ಕೋಲ್ಕತಾ : ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಅವರ ಪತ್ನಿ ಡೋನಾ ಗಂಗೂಲಿ ಅವರಿಗೆ ಜೀವ ಬೆದರಿಕೆ ಕರೆಗಳು ಹಾಗೂ ಪತ್ರಗಳು ಬಂದಿದ್ದು, ಈ ಹೈ-ಪ್ರೊಫೈಲ್ ಕುಟುಂಬದ ಭದ್ರತೆಯ ಬಗ್ಗೆ ತೀವ್ರ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಗಂಗೂಲಿ ಅವರ ಆಪ್ತ ಸಹಾಯಕರು (ಪಿಎ) ಕೋಲ್ಕತ್ತಾದ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ನಿರಂತರವಾಗಿ ಬರುತ್ತಿರುವ ಬೆದರಿಕೆ ಪತ್ರಗಳು
ಗಂಗೂಲಿ ಕುಟುಂಬದ ಮೂಲಗಳ ಪ್ರಕಾರ, ಕಳೆದ ಆರು ತಿಂಗಳಿನಿಂದ ಈ ರೀತಿಯ ಬೆದರಿಕೆ ಪತ್ರಗಳು ಬರುತ್ತಲೇ ಇವೆ. ಆರಂಭದಲ್ಲಿ ಇವುಗಳನ್ನು ಕೇವಲ ಅತಿರೇಕದ ಅಭಿಮಾನಿಗಳು ಅಥವಾ ಅಸಮಾಧಾನಗೊಂಡವರ ಕೃತ್ಯ ಎಂದು ಭಾವಿಸಿ ನಿರ್ಲಕ್ಷಿಸಲಾಗಿತ್ತು. ಆದರೆ, ಇತ್ತೀಚೆಗೆ ಬಂದಿರುವ ಪತ್ರಗಳು ಅತ್ಯಂತ ಆಕ್ರಮಣಕಾರಿ ಭಾಷೆಯಿಂದ ಕೂಡಿದ್ದು, ಗಂಗೂಲಿ ಕುಟುಂಬದ ಆತಂಕವನ್ನು ಹೆಚ್ಚಿಸಿವೆ. ಸೋಮವಾರ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರ ಕಚೇರಿಯಲ್ಲಿ ತೆರೆಯಲಾದ ಪತ್ರವೊಂದು ಸಂಪೂರ್ಣವಾಗಿ ಇಂಗ್ಲಿಷ್ ಭಾಷೆಯಲ್ಲಿದ್ದು, ಕ್ರಿಕೆಟಿಗ ಹಾಗೂ ಅವರ ಕುಟುಂಬವನ್ನು ‘ಮುಗಿಸಿಬಿಡುವ’ ಬಗ್ಗೆ ನೇರ ಎಚ್ಚರಿಕೆಯನ್ನು ನೀಡಲಾಗಿತ್ತು.
ಠಾಕೂರ್ಪುಕೂರ್ ಪೊಲೀಸ್ ಠಾಣೆಯಲ್ಲಿ ದೂರು
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಗಂಗೂಲಿ ಅವರ ಆಪ್ತ ಸಿಬ್ಬಂದಿ ಠಾಕೂರ್ಪುಕೂರ್ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ಸಲ್ಲಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿರುವಂತೆ, “ಕಳೆದ ಕೆಲವು ತಿಂಗಳುಗಳಿಂದ ಅಪರಿಚಿತ ವ್ಯಕ್ತಿಯೊಬ್ಬರಿಂದ ಗಂಗೂಲಿ ಅವರ ವಿರುದ್ಧ ಆಕ್ಷೇಪಾರ್ಹ ಪತ್ರಗಳು ಬರುತ್ತಿದ್ದವು. ಇದು ಕೇವಲ ವೈಯಕ್ತಿಕ ದ್ವೇಷವಿರುವ ವ್ಯಕ್ತಿಯೊಬ್ಬನ ಕೆಲಸ ಎಂದು ನಾವು ಹೆಚ್ಚು ಗಮನ ಹರಿಸಿರಲಿಲ್ಲ. ಆದರೆ ಇಂದು ಸೌರವ್ ಗಂಗೂಲಿ ಮತ್ತು ಡೋನಾ ಗಂಗೂಲಿ ಅವರನ್ನು ಉದ್ದೇಶಿಸಿ ಬರೆದ ಎರಡು ಪತ್ರಗಳು ಬಂದಿವೆ. ಇದರಲ್ಲಿ ಕೇವಲ ನಿಂದನೆ ಮಾತ್ರವಲ್ಲದೆ, ಗಂಗೂಲಿ, ಅವರ ಪತ್ನಿ ಮತ್ತು ಅವರ ಬಳಿ ಕೆಲಸ ಮಾಡುವ ಸಿಬ್ಬಂದಿಯ ಪ್ರಾಣಕ್ಕೂ ಕುತ್ತು ತರುವ ಗಂಭೀರ ಬೆದರಿಕೆಗಳನ್ನು ಹಾಕಲಾಗಿದೆ. ಹೀಗಾಗಿ ತುರ್ತು ಪೊಲೀಸ್ ತನಿಖೆಯ ಅಗತ್ಯವಿದೆ” ಎಂದು ವಿವರಿಸಲಾಗಿದೆ.
ಬೆಲ್ಘಾರಿಯಾ ನಿವಾಸಿ ಅರುಣ್ ಕುಮಾರ್ ಹೆಸರಿನಲ್ಲಿ ಪತ್ರ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಈ ಪತ್ರಗಳನ್ನು ಕೊರಿಯರ್ ಮೂಲಕ ಗಂಗೂಲಿ ಅವರ ನಿವಾಸಕ್ಕೆ ಕಳುಹಿಸಲಾಗಿದೆ. ಪಾರ್ಸೆಲ್ ಮೇಲೆ ಕಳುಹಿಸಿದವರ ಹೆಸರನ್ನು ಬೆಲ್ಘಾರಿಯಾ ನಿವಾಸಿ ‘ಅರುಣ್ ಕುಮಾರ್’ ಎಂದು ನಮೂದಿಸಲಾಗಿದೆ. ಪತ್ರದಲ್ಲಿ ನೀಡಲಾಗಿದ್ದ ಫೋನ್ ಸಂಖ್ಯೆಯನ್ನು ಬೆನ್ನತ್ತಿದಾಗ, ‘ಟ್ರೂಕಾಲರ್’ (Truecaller) ಆ್ಯಪ್ನಲ್ಲಿ ಕೂಡ ಅದೇ ಹೆಸರು ಪತ್ತೆಯಾಗಿದೆ. ಆದರೆ, ನಿಜವಾಗಿಯೂ ಅರುಣ್ ಕುಮಾರ್ ಎಂಬ ವ್ಯಕ್ತಿಯೇ ಈ ಪತ್ರಗಳನ್ನು ಕಳುಹಿಸಿದ್ದಾನೆಯೇ ಅಥವಾ ಮಾಜಿ ನಾಯಕನಿಗೆ ಬೆದರಿಕೆ ಹಾಕಲು ಬೇರೆಯವರು ಈತನ ಗುರುತನ್ನು ಬಳಸಿಕೊಂಡಿದ್ದಾರೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭದ್ರತೆ ಪರಿಶೀಲನೆಗೆ ರಾಜ್ಯ ಸರ್ಕಾರದ ಮುಂದು
ಈ ವಿಷಯವನ್ನು ರಾಜ್ಯ ಸರ್ಕಾರದ ಭದ್ರತಾ ವಿಭಾಗದ ಗಮನಕ್ಕೂ ತರಲಾಗಿದ್ದು, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸೌರವ್ ಗಂಗೂಲಿ ಅವರು ಹೊಂದಿರುವ ಸಾರ್ವಜನಿಕ ವರ್ಚಸ್ಸು ಮತ್ತು ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಸ್ತುತ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಪರಿಶೀಲಿಸಲಾಗುತ್ತಿದೆ. ಅಗತ್ಯಬಿದ್ದರೆ ಹೆಚ್ಚುವರಿ ಭದ್ರತಾ ಪಡೆಯನ್ನು ಒದಗಿಸುವ ಬಗ್ಗೆಯೂ ಇಲಾಖೆ ಚಿಂತನೆ ನಡೆಸುತ್ತಿದೆ. ಗಂಗೂಲಿ ಹಾಗೂ ಅವರ ಕುಟುಂಬದ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದನ್ನೂ ಓದಿ : ಟೀಂ ಇಂಡಿಯಾದ ಗಾಯದ ಸಮಸ್ಯೆ ಉಲ್ಬಣ ; BCCI ಕೇಂದ್ರ ಶ್ರೇಷ್ಠತಾ ಸಂಸ್ಥೆಗೆ VVS ಲಕ್ಷ್ಮಣ್ ಸಮರ್ಥನೆ


















