ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೊಲ್ಕತ್ತಾ ಪ್ರಮುಖ ರಸ್ತೆಯೊಂದರ ಮರುನಾಮಕರಣವು ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ತೃಣಮೂಲ ಕಾಂಗ್ರೆಸ್ (TMC) ನಡುವೆ ಹೊಸ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ನಗರದ ಪ್ರಸಿದ್ಧ ‘ಸುಹ್ರಾವರ್ದಿ ಅವೆನ್ಯೂ’ ರಸ್ತೆಯನ್ನು ‘ಗೋಪಾಲ್ ಮುಖರ್ಜಿ ರಸ್ತೆ’ ಎಂದು ಮರುನಾಮಕರಣ ಮಾಡಲು ಕೋಲ್ಕತ್ತಾ ಮಹಾನಗರ ಪಾಲಿಕೆ (KMC) ನಿರ್ಧರಿಸಿದ್ದು, ಇದು ಇತಿಹಾಸದ ತಪ್ಪು ಕಲ್ಪನೆಗಳು ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ವೇದಿಕೆಯಾಗಿದೆ.
ಐತಿಹಾಸಿಕ ತಪ್ಪಿನ ತಿದ್ದುಪಡಿ ಎಂದ ಸಿಎಂ ಸುವೇಂದು
ಜೂನ್ 20 ರಂದು ಕೋಲ್ಕತ್ತಾ ಮಹಾನಗರ ಪಾಲಿಕೆಯು ಹೊರಡಿಸಿದ ಅಧಿಸೂಚನೆಯಲ್ಲಿ ಸುಹ್ರಾವರ್ದಿ ಅವೆನ್ಯೂ ಹೆಸರನ್ನು ಗೋಪಾಲ್ ಮುಖರ್ಜಿ ರಸ್ತೆ ಎಂದು ಬದಲಾಯಿಸಲಾಗಿದೆ. ಈ ನಿರ್ಧಾರವನ್ನು ಶ್ಲಾಘಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಇದು “ಐತಿಹಾಸಿಕ ತಪ್ಪನ್ನು ತಿದ್ದುವ ನಡೆ” ಎಂದು ಬಣ್ಣಿಸಿದ್ದಾರೆ. ಈ ಹಿಂದೆ ಅಧಿಕಾರ ದುರುಪಯೋಗಪಡಿಸಿಕೊಂಡು ಮುಗ್ಧ ನಾಗರಿಕರ ನರಮೇಧಕ್ಕೆ ಕಾರಣರಾದವರ ಹೆಸರನ್ನು ರಸ್ತೆಗೆ ಇಡಲಾಗಿತ್ತು ಎಂದು ಅವರು ಪರೋಕ್ಷವಾಗಿ ಕಲ್ಕತ್ತಾ ದಂಗೆಯ ಸೂತ್ರಧಾರ ಹುಸೇನ್ ಶಾಹಿದ್ ಸುಹ್ರಾವರ್ದಿಯನ್ನು ಉಲ್ಲೇಖಿಸಿ ಟೀಕಿಸಿದ್ದಾರೆ. ಅಲ್ಲದೆ, ದಂಗೆಯ ಸಮಯದಲ್ಲಿ ಸಾವಿರಾರು ಹಿಂದೂಗಳ ಜೀವ ರಕ್ಷಿಸಿದ ಧೀರ ಗೋಪಾಲ್ ಮುಖರ್ಜಿ ಅವರ ಹೆಸರನ್ನು ಈ ರಸ್ತೆಗೆ ಇಡುವ ಮೂಲಕ ಬಂಗಾಳದ ನಿಜವಾದ ನಾಯಕನಿಗೆ ಗೌರವ ಸಲ್ಲಿಸಲಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇತಿಹಾಸದ ಪಾಠ ನೆನಪಿಸಿದ ತೃಣಮೂಲ ಕಾಂಗ್ರೆಸ್
ಬಿಜೆಪಿಯ ಈ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ರಸ್ತೆಯ ಮರುನಾಮಕರಣವನ್ನು ವಿರೋಧಿಸದಿದ್ದರೂ, ಬಿಜೆಪಿ ನಾಯಕರು ಇತಿಹಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ತಿರುಗೇಟು ನೀಡಿದ್ದಾರೆ. ಕೋಲ್ಕತ್ತಾದ ಈ ರಸ್ತೆಗೆ ಕಲ್ಕತ್ತಾ ದಂಗೆಯ ರೂವಾರಿ ಹುಸೇನ್ ಶಾಹಿದ್ ಸುಹ್ರಾವರ್ದಿಯ ಹೆಸರನ್ನು ಇಟ್ಟಿರಲಿಲ್ಲ. ಬದಲಿಗೆ, ಕಲ್ಕತ್ತಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಹಾಗೂ ಪ್ರಖ್ಯಾತ ವೈದ್ಯರಾಗಿದ್ದ ಡಾ. ಸರ್ ಹಸನ್ ಸುಹ್ರಾವರ್ದಿ ಅವರ ನೆನಪಿನಲ್ಲಿ 1933ರಲ್ಲೇ (ದಂಗೆಗೂ ಮುನ್ನವೇ) ಈ ರಸ್ತೆಗೆ ಹೆಸರಿಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದಂಗೆಗೆ ಕಾರಣನಾದ ಹುಸೇನ್ ಶಾಹಿದ್ ಸುಹ್ರಾವರ್ದಿ, ಡಾ. ಹಸನ್ ಅವರ ಸೋದರ ಅಳಿಯನಾಗಿದ್ದು, ಸೋದರ ಅಳಿಯನ ತಪ್ಪಿಗೆ ಚಿಕ್ಕಪ್ಪನಿಗೆ ಶಿಕ್ಷೆ ನೀಡುವುದು ದುರದೃಷ್ಟಕರ ಎಂದು ಘೋಷ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಬ್ಬರು ಸುಹ್ರಾವರ್ದಿಗಳು ಮತ್ತು ಗೋಪಾಲ್ ಯಾರು?
ಇತಿಹಾಸದ ಪುಟಗಳನ್ನು ತಿರುವಿದರೆ ಈ ವಿವಾದದ ಹಿನ್ನೆಲೆ ಸ್ಪಷ್ಟವಾಗುತ್ತದೆ. ಲೆಫ್ಟಿನೆಂಟ್ ಕರ್ನಲ್ ಸರ್ ಹಸನ್ ಸುಹ್ರಾವರ್ದಿ ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಮೊದಲ ಮುಸ್ಲಿಂ ಉಪಕುಲಪತಿಯಾಗಿದ್ದರು ಮತ್ತು ಬ್ರಿಟಿಷ್ ಸರ್ಕಾರದಿಂದ ನೈಟ್ಹುಡ್ ಗೌರವ ಪಡೆದ ಪ್ರಮುಖ ಶಿಕ್ಷಣ ತಜ್ಞರಾಗಿದ್ದರು. ಆದರೆ, ಅವರ ಸೋದರ ಅಳಿಯ ಹುಸೇನ್ ಶಾಹಿದ್ ಸುಹ್ರಾವರ್ದಿ 1946-47ರ ಅವಧಿಯಲ್ಲಿ ಬಂಗಾಳದ ಪ್ರಧಾನಿಯಾಗಿದ್ದಾಗ ನಡೆದ ‘ಡೈರೆಕ್ಟ್ ಆಕ್ಷನ್ ಡೇ’ ಕಲ್ಕತ್ತಾ ದಂಗೆಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಕರೆಯಲ್ಪಟ್ಟವರು. ಬಂಗಾಳದ ಇತಿಹಾಸದಲ್ಲಿ ಅವರನ್ನು ‘ಬಂಗಾಳದ ಕಟುಕ’ ಎಂದೂ ಕರೆಯಲಾಗುತ್ತದೆ.
ಇನ್ನು, ಯಾರ ಹೆಸರನ್ನು ಈಗ ರಸ್ತೆಗೆ ಇಡಲಾಗಿದೆಯೋ ಆ ಗೋಪಾಲ್ ಮುಖರ್ಜಿ (ಗೋಪಾಲ್ ಪಾಠಾ ಎಂದು ಪ್ರಸಿದ್ಧ) ವೃತ್ತಿಯಲ್ಲಿ ಮಾಂಸದ ಅಂಗಡಿ ನಡೆಸುತ್ತಿದ್ದವರಾಗಿದ್ದರು. 1946ರ ಕಲ್ಕತ್ತಾ ನರಮೇಧದ ಸಂದರ್ಭದಲ್ಲಿ ಹುಸೇನ್ ಸುಹ್ರಾವರ್ದಿ ಸರ್ಕಾರದ ದೌರ್ಜನ್ಯದ ವಿರುದ್ಧ ಧೈರ್ಯದಿಂದ ಹೋರಾಡಿ, ಸಾವಿರಾರು ಅಮಾಯಕ ಹಿಂದೂಗಳನ್ನು ರಕ್ಷಿಸಿದ ಕಾರಣಕ್ಕಾಗಿ ಅವರು ಕೋಲ್ಕತ್ತಾದಲ್ಲಿ ಇಂದಿಗೂ ರಕ್ಷಕನಾಗಿ ನೆನಪಿಸಿಕೊಳ್ಳಲ್ಪಡುತ್ತಾರೆ.
ಒಟ್ಟಾರೆಯಾಗಿ, ಒಂದೇ ಉಪನಾಮ ಹೊಂದಿರುವ ಇಬ್ಬರು ವ್ಯಕ್ತಿಗಳ ನಡುವಿನ ವ್ಯತ್ಯಾಸವನ್ನು ಗುರುತಿಸದ ರಾಜಕೀಯ ಮೇಲಾಟ, ಈಗ ಕೋಲ್ಕತ್ತಾದ ರಸ್ತೆ ಹೆಸರಿನ ಬದಲಾವಣೆಯ ಸುತ್ತ ದೊಡ್ಡ ವಿವಾದವನ್ನು ಸೃಷ್ಟಿಸಿದೆ.



















