ನವದೆಹಲಿ : ಇರಾನ್ ಮತ್ತು ಅಮೆರಿಕ- ಇಸ್ರೇಲ್ ಯುದ್ಧದಿಂದಾಗಿ ಕಳೆದ ಕೆಲವು ತಿಂಗಳಿಂದ ಮುಚ್ಚಲ್ಪಟ್ಟಿರುವ ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗ ‘ಹೊರ್ಮುಜ್ ಜಲಸಂಧಿ’ (Strait of Hormuz)ಯನ್ನು ಮುಕ್ತಗೊಳಿಸುವ ಸಮಯ ಸಮೀಪಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ರೂಪಿಸಲಾದ ಒಪ್ಪಂದದಂತೆ ಮುಂದಿನ ಶುಕ್ರವಾರ ಜಿನಿವಾದಲ್ಲಿ ಉಭಯ ದೇಶಗಳ ನಡುವೆ ಅಧಿಕೃತ ಸಹಿ ಪ್ರಕ್ರಿಯೆ ನಡೆಯಲಿದೆ. ಈ ಸುದ್ದಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭರವಸೆ ಮೂಡಿಸಿದ್ದು, ಕಚ್ಚಾ ತೈಲದ ಬೆಲೆ ಶೇಕಡಾ 4.55 ರಷ್ಟು ಕುಸಿದು ಪ್ರತಿ ಬ್ಯಾರೆಲ್ಗೆ 83.36 ಡಾಲರ್ಗೆ ತಲುಪಿದೆ. ಆದರೆ, ಈ ಮಾರ್ಗ ಮುಕ್ತವಾದ ತಕ್ಷಣವೇ ಜಾಗತಿಕ ಆರ್ಥಿಕ ಬಿಕ್ಕಟ್ಟು ಸಂಪೂರ್ಣವಾಗಿ ತಿಳಿಯಾಗುವುದಿಲ್ಲ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.
ಜಾಗತಿಕ ಪೂರೈಕೆ ಜಾಲಕ್ಕೆ ಬಿದ್ದಿರುವ ಹೊಡೆತ
ಫೆಬ್ರವರಿ 28 ರಂದು ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾದ ತಕ್ಷಣ ಕೇವಲ 30 ಕಿಲೋಮೀಟರ್ ಅಗಲದ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿತ್ತು. ಜಗತ್ತಿನ ಒಟ್ಟು ತೈಲ ಸಾಗಣೆಯ ಶೇ.20ರಷ್ಟು ಭಾಗ ಈ ಮಾರ್ಗದ ಮೂಲಕವೇ ಸಾಗುವುದರಿಂದ, ಜಾಗತಿಕವಾಗಿ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಫಿಲಿಪ್ಪೀನ್ಸ್ನಂತಹ ದೇಶಗಳು ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿ ಘೋಷಿಸಿದ್ದರೆ, ಜಪಾನ್ ಮತ್ತು ದಕ್ಷಿಣ ಕೊರಿಯಾ ತಮ್ಮ ತುರ್ತು ಮೀಸಲು ಇಂಧನವನ್ನು ಬಳಸಬೇಕಾಯಿತು. ಇದೀಗ ಜಲಸಂಧಿ ತೆರೆದ ತಕ್ಷಣ ಪರ್ಷಿಯನ್ ಗಲ್ಫ್ನಲ್ಲಿ ಸಿಲುಕಿರುವ ನೂರಾರು ತೈಲ ನೌಕೆಗಳು ಏಷ್ಯಾದ ಬಂದರುಗಳತ್ತ ಮುಖ ಮಾಡಲಿವೆ. ಸೌದಿ ಅರೇಬಿಯಾ, ಇರಾಕ್, ಯುಎಇ ಮತ್ತು ಕತಾರ್ ದೇಶಗಳಿಂದ ತೈಲ ಮಾತ್ರವಲ್ಲದೆ ಗೊಬ್ಬರ ಮತ್ತು ಪ್ಲಾಸ್ಟಿಕ್ ತಯಾರಿಕೆಗೆ ಬಳಸುವ ‘ನಾಫ್ತಾ’ ರಾಸಾಯನಿಕದ ಪೂರೈಕೆಯೂ ಪುನರಾರಂಭಗೊಳ್ಳಬೇಕಿದೆ. ಆದರೆ, ಈಗಾಗಲೇ ರಸಗೊಬ್ಬರ ಕೊರತೆಯಿಂದಾಗಿ ಏಷ್ಯಾದಲ್ಲಿ ಮೇ-ಜುಲೈ ತಿಂಗಳ ಬಿತ್ತನೆ ಹಂಗಾಮಿಗೆ ತೊಂದರೆಯಾಗಿದ್ದು, ಇದರ ಆರ್ಥಿಕ ಪರಿಣಾಮಗಳು ವರ್ಷದ ಕೊನೆಯಲ್ಲಿ ಗೋಚರಿಸಲಿವೆ.
ಸಾಮಾನ್ಯ ಸ್ಥಿತಿಗೆ ಮರಳಲು ಬೇಕು ಕನಿಷ್ಠ ಆರು ತಿಂಗಳು
100 ದಿನಗಳಿಗೂ ಹೆಚ್ಚು ಕಾಲ ನಡೆದ ಯುದ್ಧದ ಪರಿಣಾಮಗಳು ಅಷ್ಟು ಸುಲಭವಾಗಿ ನಿವಾರಣೆಯಾಗುವುದಿಲ್ಲ ಎಂದು ಇಂಧನ ಸಲಹಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಮಾರ್ಚ್ ತಿಂಗಳಲ್ಲಿ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ 100 ಡಾಲರ್ ತಲುಪಿದ್ದರ ಬಿಸಿ ಎಲ್ಎನ್ಜಿ (LNG) ಮಾರುಕಟ್ಟೆಗೆ ತಟ್ಟಲು ಇನ್ನೂ ಮೂರರಿಂದ ಆರು ತಿಂಗಳು ಬೇಕಾಗುತ್ತದೆ. ಹಾಗಾಗಿ, ಈಗ ತೈಲ ಬೆಲೆ ಇಳಿಕೆಯಾದರೂ ಗ್ಯಾಸ್ ಬೆಲೆಗಳು ಇಳಿಕೆಯಾಗಲು ಈ ವರ್ಷದ ಅಂತ್ಯದವರೆಗೆ ಕಾಯಬೇಕಾಗುತ್ತದೆ. ಮತ್ತೊಂದೆಡೆ, ಯುದ್ಧದ ಕಾರಣದಿಂದಾಗಿ ಕತಾರ್, ಸೌದಿ ಅರೇಬಿಯಾ ಮತ್ತು ಕುವೈತ್ ದೇಶಗಳ ತೈಲ ಉತ್ಪಾದನಾ ಘಟಕಗಳಿಗೆ ಹಾನಿಯಾಗಿದ್ದು, ಅವು ಹಳೆಯ ಸಾಮರ್ಥ್ಯಕ್ಕೆ ಮರಳಲು ಕಾಲಾವಕಾಶ ಬೇಕಾಗುತ್ತದೆ. ಸಮುದ್ರದಲ್ಲಿ ಸ್ಫೋಟಕಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯೂ ಬಾಕಿ ಇರುವುದರಿಂದ ಹಡಗು ಯಾನ ಎಂದಿನಂತೆ ಸಾಗಲು ತಿಂಗಳುಗಳೇ ಹಿಡಿಯಲಿದೆ.
ಭಾರತಕ್ಕೆ ಸಿಗಲಿದೆ ಭಾರಿ ನಿರಾಳತೆ
ವಿಶ್ವದ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ದೇಶಗಳಲ್ಲಿ ಒಂದಾದ ಭಾರತಕ್ಕೆ ಹೊರ್ಮುಜ್ ಜಲಸಂಧಿ ತೆರೆಯುತ್ತಿರುವುದು ದೊಡ್ಡ ಸಮಾಧಾನ ತಂದಿದೆ. ಸೌದಿ ಅರೇಬಿಯಾ, ಇರಾಕ್ ಮತ್ತು ಯುಎಇಯಿಂದ ತೈಲ ಪೂರೈಕೆ ಸುಗಮವಾಗುವುದರಿಂದ ಹಡಗು ಸಾರಿಗೆ ವೆಚ್ಚ (Freight Costs) ಮತ್ತು ಇನ್ಶೂರೆನ್ಸ್ ಪ್ರೀಮಿಯಂ ದರಗಳು ಗಣನೀಯವಾಗಿ ಕಡಿಮೆಯಾಗಲಿವೆ. ಕಳೆದ ತ್ರೈಮಾಸಿಕದಲ್ಲಿ ಭಾರತದ ಸರ್ಕಾರಿ ತೈಲ ಕಂಪನಿಗಳು ವರ್ಷ ಪೂರ್ತಿ ಗಳಿಸುವ ಲಾಭದಷ್ಟೇ ನಷ್ಟವನ್ನು ಅನುಭವಿಸಿದ್ದವು. ಕಚ್ಚಾ ತೈಲ ಬೆಲೆ ನಿರಂತರವಾಗಿ ಇಳಿಕೆಯಾದರೆ ಭಾರತದ ಆಮದು ವೆಚ್ಚ ಕಡಿಮೆಯಾಗಿ, ರೂಪಾಯಿ ಮೌಲ್ಯ ಸ್ಥಿರಗೊಳ್ಳಲಿದೆ ಮತ್ತು ಹಣದುಬ್ಬರದ ಒತ್ತಡ ತಗ್ಗಲಿದೆ. ಇದು ಭಾರತದ ವಿಮಾನಯಾನ, ಪೆಟ್ರೋಕೆಮಿಕಲ್ಸ್, ರಸಗೊಬ್ಬರ ಮತ್ತು ಲಾಜಿಸ್ಟಿಕ್ಸ್ ವಲಯಗಳಿಗೆ ಹೊಸ ಚೈತನ್ಯ ನೀಡಲಿದೆ.
ಆದಾಗ್ಯೂ, ಈ ಎಲ್ಲಾ ಸಕಾರಾತ್ಮಕ ಬದಲಾವಣೆಗಳು ಮಧ್ಯಪ್ರಾಚ್ಯದಲ್ಲಿ ರಾಜತಾಂತ್ರಿಕ ಸ್ಥಿರತೆ ಮುಂದುವರಿದರೆ ಮಾತ್ರ ಸಾಧ್ಯ. ಒಂದು ವೇಳೆ ಹಡಗುಗಳ ಸಂಚಾರ ಆರಂಭವಾಗುವ ಮುನ್ನವೇ ಮತ್ತೆ ಸಂಘರ್ಷ ಆರಂಭವಾದರೆ ಜಾಗತಿಕ ಮಾರುಕಟ್ಟೆ ಮತ್ತೆ ಮೊದಲಿನ ಸ್ಥಿತಿಗೆ ತಲುಪುವ ಅಪಾಯವಿದೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸ್ಟ್ಯಾನ್ಫೋರ್ಡ್ ಘಟಿಕೋತ್ಸವ : ಗೂಗಲ್ CEO ಸುಂದರ್ ಪಿಚೈ ಭಾಷಣದ ವೇಳೆ ವಿದ್ಯಾರ್ಥಿಗಳಿಂದ ಸಭಾತ್ಯಾಗ!


















