ ದಿನೇದಿನೆ ಆನ್ ಲೈನ್ ವಂಚನೆ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಜನ ಕೋಟ್ಯಂತರ ರೂಪಾಯಿ ಕಳೆದುಕೊಳ್ಳುತ್ತಿದ್ದಾರೆ. ಹೂಡಿಕೆ, ಹಣ ದುಪ್ಪಟ್ಟು, ಡಿಜಿಟಲ್ ಅರೆಸ್ಟ್ ಸೇರಿ ಹಲವು ಮಾದರಿಯಲ್ಲಿ ವಂಚನೆಗೊಳಗಾಗುತ್ತಿದ್ದಾರೆ. ಇದನ್ನು ಮನಗಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಈಗ ಹೊಸ ನಿಯಮಗಳನ್ನು ಘೋಷಣೆ ಮಾಡಿದೆ. ಇದರ ಅನ್ವಯ, ವಂಚನೆಗೊಳಗಾದ ಗ್ರಾಹಕರಿಗೆ ಬ್ಯಾಂಕುಗಳಿಂದಲೇ ಪರಿಹಾರ ನೀಡುವ ವ್ಯವಸ್ಥೆಯನ್ನು ಆರ್ ಬಿಐ ಜಾರಿಗೆ ತರುತ್ತಿದೆ.
ಹೌದು, ಕ್ರೆಡಿಟ್ ಕಾರ್ಡ್ ಬಳಸಿ ವಹಿವಾಟು ನಡೆಸುವಾಗ ಗ್ರಾಹಕರಿಗೆ ವಂಚನೆಯಾದರೆ, ಆ ವಿವಾದಿತ ಮೊತ್ತವನ್ನು ಬ್ಯಾಂಕುಗಳು ಗ್ರಾಹಕರಿಗೆ 5 ದಿನಗಳೊಳಗೆ ಪಾವತಿ ಮಾಡಬೇಕು ಎಂಬುದು ಪ್ರಮುಖ ನಿಯಮವಾಗಿದೆ. ವಂಚನೆಗೊಳಗಾದ ಕೂಡಲೇ ಗ್ರಾಹಕರು ದೂರು ನೀಡಬೇಕು. ದೂರು ನೀಡಿದ 5 ದಿನಗಳೊಳಗೆ ಗ್ರಾಹಕರಿಗೆ ವಂಚನೆಗೀಡಾದ ಹಣವನ್ನು ಮರುಪಾವತಿ ಮಾಡಬೇಕು ಎಂದು ಆರ್ ಬಿಐ ತಿಳಿಸಿದೆ.
ಹಾಗೆಯೇ, ಡಿಜಿಟಲ್ ವಹಿವಾಟಿನಲ್ಲಿ 50 ಸಾವಿರ ರೂಪಾಯಿವರೆಗೆ ಹಣ ಕಳೆದುಕೊಂಡ ಗ್ರಾಹಕರಿಗೆ ವಂಚನೆಗೀಡಾದ ಮೊತ್ತದ ಶೇ.85ರಷ್ಟು ಅಥವಾ ಗರಿಷ್ಠ 25 ಸಾವಿರ ರೂಪಾಯಿವರೆಗೆ ಪರಿಹಾರ ನೀಡಬೇಕು. ಬ್ಯಾಂಕುಗಳೇ ಗ್ರಾಹಕರಿಗೆ ಪರಿಹಾರದ ಹಣವನ್ನು ವಾಪಸ್ ನೀಡಬೇಕು. ಗ್ರಾಹಕರಿಗೆ ಜೀವಮಾನದಲ್ಲಿ ಒಮ್ಮೆ ಇಂತಹ ಪರಿಹಾರ ಪಡೆಯುವ ಅವಕಾಶ ಇರುತ್ತದೆ ಎಂದು ಆರ್ ಬಿಐ ತಿಳಿಸಿದೆ.
ಇದರ ಜತೆಗೆ 500 ರೂಪಾಯಿಗಿಂತ ಹೆಚ್ಚಿನ ಎಲ್ಲ ಡಿಜಿಟಲ್ ವಹಿವಾಟುಗಳಿಗೆ ಬ್ಯಾಂಕುಗಳು ಕಡ್ಡಾಯವಾಗಿ ತಕ್ಷಣವೇ ಎಸ್ಎಂಎಸ್ ಅಲರ್ಟ್ ಕಳುಹಿಸಬೇಕು ಎಂದು ಕೂಡ ತಿಳಿಸಿದೆ. ಡಿಜಿಟಲ್ ಸುರಕ್ಷತೆ ಹಾಗೂ ಪರಿಹಾರದ ದೃಷ್ಟಿಯಿಂದ ಆರ್ ಬಿಐ ಹೊಸ ನಿಯಮಗಳನ್ನು ಘೋಷಣೆ ಮಾಡಿದೆ. ಹೊಸ ನಿಯಮಗಳು 2027ರ ಜನವರಿ 1ರಿಂದ ಜಾರಿಗೆ ಬರಲಿವೆ ಎಂದು ಕೂಡ ಕೇಂದ್ರೀಯ ಬ್ಯಾಂಕ್ ಮಾಹಿತಿ ನೀಡಿದೆ.



















