ಚೆನ್ನೈ : ತಮಿಳುನಾಡಿನ ರಾಜಕೀಯ ಚಿತ್ರಣದಲ್ಲಿ ಕ್ಷಣಕ್ಕೊಂದು ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಸಿ.ವಿ. ಷಣ್ಮುಗಂ ಮತ್ತು ಎಸ್.ಪಿ. ವೇಲುಮಣಿ ನೇತೃತ್ವದ AIADMK ಪಕ್ಷದ ಬಂಡಾಯ ಬಣವು ಇಂದು ತನ್ನ ಅಧಿಕೃತ ಬೆಂಬಲವನ್ನು ಘೋಷಿಸಿದೆ. ಈ ಬಣದ ನಾಯಕರು ಇಂದು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಮುಂದಾಗಿದ್ದು, ಇದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಅವರಿಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ.
ಕಳೆದ ಹತ್ತು ವರ್ಷಗಳಲ್ಲಿ ಎಐಎಡಿಎಂಕೆ ಅನುಭವಿಸಿದ ಸತತ ಸೋಲುಗಳನ್ನು (ಡಿಎಂಕೆ ಎದುರು ಮೂರು ಬಾರಿ ಹಾಗೂ ಇತ್ತೀಚೆಗೆ ಟಿವಿಕೆ ಎದುರು) ಉಲ್ಲೇಖಿಸಿರುವ ಸಿ.ವಿ. ಷಣ್ಮುಗಂ, ಪಕ್ಷದ ನಾಯಕ ಇಪಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟಿವಿಕೆ ಸರ್ಕಾರ ರಚನೆಯನ್ನು ತಡೆಯುವ ಏಕೈಕ ಉದ್ದೇಶದಿಂದ ಬದ್ಧ ವೈರಿ ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳಲು ಇಪಿಎಸ್ ಮುಂದಾಗಿದ್ದನ್ನು ಅವರು ಕಟುವಾಗಿ ಟೀಕಿಸಿದ್ದಾರೆ.
ಡಿಎಂಕೆ ವಿರೋಧಿಸುವ ಸಲುವಾಗಿಯೇ ಹುಟ್ಟಿಕೊಂಡ ಪಕ್ಷ ನಮ್ಮದು. ಕಳೆದ 53 ವರ್ಷಗಳಿಂದ ನಮ್ಮ ರಾಜಕಾರಣ ಡಿಎಂಕೆ ವಿರೋಧಿಯಾಗಿಯೇ ಮುಂದುವರಿದಿದೆ. ಹೀಗಿರುವಾಗ ಡಿಎಂಕೆ ಬೆಂಬಲದೊಂದಿಗೆ ಎಐಎಡಿಎಂಕೆ ಸರ್ಕಾರ ರಚಿಸುವ ಪ್ರಸ್ತಾಪ ಬಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. ಅಂತಹ ಮೈತ್ರಿ ಮಾಡಿಕೊಂಡರೆ ಎಐಎಡಿಎಂಕೆ ಪಕ್ಷಕ್ಕೆ ಅಸ್ತಿತ್ವವೇ ಇರುವುದಿಲ್ಲ ಎಂದು ಷಣ್ಮುಗಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮೈತ್ರಿಗೆ ಗುಡ್ಬೈ
ಪಕ್ಷವನ್ನು ಒಡೆಯುವ ಯಾವುದೇ ಉದ್ದೇಶ ತಮ್ಮ ಬಣಕ್ಕಿಲ್ಲ ಎಂದು ಸ್ಪಷ್ಟಪಡಿಸಿರುವ ಷಣ್ಮುಗಂ ಮತ್ತು ವೇಲುಮಣಿ, ಸದ್ಯ ಯಾವುದೇ ಮೈತ್ರಿಯಿಲ್ಲದೆ ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಹಾಗೂ ಪುನರುಜ್ಜೀವನಗೊಳಿಸುವತ್ತ ಗಮನಹರಿಸುವುದಾಗಿ ತಿಳಿಸಿದ್ದಾರೆ. ಬಹುಮತದೊಂದಿಗೆ ವಿಜಯಶಾಲಿಯಾಗಿ ಹೊರಹೊಮ್ಮಿರುವ ಟಿವಿಕೆ ಪಕ್ಷಕ್ಕೆ ಬೆಂಬಲ ನೀಡಲು ನಾವು ಅಂತಿಮ ನಿರ್ಧಾರ ಕೈಗೊಂಡಿದ್ದೇವೆ ಮತ್ತು ಪಕ್ಷವನ್ನು ಮುನ್ನಡೆಸಲು ಪ್ರಧಾನ ಕಾರ್ಯದರ್ಶಿಯವರ ‘ಸರಿಯಾದ’ ನಿರ್ಧಾರಕ್ಕಾಗಿ ಕಾಯುತ್ತೇವೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, 2026ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸುವ ನಿಟ್ಟಿನಲ್ಲಿ ಇಪಿಎಸ್ ಅವರು ಬಿಜೆಪಿಯೊಂದಿಗೆ ಮಾಡಿಕೊಂಡಿದ್ದ ಮೈತ್ರಿಯನ್ನು ಸಂಪೂರ್ಣವಾಗಿ ಕಡಿದುಕೊಳ್ಳುವ ನಿರ್ಣಯವನ್ನೂ ಈ ಬಂಡಾಯ ಬಣ ಅಂಗೀಕರಿಸಿದೆ.
ಇಪಿಎಸ್ ಪಾಳಯದಲ್ಲಿ ತಳಮಳ
ಬಂಡಾಯ ಬಣದ ಈ ದಿಢೀರ್ ನಡೆಯಿಂದ ಇಪಿಎಸ್ ಪಾಳಯದಲ್ಲಿ ತಳಮಳ ಶುರುವಾಗಿದೆ. ಕೆ.ಪಿ. ಮುನಿಸ್ವಾಮಿ ಮತ್ತು ತಂಬಿದುರೈ ನೇತೃತ್ವದ ಇಪಿಎಸ್ ನಿಷ್ಠಾವಂತ ನಾಯಕರು ತುರ್ತಾಗಿ ಪಳನಿಸ್ವಾಮಿ ಅವರ ನಿವಾಸಕ್ಕೆ ದೌಡಾಯಿಸಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಕಳೆದ ವಾರವಷ್ಟೇ 47 ಶಾಸಕರ ಬಲ ಹೊಂದಿರುವ ಈ ಬಂಡಾಯ ಬಣದ ಕೆಲವು ನಾಯಕರು ಪುದುಚೇರಿಯ ರೆಸಾರ್ಟ್ವೊಂದರಲ್ಲಿ ವಾಸ್ತವ್ಯ ಹೂಡಿ ಟಿವಿಕೆಗೆ ಬೆಂಬಲ ನೀಡುವಂತೆ ಪಟ್ಟು ಹಿಡಿದಿದ್ದರು.
ಒಟ್ಟು 234 ಸ್ಥಾನಗಳ ಪೈಕಿ 108 ಸ್ಥಾನಗಳನ್ನು ಗೆದ್ದಿದ್ದ ಟಿವಿಕೆಗೆ ಬಹುಮತಕ್ಕೆ 10 ಸ್ಥಾನಗಳ ಕೊರತೆಯಿತ್ತು. ಅಂತಿಮವಾಗಿ ಕಾಂಗ್ರೆಸ್ (5), ಎಡಪಕ್ಷಗಳು (4) ಮತ್ತು ವಿಸಿಕೆ (2) ಬೆಂಬಲದೊಂದಿಗೆ ವಿಜಯ್ ಮ್ಯಾಜಿಕ್ ನಂಬರ್ ತಲುಪಿದ್ದರೂ, ಈ ಪಕ್ಷಗಳೆಲ್ಲವೂ ಡಿಎಂಕೆಯ ಹಳೆಯ ಮಿತ್ರಪಕ್ಷಗಳಾಗಿರುವುದರಿಂದ ಭವಿಷ್ಯದಲ್ಲಿ ಸರ್ಕಾರದ ಅಸ್ತಿತ್ವದ ಬಗ್ಗೆ ಅನಿಶ್ಚಿತತೆ ಮನೆಮಾಡಿತ್ತು. ಈ ನಡುವೆ 47 ಶಾಸಕರ ಬಲ ಹೊಂದಿರುವ ಎಐಎಡಿಎಂಕೆ ಬಂಡಾಯ ಬಣದ ಬೆಂಬಲ ಸಿಕ್ಕಿರುವುದು ವಿಜಯ್ ಸರ್ಕಾರಕ್ಕೆ ಆನೆಬಲ ತಂದುಕೊಡಲಿದೆ.
ಇದನ್ನೂ ಓದಿ : ಶ್ರೀಗಂಧ ಕಾವಲು ಹಾಸ್ಟೆಲ್ನಲ್ಲಿ ಮುಂದುವರಿದ ಪುಂಡರ ಅಟ್ಟಹಾಸ – ಅಮಾಯಕ ವಿದ್ಯಾರ್ಥಿಗಳ ರಕ್ಷಣೆ ಯಾರ ಹೊಣೆ?



















