ಲಂಡನ್: ಭಾರತದ ಬ್ಯಾಂಕುಗಳಿಗೆ ವಂಚಿಸಿ ಪರಾರಿಯಾಗಿರುವ ದೇಶಭ್ರಷ್ಟ ಉದ್ಯಮಿ, ವಜ್ರದ ವ್ಯಾಪಾರಿ ನೀರವ್ ಮೋದಿಗೆ ಬ್ರಿಟನ್ನಲ್ಲಿ ಮತ್ತೊಂದು ಕಾನೂನು ಹಿನ್ನಡೆಯಾಗಿದೆ. ದುಬೈ ಮೂಲದ ತನ್ನ ಸಂಸ್ಥೆಗೆ ಪಡೆದಿದ್ದ ಸಾಲದ ವಿವಾದಕ್ಕೆ ಸಂಬಂಧಿಸಿದಂತೆ ಲಂಡನ್ ಹೈಕೋರ್ಟ್ ಇದೀಗ ಬ್ಯಾಂಕ್ ಆಫ್ ಇಂಡಿಯಾ ಪರವಾಗಿ ತೀರ್ಪು ನೀಡಿದೆ. ಈ ಮೂಲಕ ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಇಂಡಿಯಾ, ನೀರವ್ ಮೋದಿಯಿಂದ 100 ಕೋಟಿ ರೂಪಾಯಿಗೂ ಅಧಿಕ ಹಣವನ್ನು (10.7 ಮಿಲಿಯನ್ ಡಾಲರ್) ವಸೂಲಿ ಮಾಡಲು ಬ್ರಿಟನ್ ನ್ಯಾಯಾಲಯದಿಂದ ಹಸಿರು ನಿಶಾನೆ ಪಡೆದುಕೊಂಡಿದೆ.
ಏನಿದು ಪ್ರಕರಣ?
ಇದು ನೀರವ್ ಮೋದಿಗೆ ಸೇರಿದ ದುಬೈ ಮೂಲದ ‘ಫೈರ್ಸ್ಟಾರ್ ಡೈಮಂಡ್ ಎಫ್ಝಡ್ಇ’ (Firestar Diamond FZE) ಕಂಪನಿಗೆ ಬ್ಯಾಂಕ್ ಆಫ್ ಇಂಡಿಯಾ ನೀಡಿದ್ದ ಸಾಲಕ್ಕೆ ಸಂಬಂಧಿಸಿ ಪ್ರಕರಣವಾಗಿದೆ. ಈ ಸಾಲಕ್ಕೆ ನೀರವ್ ಮೋದಿ ಅವರೇ ವೈಯಕ್ತಿಕ ಭರವಸೆ (ಪರ್ಸನಲ್ ಗ್ಯಾರಂಟಿ) ನೀಡಿದ್ದರು, ಹೀಗಾಗಿ ಬಾಕಿ ಇರುವ ಸಂಪೂರ್ಣ ಮೊತ್ತವನ್ನು ಅವರೇ ಪಾವತಿಸಬೇಕು ಎಂದು ಬ್ಯಾಂಕ್ ನ್ಯಾಯಾಲಯದಲ್ಲಿ ವಾದಿಸಿತ್ತು. ಈ ತೀರ್ಪನ್ನು ವಿರೋಧಿಸಿ ನೀರವ್ ಮೋದಿ ಬ್ರಿಟನ್ ಕೋರ್ಟ್ನಲ್ಲಿ ಕಾನೂನು ಹೋರಾಟ ನಡೆಸಿದ್ದರು. ಈ ವರ್ಷದ ಆರಂಭದಲ್ಲಿ ಅವರು ಸ್ವತಃ ಲಂಡನ್ ನ್ಯಾಯಾಲಯದ ಮುಂದೆ ಹಾಜರಾಗಿ ವಾದ ಮಂಡಿಸಿದ್ದರು. ಆದರೆ, ಬ್ಯಾಂಕಿನ ಕ್ಲೈಮ್ ಸಿಂಧುವಾಗಿದ್ದು, ಕಾನೂನುಬದ್ಧವಾಗಿದೆ ಎಂದು ತೀರ್ಪು ನೀಡಿರುವ ಹೈಕೋರ್ಟ್, ಬ್ಯಾಂಕ್ ಆಫ್ ಇಂಡಿಯಾ ಪರವಾಗಿ ಆದೇಶ ಹೊರಡಿಸಿದೆ.
ನೀರವ್ಗೆ ಸತತ ಸೋಲು
ನೀರವ್ ಮೋದಿಗೆ ಬ್ರಿಟನ್ ನ್ಯಾಯಾಲಯಗಳಲ್ಲಿ ಸತತ ಸೋಲುಗಳು ಎದುರಾಗುತ್ತಿದ್ದು, ಈ ಹೊಸ ತೀರ್ಪು ಆ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ, ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಯ ವಿರುದ್ಧದ ವಿಚಾರಣೆಯನ್ನು ಮರುಪರಿಶೀಲಿಸಬೇಕೆಂಬ ಮೋದಿಯವರ ಮನವಿಯನ್ನು ಲಂಡನ್ ಹೈಕೋರ್ಟ್ ತಿರಸ್ಕರಿಸಿತ್ತು. ಆ ಮೂಲಕ ಅವರನ್ನು ಭಾರತಕ್ಕೆ ಕರೆತರುವ ಹಾದಿ ಸುಗಮವಾಗಿತ್ತು. 2019ರ ಮಾರ್ಚ್ನಲ್ಲಿ ಲಂಡನ್ನಲ್ಲಿ ಬಂಧನಕ್ಕೊಳಗಾದಾಗಿನಿಂದ ನೀರವ್ ಮೋದಿ ಬ್ರಿಟನ್ ಜೈಲಿನಲ್ಲೇ ಇದ್ದು, ಅವರ ಎಲ್ಲಾ ಜಾಮೀನು ಅರ್ಜಿಗಳು ಸತತವಾಗಿ ತಿರಸ್ಕೃತಗೊಳ್ಳುತ್ತಾ ಬಂದಿವೆ.
ʼ
ಪಿಎನ್ಬಿ ಹಗರಣದ ಕರಾಳ ನೆರಳು
ಭಾರತೀಯ ಬ್ಯಾಂಕಿಂಗ್ ವಲಯವನ್ನೇ ಬೆಚ್ಚಿಬೀಳಿಸಿದ್ದ ಕೋಟ್ಯಂತರ ರೂಪಾಯಿಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ನೀರವ್ ಮೋದಿ ಒಬ್ಬರಾಗಿದ್ದಾರೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಇವರ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಗಳನ್ನು ದಾಖಲಿಸಿವೆ. ಭಾರತ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಪರಾರಿಯಾಗಿರುವ ಇಂತಹ ಆರ್ಥಿಕ ಅಪರಾಧಿಗಳು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 58,000 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಜಾಗತಿಕ ಮಟ್ಟದಲ್ಲಿ ಇವರಿಂದ ಹಣ ವಸೂಲಿ ಮಾಡುವ ಪ್ರಕ್ರಿಯೆಗಳು ತೀವ್ರ ಗತಿಯಲ್ಲಿ ಸಾಗುತ್ತಿವೆ.
ಈ ತೀರ್ಪು ಭಾರತೀಯ ಬ್ಯಾಂಕುಗಳಿಗೆ ಏಕೆ ಮುಖ್ಯ?
ಬ್ಯಾಂಕ್ ಆಫ್ ಇಂಡಿಯಾಗೆ ಈ ತೀರ್ಪು ಕೇವಲ ಒಂದು ಸಾಮಾನ್ಯ ಕಾನೂನು ಜಯವಲ್ಲ. ಸಾಲಗಾರರು ದೇಶ ಬಿಟ್ಟು ಓಡಿಹೋಗಿ ವಿದೇಶಗಳಲ್ಲಿ ಆಸ್ತಿ ಸಂಪಾದಿಸಿದರೂ ಸಹ, ಭಾರತೀಯ ಬ್ಯಾಂಕುಗಳು ಅಂತಾರಾಷ್ಟ್ರೀಯ ನ್ಯಾಯಾಲಯಗಳ ಮೂಲಕ ತಮ್ಮ ಹಣವನ್ನು ಯಶಸ್ವಿಯಾಗಿ ವಸೂಲಿ ಮಾಡಬಹುದು ಎಂಬ ಬಲವಾದ ಸಂದೇಶವನ್ನು ಈ ತೀರ್ಪು ನೀಡಿದೆ. ಇತ್ತ ಹಸ್ತಾಂತರ ಪ್ರಕ್ರಿಯೆ ಮತ್ತು ವಂಚನೆ ಪ್ರಕರಣಗಳ ವಿರುದ್ಧ ಹೋರಾಡುತ್ತಿರುವ ನೀರವ್ ಮೋದಿಗೆ ಈ ಆದೇಶವು ಆರ್ಥಿಕವಾಗಿ ಮತ್ತೊಂದು ದೊಡ್ಡ ಹೊಡೆತ ನೀಡಿದೆ.



















