ಮುಂಬೈ : ಐಪಿಎಲ್ 2026ರ (IPL 2026) ಟೂರ್ನಿಯಲ್ಲಿ ಹೀನಾಯ ಪ್ರದರ್ಶನ ನೀಡುತ್ತಿರುವ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ಭಾರತದ ಹಿರಿಯ ವೇಗದ ಬೌಲರ್ ಉಮೇಶ್ ಯಾದವ್ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ ಕೇವಲ ಎರಡರಲ್ಲಷ್ಟೇ ಜಯಭೇರಿ ಬಾರಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿರುವ ಮುಂಬೈ ಪಡೆಯ ವೈಫಲ್ಯಕ್ಕೆ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಮೇಲಿನ ಅತಿಯಾದ ಅವಲಂಬನೆಯೇ ಪ್ರಮುಖ ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.
ಕ್ರಿಕೆಟ್ ಎಂಬುದು ತಂಡದ ಆಟ, ಒಬ್ಬನದ್ದಲ್ಲ
ಮುಂಬೈ ತಂಡದ ಪ್ರದರ್ಶನದ ಬಗ್ಗೆ ರೆವ್ಸ್ಪೋರ್ಟ್ಜ್ (RevSportz) ಜೊತೆ ಮಾತನಾಡಿದ ಉಮೇಶ್ ಯಾದವ್, ಕ್ರಿಕೆಟ್ ಒಂದು ತಂಡದ ಆಟವಾಗಿದ್ದು, ಕೇವಲ ಒಬ್ಬ ಬೌಲರ್ನನ್ನು ನಂಬಿಕೊಂಡು ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಎಂದಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರಂತಹ ಶ್ರೇಷ್ಠ ಬೌಲರ್ ಮೇಲೂ ಪಂದ್ಯವನ್ನು ಒಂಟಿಯಾಗಿ ಗೆಲ್ಲಿಸುವ ನಿರೀಕ್ಷೆ ಇಡುವುದು ತಪ್ಪು. ಪಂದ್ಯವೊಂದನ್ನು ಗೆಲ್ಲಬೇಕಾದರೆ ಅಥವಾ ಸೋಲಬೇಕಾದರೆ ಅದು ಇಡೀ ತಂಡದ ಜವಾಬ್ದಾರಿಯಾಗಿರುತ್ತದೆ.
ಕನಿಷ್ಠ 3-4 ಆಟಗಾರರು ಒಟ್ಟಾಗಿ ಉತ್ತಮ ಪ್ರದರ್ಶನ ನೀಡಿದಾಗ ಮಾತ್ರ ಯಶಸ್ಸು ಒಲಿಯುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಬುಮ್ರಾ ಅವರೇ ಎಲ್ಲವನ್ನೂ ಮಾಡಬೇಕು ಎಂಬ ನಿರೀಕ್ಷೆ ತಂಡದಲ್ಲಿದೆ, ಆದರೆ ಎದುರಾಳಿ ಬ್ಯಾಟರ್ಗಳು ಬುಮ್ರಾ ಅವರ ಓವರ್ಗಳನ್ನು ಎಚ್ಚರಿಕೆಯಿಂದ ಆಡಿ, ವಿಕೆಟ್ ನೀಡದೆ ರಕ್ಷಣೆ ಮಾಡಿಕೊಳ್ಳುವ ಮೂಲಕ ಅವರ ಪ್ರಭಾವವನ್ನು ತಗ್ಗಿಸುತ್ತಿದ್ದಾರೆ. ಎಷ್ಟೇ ಶ್ರೇಷ್ಠ ಬೌಲರ್ ಆಗಿದ್ದರೂ ಎಲ್ಲ ಎಸೆತಗಳಲ್ಲೂ ವಿಕೆಟ್ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದನ್ನು ಮುಂಬೈ ಅರ್ಥಮಾಡಿಕೊಳ್ಳಬೇಕು ಎಂದು ಯಾದವ್ ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅಸ್ಥಿರತೆ
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಸಮಸ್ಯೆಯೆಂದರೆ ಕೇವಲ ಬೌಲಿಂಗ್ ಮಾತ್ರವಲ್ಲ, ಬ್ಯಾಟಿಂಗ್ ವಿಭಾಗದ ಅಸ್ಥಿರತೆಯೂ ಹೌದು ಎಂದು ಯಾದವ್ ಬೊಟ್ಟು ಮಾಡಿದ್ದಾರೆ. ತಂಡದಲ್ಲಿ ಆಗಾಗ್ಗೆ ಬದಲಾವಣೆಗಳನ್ನು ಮಾಡುತ್ತಿರುವುದರಿಂದ ಸರಿಯಾದ ಸಂಯೋಜನೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪವರ್ಪ್ಲೇನಲ್ಲಿ ವಿಕೆಟ್ ಕಬಳಿಸಲು ವಿಫಲವಾಗುತ್ತಿರುವುದು ಮತ್ತು ಡೆತ್ ಓವರ್ಗಳಲ್ಲಿ ಎದುರಾಳಿಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗದಿರುವುದು ತಂಡದ ಸೋಲಿಗೆ ಕಾರಣವಾಗುತ್ತಿದೆ. ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಒಬ್ಬ ಆಟಗಾರ ಉತ್ತಮವಾಗಿ ಆಡಿದರೆ, ಉಳಿದವರಿಂದ ಸಾಥ್ ಸಿಗುತ್ತಿಲ್ಲ. ಇದರಿಂದಾಗಿ 200ರಂತಹ ಬೃಹತ್ ಮೊತ್ತವನ್ನು ಬೆನ್ನಟ್ಟುವುದು ತಂಡಕ್ಕೆ ಕಷ್ಟವಾಗುತ್ತಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.
ಬೂಮ್ರಾ ಅವರ ಕಳಪೆ ಫಾರ್ಮ್ ಮತ್ತು ಮುಂಬೈ ಮೇಲಿನ ಒತ್ತಡ
ಐಪಿಎಲ್ 2026ರ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರ ಪ್ರದರ್ಶನ ಕೂಡ ನಿರೀಕ್ಷಿತ ಮಟ್ಟದಲ್ಲಿಲ್ಲ. ಈ ಆವೃತ್ತಿಯ ಮೊದಲ ಐದು ಪಂದ್ಯಗಳಲ್ಲಿ ಬೂಮ್ರಾ ಒಂದೇ ಒಂದು ವಿಕೆಟ್ ಪಡೆಯಲು ವಿಫಲರಾಗಿದ್ದು, ಒಟ್ಟು 7 ಪಂದ್ಯಗಳಿಂದ ಕೇವಲ 2 ವಿಕೆಟ್ ಮಾತ್ರ ಕಬಳಿಸಿದ್ದಾರೆ. ರನ್ ನಿಯಂತ್ರಣದಲ್ಲಿ ಬುಮ್ರಾ ಯಶಸ್ವಿಯಾಗಿದ್ದರೂ, ವಿಕೆಟ್ ಪಡೆಯದಿರುವುದು ಮುಂಬೈ ಪಡೆಯ ಇತರ ಬೌಲರ್ಗಳ ಮೇಲೆ ತೀವ್ರ ಒತ್ತಡ ಹೇರುತ್ತಿದೆ.
ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ನೆಚ್ಚಿಕೊಂಡಿರುವ ಫ್ರಾಂಚೈಸಿಯಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳು ಒಟ್ಟಾಗಿ ಸಂಘಟಿತ ಪ್ರದರ್ಶನ ನೀಡಿದಾಗ ಮಾತ್ರ ತಂಡ ಗೆಲುವಿನ ಹಳಿಗೆ ಮರಳಲು ಸಾಧ್ಯ. ಏಪ್ರಿಲ್ 29ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಮುಂಬೈ ಕಮ್ಬ್ಯಾಕ್ ಮಾಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ : ಬಿಸಿಲಿಗೆ ಬೆಂದಿದ್ದ ಬೆಂಗಳೂರಿಗೆ ತಂಪೆರೆದ ವರುಣ : ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾರ್ಭಟ!


















