ಬೆಂಗಳೂರು : ನಗರದ ಬಹು ನಿರೀಕ್ಷಿತ ಹೆಬ್ಬಾಳ ಜಂಕ್ಷನ್–ಮೇಖ್ರಿ ಸರ್ಕಲ್ ನಡುವಿನ ಮಿನಿ ಸುರಂಗ ಮಾರ್ಗದ ಕಾಮಗಾರಿಗೆ ಚಾಲನೆ ದೊರೆತಿದ್ದು, ಈ ಮೂಲಕ ಬೆಂಗಳೂರಿನ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಕಲ್ಪಿಸುವ ಮತ್ತೊಂದು ಮಹತ್ವದ ಯೋಜನೆ ಆರಂಭಗೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನೇತೃತ್ವದಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಸುರಂಗ ಮಾರ್ಗ ಇದಾಗಿದ್ದು, ಹೆಬ್ಬಾಳ ಜಂಕ್ಷನ್ನಿಂದ ಮೇಖ್ರಿ ಸರ್ಕಲ್ವರೆಗೆ ಸುಮಾರು 2.2 ಕಿ.ಮೀ ಉದ್ದದ ಆರು ಪಥದ ಮಿನಿ ಟನಲ್ ನಿರ್ಮಾಣವಾಗಲಿದೆ.
ಸುಮಾರು 1,139 ಕೋಟಿ ವೆಚ್ಚದಲ್ಲಿ ಕಟ್ ಆ್ಯಂಡ್ ಕವರ್ ಮಾದರಿಯಲ್ಲಿ ಈ ಜೋಡಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಕಾಮಗಾರಿಯನ್ನು ಸುಮಾರು 18 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಏರ್ಪೋರ್ಟ್ ಮಾರ್ಗಕ್ಕೆ ಸಿಗ್ನಲ್ ಫ್ರೀ ಸಂಪರ್ಕ
ಸುರಂಗ ಮಾರ್ಗ ಪೂರ್ಣಗೊಂಡ ಬಳಿಕ ಮೇಖ್ರಿ ಸರ್ಕಲ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಸಂಚರಿಸುವ ವಾಹನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ ದೊರೆಯಲಿದೆ. ಇದರಿಂದ ಪ್ರಮುಖವಾಗಿ ಹೆಬ್ಬಾಳ ಜಂಕ್ಷನ್ನಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.
ಪ್ರಸ್ತುತ ಹೆಬ್ಬಾಳ ಜಂಕ್ಷನ್ ನಗರದ ಪ್ರಮುಖ ಪ್ರವೇಶ ಮತ್ತು ನಿರ್ಗಮನ ಮಾರ್ಗವಾಗಿರುವುದರಿಂದ, ಪೀಕ್ ಅವಧಿಯಲ್ಲಿ ಇಲ್ಲಿ ಉಂಟಾಗುವ ಸಂಚಾರ ದಟ್ಟಣೆ ವಾಹನ ಸವಾರರಿಗೆ ದೊಡ್ಡ ಸಮಸ್ಯೆಯಾಗಿದೆ. ಹೊಸ ಸುರಂಗ ಮಾರ್ಗವು ಮೇಲ್ಮೈ ರಸ್ತೆಯ ಮೇಲಿನ ವಾಹನ ಒತ್ತಡವನ್ನು ತಗ್ಗಿಸುವ ಮೂಲಕ ಸಂಚಾರ ನಿರ್ವಹಣೆಗೆ ನೆರವಾಗಲಿದೆ.
ಕಾಮಗಾರಿ ಪೂರ್ಣಗೊಂಡರೆ ಏನು ಲಾಭ?
ಹೆಬ್ಬಾಳ-ಮೇಖ್ರಿ ಸರ್ಕಲ್ ನಡುವಿನ ಜೋಡಿ ಸುರಂಗ ಮಾರ್ಗದಿಂದ ಏರ್ಪೋರ್ಟ್ ಸಂಪರ್ಕ ಮಾತ್ರವಲ್ಲದೆ, ಉತ್ತರ ಬೆಂಗಳೂರಿನಿಂದ ನಗರದ ಕೇಂದ್ರ ಭಾಗದತ್ತ ಸಂಚರಿಸುವ ವಾಹನಗಳಿಗೂ ಅನುಕೂಲವಾಗಲಿದೆ. ಪ್ರಮುಖ ಜಂಕ್ಷನ್ಗಳಲ್ಲಿ ಸಿಗ್ನಲ್ಗಾಗಿ ಕಾಯುವ ಸಮಯ ಕಡಿಮೆಯಾಗುವುದರಿಂದ ಪ್ರಯಾಣದ ಅವಧಿ ತಗ್ಗುವ ಸಾಧ್ಯತೆಯಿದೆ.
ನಗರದ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸುರಂಗ ಮಾರ್ಗಗಳು, ಮೇಲ್ಸೇತುವೆಗಳು ಮತ್ತು ಇತರ ಪರ್ಯಾಯ ರಸ್ತೆ ಸಂಪರ್ಕಗಳಿಗೆ ಒತ್ತು ನೀಡಲಾಗುತ್ತಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ಹೆಬ್ಬಾಳ ಜಂಕ್ಷನ್ನ ಟ್ರಾಫಿಕ್ ಸಮಸ್ಯೆಗೆ ಮತ್ತಷ್ಟು ಮುಕ್ತಿ ಸಿಗುವ ನಿರೀಕ್ಷೆ ಇದೆ. 18 ತಿಂಗಳ ಗಡುವಿನೊಳಗೆ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾದರೆ, ಉತ್ತರ ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಕಾಣುವ ಸಾಧ್ಯತೆಯಿದೆ.
ಇದನ್ನೂ ಓದಿ : ತಮಿಳುನಾಡಿನ ಜನರ ಹಿತಕ್ಕಾಗಿ ಅವಮಾನ ಸಹಿಸಲೂ ಸಿದ್ಧ : ವಿಜಯ್-ಉದಯನಿಧಿ ನಡುವೆ ಜಟಾಪಟಿ!


















