ಬೆಂಗಳೂರು : ಬೆಂಗಳೂರು ಮಹಾನಗರದಲ್ಲಿ ಮಧ್ಯಮ ಹಾಗೂ ಬಡ ಕುಟುಂಬಗಳ ಶುಭ ಸಮಾರಂಭಗಳನ್ನು ಕಡಿಮೆ ವೆಚ್ಚದಲ್ಲಿ ನೆರವೇರಿಸಲು ಅನುಕೂಲವಾಗುವಂತೆ ನಿರ್ಮಿಸಲಾದ ಅ.ನ.ಕೃ. ಕನ್ವೆನ್ಷನ್ ಸೆಂಟರ್ ಮತ್ತು ಡಾ. ಪುನೀತ್ ರಾಜ್ ಕುಮಾರ್ ಸಭಾಂಗಣಗಳನ್ನು ಲೋಕಾರ್ಪಣೆ ಮಾಡಲಾಯಿತು.

ಯಡಿಯೂರು ವಾರ್ಡಿನ ಐತಿಹಾಸಿಕ ಯಡಿಯೂರು ಕೆರೆಯ ಎದುರು ಬೃಹತ್ ಮತ್ತು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಈ ಕಟ್ಟಡಗಳನ್ನು ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾಗಿದೆ. ಈ ಕಾರ್ಯಕ್ರಮಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾಗೂ ಅ.ನ.ಕೃ. ಅವರ ಪುತ್ರ ಗೌತಮ್ ಅವರು ಚಾಲನೆ ನೀಡಿದರು.

ಕಾರ್ಯಕ್ರಮಗಳಿಗಾಗಿ ಅತ್ಯಾಧುನಿಕ ಹವಾನಿಯಂತ್ರಿತ ವ್ಯವಸ್ಥೆ, ರಿಸೆಪ್ಷನ್ ಹಾಲ್, ಭೋಜನಾಲಯ ಮತ್ತು ಕೊಠಡಿಗಳೊಂದಿಗೆ ಕನ್ವೆನ್ಷನ್ ಸೆಂಟರ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಬಾಡಿಗೆ ಸುಮಾರು 70,000 ರೂ. ಆಗಿರುತ್ತದೆ ಎಂದು ತಿಳಿಸಲಾಗಿದೆ.

ಅದೇ ರೀತಿ, 322 ಆಸನ ಸಾಮರ್ಥ್ಯದ ಡಾ. ಪುನೀತ್ ರಾಜ್ ಕುಮಾರ್ ಸಭಾಂಗಣದಲ್ಲಿ ಸಾಂಸ್ಕೃತಿಕ, ರಂಗಭೂಮಿ ಹಾಗೂ ಸಿನಿಮಾ ಸಂಬಂಧಿತ ಕಾರ್ಯಕ್ರಮಗಳನ್ನು ಕೇವಲ 25,000 ರೂ. ಬಾಡಿಗೆಯಲ್ಲಿ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯರು ಸೇರಿದಂತೆ ಹಲವಾರು ಗಣ್ಯರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದ್ದರು.
ಇದನ್ನೂ ಓದಿ : ಸುಹ್ರಾವರ್ದಿ ಅವೆನ್ಯೂ ಮರುನಾಮಕರಣ : ಕೊಲ್ಕತ್ತಾ ದಂಗೆಯ ಇತಿಹಾಸ ಕೆದಕಿದ ಬಿಜೆಪಿ, ತಪ್ಪು ಸರಿಪಡಿಸಿದ ಟಿಎಂಸಿ



















