ಉತ್ತರ ಕನ್ನಡ : ಜಿಲ್ಲೆಯ ಭಟ್ಕಳ ತಾಲ್ಲೂಕಿನ ಬೆಳಕೆ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದ್ದು, ಕಾಲೇಜು ಶುಲ್ಕ ಪಾವತಿಸಲು ಇಟ್ಟುಕೊಂಡಿದ್ದ ಹಣ ಸಮಯಕ್ಕೆ ಸರಿಯಾಗಿ ವಾಪಸ್ ಸಿಗದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಬೆಳಕೆ ಗ್ರಾಮದ ಕಂಚಿಕೇರಿ ನಿವಾಸಿ ನಾಗರಾಜ ಲಚ್ಚಯ್ಯ ನಾಯ್ಕ್ ಅವರ ಪುತ್ರಿ ಗಾಯತ್ರಿ (19) ಮೃತ ವಿದ್ಯಾರ್ಥಿನಿಯಾಗಿದ್ದು, ಆಕೆ ದ್ವಿತೀಯ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು.
ಮಾಹಿತಿ ಪ್ರಕಾರ, ಗಾಯತ್ರಿ ಕಾಲೇಜು ಶುಲ್ಕ ಪಾವತಿಗಾಗಿ ತಂದೆ ನೀಡಿದ್ದ ₹10,000 ಹಣವನ್ನು ಪರಿಚಯಸ್ಥನಾದ ಜಾಲಿಯ ಸಂತೋಷ ಮಾಧೇವ ನಾಯ್ಕ್ ಎಂಬಾತನಿಗೆ ತುರ್ತು ಅಗತ್ಯದ ಹಿನ್ನೆಲೆಯಲ್ಲಿ ಹಿಂದಿರುಗಿಸುವ ಷರತ್ತಿನೊಂದಿಗೆ ನೀಡಿದ್ದಳು. ಬಳಿಕ ಕಾಲೇಜು ಶುಲ್ಕ ಪಾವತಿಸುವ ಸಮಯ ಬಂದಾಗ ಗಾಯತ್ರಿ ಹಣವನ್ನು ವಾಪಸ್ ಕೇಳಿದ್ದಳು. ಆದರೆ ಹಣ ಪಡೆದಿದ್ದ ಸಂತೋಷ್ ಹಣವನ್ನು ಹಿಂದಿರುಗಿಸದೆ ಸತಾಯಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಹಣ ವಾಪಸ್ ಸಿಗದ ಕಾರಣ ಗಾಯತ್ರಿಗೆ ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ಪರೀಕ್ಷೆಯ ಹಾಲ್ ಟಿಕೆಟ್ ಕೂಡ ಕೈತಪ್ಪಿದ್ದು, ಇದರಿಂದ ಆಕೆ ತೀವ್ರ ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಿದ್ದಾಳೆ ಎನ್ನಲಾಗಿದೆ. ಈ ಹಿನ್ನೆಲೆ ಮನನೊಂದ ಗಾಯತ್ರಿ ಮನೆಯ ಆವರಣದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿಯ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಈ ಸಂಬಂಧ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಕುರಿತು ತನಿಖೆ ಆರಂಭಿಸಿರುವ ಪೊಲೀಸರು, ಎಲ್ಲಾ ಆಯಾಮಗಳಿಂದ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ : ಮದುವೆ ವಿಚಾರಕ್ಕೆ ಜಗಳ – ಪ್ರಿಯತಮನಿಂದ ಪ್ರೇಯಸಿಯ ಭೀಕರ ಹತ್ಯೆ!


















