ಬೈಂದೂರು : ಬೈಂದೂರಿನ ಕೊಡುಗೈ ದಾನಿ ಹಲಸಿನಕಟ್ಟೆಮನೆ ದಿ.ಗುಲಾಬಿ ನಾರಾಯಣ ಶೆಟ್ಟಿ ಸ್ಮರಣಾರ್ಥ ಹೆಚ್. ಜಯಶೀಲ ಶೆಟ್ಟಿ ಘಟಪ್ರಭ ಸರ್ಕಾರಿ ಶಾಲೆಗಳಿಗೆ ಕೊಡುಗೆಯಾಗಿ 5 ಮಿನಿ ಬಸ್ ಮತ್ತು ಒಂದು ಆಂಬ್ಯುಲೆನ್ಸ್ ನೀಡಿದ್ದು, ಇದರ ಹಸ್ತಾಂತರ ಕಾರ್ಯಕ್ರಮ ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ.11ರಂದು ನಡೆಯಿತು.
ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಗೌರವಾಧ್ಯಕ್ಷ ಹೆಚ್ ಜಯಶೀಲ ಶೆಟ್ಟಿ ಘಟಪ್ರಭ ಅವರು 5 ಸರ್ಕಾರಿ ಶಾಲೆಗಳಿಗೆ ಮಿನಿ ಬಸ್ ಹಸ್ತಾಂತರಿಸಿ ಮಾತನಾಡಿ, ದೇವಸ್ಥಾನದ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಹ ನೀಡುವುದರಿಂದ ಸಮಾಜದ ಬದಲಾವಣೆಯ ಜತೆಗೆ ಗ್ರಾಮದ ಅಭಿವೃದ್ಧಿಯು ಸಾಧ್ಯವಾಗುತ್ತದೆ ಎಂದು ಇನ್ನು ಅನೇಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸುವ ಇಚ್ಛೆ ಇದೆ ಎಂದರು.

ಶಿಕ್ಷಕ ನಾರಾಯಣ ದೇವಾಡಿಗ ಎಲ್ಲ ಶಾಲೆಗಳ ಪರವಾಗಿ ಮಾತನಾಡಿ, ಕಾಲಕ್ಕೆ ತಕ್ಕಂತೆ ಸರ್ಕಾರಿ ಶಾಲೆಗಳು ವಿವಿಧ ಸೌಲಭ್ಯಗಳನ್ನು ಹೊಂದುವುದು ಇಂದಿನ ಅಗತ್ಯ, ಇದಕ್ಕೆ ದಾನಿಗಳ ಸಹಕಾರ ಅಮೂಲ್ಯವಾಗಿದೆ. ಜಯಶೀಲ ಶೆಟ್ಟಿ ಅವರು ನೀಡಿರುವ ವಾಹನದ ಸೌಲಭ್ಯದಿಂದಾಗಿ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಹ ನೀಡಿದಂತಾಗಿದೆ. ಊರಿನ ಜನರಲ್ಲಿ ಹೊಸ ಭರವಸೆ ಮೂಡುವುದರಿಂದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತದೆ ಎಂದರು.

ಡಾ| ಅಂತುಲ್ ಶೆಟ್ಟಿ ಮಾತನಾಡಿ, ಹೆಚ್. ಜಯಶೀಲ ಶೆಟ್ಟಿಯವರ ಸಾಮಾಜಿಕ ಚಿಂತನೆ ಸಮಾಜಕ್ಕೆ ಮಾದರಿಯಾಗಿ ಗುರುತಿಸಿಕೊಂಡಿದೆ. ತನ್ನ ಊರಿನ ಕಾಳಜಿಯ ಜತೆಗೆ ದೇವಸ್ಥಾನದ ಅಭಿವೃದ್ಧಿಗೊಳಿಸಿರುವುದು, ಸರಕಾರಿ ಶಾಲೆಗಳ ಉಳುವಿಗೆ ಹಾಗೂ ಗ್ರಾಮೀಣ ಪ್ರದೇಶಗಳ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸುಧಾಕರ ಶೆಟ್ಟಿ, ಕಾಲ್ತೋಡು ಗ್ರಾ.ಪಂ. ಮಾಜಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಭಟ್ನಾಡಿ, ಜಯಶೀಲ ಶೆಟ್ಟಿ, ಕಿರಣ ಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ, ಕಂಬದಕೋಣೆ ಗ್ರಾ.ಪಂ.ಮಾಜಿ ಅಧ್ಯಕ್ಷ ಸುಕೇಶ ಶೆಟ್ಟಿ, ಹೇರೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
5 ಮಿನಿ ಬಸ್, ಆಂಬ್ಯುಲೆನ್ಸ್ ಕೊಡುಗೆ
ಆಜ್ರಿಹರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸ್ಕುತ್ತೂರು ಸರ್ಕಾರಿ ಪ್ರೌಢ ಶಾಲೆ, ಚಪ್ಪರಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೇರೂರು (ಯರುಕೋಣೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಗಿಹಕ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಿನಿ ಬಸ್ನ್ನು ಹಸ್ತಾಂತರಿಸಲಾಯಿತು. ಜೊತೆಗೆ ಸಿದ್ಧಾಪುರ ಬ್ರಾಹ್ಮಿ ಯುವಕ ಮಂಡಲಕ್ಕೆ ಮಿನಿ ಆಂಬುಲೆನ್ಸ್ ಕೊಡುಗೆಯಾಗಿ ನೀಡಲಾಯಿತು.


















